Asianet Suvarna News Asianet Suvarna News

ಕುಟುಂಬ ಪಾಲನೆ ಮುಖ್ಯ, ಹಾಗಂತ ಮಹಿಳೆಯೊಬ್ಬಳೇ ಏಕೆ ತ್ಯಾಗ ಮಾಡಬೇಕು? ಜಸ್ಟೀಸ್‌ ನಾಗರತ್ನ ಪ್ರಶ್ನೆ

ಮುಂದಿನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗುವ ಹಾದಿಯಲ್ಲಿರುವ ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿವಿ ನಾಗರತ್ನ, ದೇಶದಲ್ಲಿ ಲಿಂಗ ಸಮಾನತೆ ವಿಚಾರವಾಗಿ ಮಾತನಾಡಿದ್ದಾರೆ.
 

Justice B V Nagarathna asks Shy Should Wife Alone Sacrifice Her Career san
Author
First Published Jan 6, 2024, 8:05 PM IST

ನವದೆಹಲಿ (ಜ.6): ಸುಪ್ರೀಂ ಕೋರ್ಟ್‌ನ ಮೊಟ್ಟಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಎನಿಸಿಕೊಳ್ಳುವ ಹಾದಿಯಲ್ಲಿರುವ ಕರ್ನಾಟಕ ಮೂಲದ ಸುಪ್ರಿಂ ಕೋರ್ಟ್‌ ನ್ಯಾಯಮೂರ್ತಿ ಬಿವಿ ನಾಗರತ್ನ, ದೇಶದಲ್ಲಿ ಚಾಲ್ತಿಯಲ್ಲಿರುವ ಲಿಂಗ ತಾರತಮ್ಯದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಒಂದು ಮಾದರಿ ಬದಲಾವಣೆಯ ತುರ್ತು ಅಗತ್ಯದ ಬಗ್ಗೆ ಮಾತನಾಡಿದ್ದಾರೆ. ದೆಹಲಿಯ ಐಐಸಿಯಲ್ಲಿ ನಡೆದ ಜಸ್ಟಿಸ್ ಸುನಂದಾ ಭಂಡಾರೆ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ ಮಹಿಳಾ ನ್ಯಾಯಾಧೀಶೆಯಾಗಿರುವ ಬಿವಿ ನಾಗರತ್ನ ಲಿಂಗ ತಾರತಮ್ಯದ ಬಗ್ಗೆ ಪ್ರಬಲ ಭಾಷಣ ಮಾಡಿದ್ದಾರೆ. 2027 ರಲ್ಲಿ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗುವ ಹಾದಿಯಲ್ಲಿರುವ ನ್ಯಾಯಮೂರ್ತಿ ನಾಗರತ್ನ ಅವರು ಅಸ್ತಿತ್ವದಲ್ಲಿರುವ ಲಿಂಗ ಪಕ್ಷಪಾತಗಳನ್ನು ಸರಿಪಡಿಸುವ ಅಗತ್ಯದ ಬಗ್ಗೆ ಮಾತನಾಡಿದ್ದು, ವಿಶೇಷವಾಗಿ ವೃತ್ತಿಪರ ಕೆಲಸಗಳಲ್ಲಿ ಮತ್ತು ಮನೆಯ ವಿಚಾರಗಳಲ್ಲಿಯೇ ಈ ಬದಲಾವಣೆಯಾಗಬೇಕು ಎಂದಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ವಿ.ನಾಗರತ್ನ, ಮದುವೆಯಲ್ಲಿರುವ ನಿಷ್ಠುರ ವರ್ತನೆಗಳನ್ನು ಕಿತ್ತುಹಾಕುವ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ ಮತ್ತು ಕುಟುಂಬ ಮತ್ತು ವೈವಾಹಿಕ ಸಂಸ್ಥೆಗಳ ಸಂರಕ್ಷಣೆಗೆ ಒತ್ತಾಯಿಸಿದ್ದಾರೆ.

"ಮಹಿಳೆಯರು ಮತ್ತು ಪುರುಷರು ಇಬ್ಬರೂ ದಾಂಪತ್ಯದ ಪ್ರಮುಖ ಆಧಾರ ಸ್ತಂಭಗಳು ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಬೇಕು. ಕುಟುಂಬವು ಪ್ರಮುಖ ಪಾತ್ರವನ್ನು ವಹಿಸಬೇಕು, ಇಲ್ಲದಿದ್ದರೆ ಕೌಟುಂಬಿಕ ಹಿಂಸಾಚಾರ ಮತ್ತು ದಾಂಪತ್ಯ ದ್ರೋಹವು  ಪ್ರವೃತ್ತಿ ಎನಿಸಿಬಿಡುತ್ತದೆ. ಪುರುಷರು ತಮ್ಮ ನಿರಾಕರಣೆಯ ಮನೋಭಾವವನ್ನು ತ್ಯಜಿಸಬೇಕು.  ಕುಟುಂಬ ಮತ್ತು ಮಹಿಳೆಯರ ಸಂತೋಷ ಮತ್ತು ಯೋಗಕ್ಷೇಮ ಸುಸ್ಥಿರವಾಗಿರಬೇಕು ಮತ್ತು ಎಲ್ಲವನ್ನೂ ಒಳಗೊಳ್ಳುವಂತಿರಬೇಕು. .ಕುಟುಂಬಗಳಲ್ಲಿ ಮಹಿಳೆಯರ ಐಡೆಂಟಿಟಿ ಇಲ್ಲದೇ ಇರುವುದು ಅಂತಿಮವಾಗಿ ದಾಂಪತ್ಯದ ವಿಘಟನೆಗೆ ಕಾರಣವಾಗುತ್ತದೆ .ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಂದು ಕುಟುಂಬವಿರಬೇಕು...ಮದುವೆ ಎನ್ನುವ ಹೆಸರಿನಲ್ಲಿ ಮಹಿಳೆಯರ ಅಧೀನತೆ ಇರಬಾರದು' ಎಂದು ಹೇಳಿದ್ದಾರೆ.

ತಮ್ಮ ಭಾಷಣದಲ್ಲಿ, ನ್ಯಾಯಮೂರ್ತಿ ನಾಗರತ್ನ ಅವರು ಖಾಸಗಿ ವಲಯದಲ್ಲಿ ನೇಮಕಾತಿ ಪ್ರಕ್ರಿಯೆಗಳಲ್ಲಿ ಋತುಚಕ್ರದ ಬಗ್ಗೆ ಕುರಿತಾದ ಪ್ರಶ್ನೆಗಳನ್ನು ಉಲ್ಲೇಖಿಸಿ, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ತಾರತಮ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಖಾಸಗಿ ಕಂಪನಿಗಳಲ್ಲಿ ಉದ್ಯೋಗಕ್ಕೆ ತೆಗೆದುಕೊಳ್ಳುವ ಮುನ್ನ, ನಿಮ್ಮ ಕೊನೆಗೆ ಋತುಚಕ್ರ ಯಾವಾಗ ಆಗಿದೆ ಎನ್ನುವ ಪ್ರಶ್ನೆಗಳನ್ನು ಕೇಳುವ ಹಂತಕ್ಕೆ ಬಂದಿದ್ದೇವೆ. ಆ ಮೂಲಕ ಆಕೆ ಗರ್ಭಿಣಿಯೇ ಅಲ್ಲವೇ ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಇನ್ನು ಹೆರಿಗೆ ರಜೆ ಮುಗಿಸಿ ಕಂಪನಿಗೆ ವಾಪಾಸಾಗುವ ವೇಳೆ ತಾವು ಮಾಡುತ್ತಿದ್ದ ಕೆಲಸವನ್ನು ಬೇರೆಯವರು ಮಾಡುತ್ತಿದ್ದಾರೆ ಎನ್ನುವ ದಿನಗಳನ್ನು ಕಾಣುತ್ತಿದ್ದೇವೆ. ಹಾಗೇನಾದರೂ ಮಕ್ಕಳಿಗೆ ಜನ್ಮ ನೀಡಿದ್ದಲ್ಲಿ ತಮ್ಮ ಕೆಲಸವನ್ನೇ ಕಳೆದುಕೊಳ್ಳುತ್ತಾರೆ. ಇದು ಆಗಬಾರದು. ಕೋರ್ಟ್‌ನ ತೀರ್ಪುಗಳಲ್ಲಿಯೂ ಇದನ್ನು ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಳಗಾವಿ ಗಡಿ ವಿವಾದ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾ.ಬಿವಿ ನಾಗರತ್ನ!

ಮನೆಯೊಳಗಿನ ಆರ್ಥಿಕ ಶೋಷಣೆಯಿಂದ ಮಹಿಳೆಯರನ್ನು ಸಂರಕ್ಷಿಸುವಲ್ಲಿ ಆರ್ಥಿಕ ಸ್ವಾತಂತ್ರ್ಯದ ಪ್ರಮುಖ ಪಾತ್ರವನ್ನು ಉದ್ದೇಶಿಸಿ, ನ್ಯಾಯಮೂರ್ತಿ ನಾಗರತ್ನ ಅವರು ಮಹಿಳೆಯರ ವೃತ್ತಿಪರ ಬೆಳವಣಿಗೆಗೆ ಅಡ್ಡಿಯಾಗುವ ನಿರಂತರ ಸವಾಲುಗಳ ಬಗ್ಗೆ ಟೀಕಿಸಿದರು. ಲಿಂಗ ವೇತನದ ಅಂತರವನ್ನು ಕೊನೆಗಾಣಿಸುವಲ್ಲಿ ನಿಧಾನಗತಿಯ ಪ್ರಗತಿಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ, 2023 ರ ಜಾಗತಿಕ ಲಿಂಗ ಅಂತರ ವರದಿಯು ಪ್ರಸ್ತುತ ದರದಲ್ಲಿ ಸಮಾನತೆಯನ್ನು ಸಾಧಿಸಲು 131 ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಿದ್ದಾರೆ.

ಕನ್ನಡತಿ ಜ| ನಾಗರತ್ನ ಸೇರಿ 9 ಮಂದಿ ಸುಪ್ರೀಂ ಕೋರ್ಟ್ ಜಡ್ಜ್‌ ಆಗಿ ಪ್ರಮಾಣವಚನ!

Follow Us:
Download App:
  • android
  • ios