ಜಾರ್ಖಂಡ್ನ ಕುಸುಂಭಾ ಗ್ರಾಮದಲ್ಲಿ, ಮಗನ ಅನಾರೋಗ್ಯ ಗುಣಪಡಿಸಲು ತಾಯಿಯೊಬ್ಬಳು ಮಾಟಗಾರ್ತಿಯ ಮಾತಿಗೆ ಕಟ್ಟುಬಿದ್ದು ತನ್ನ ಹದಿಹರೆಯದ ಮಗಳನ್ನೇ ಬಲಿ ಕೊಟ್ಟಿದ್ದಾಳೆ. ಈ ಘೋರ ಕೃತ್ಯಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆಯ ತಾಯಿ, ಮಾಟಗಾರ್ತಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ನ ಕುಸುಂಭಾ ಗ್ರಾಮದಲ್ಲಿ ನಡೆದ ಬಲಿ ಪೂಜೆಯೊಂದರಲ್ಲಿ ಚಿಕ್ಕ ಬಾಲಕಿಯನ್ನು ಹೆತ್ತ ತಾಯಿಯೇ ಬಲಿ ಕೊಟ್ಟ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕೆಯ 35 ವರ್ಷದ ತಾಯಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ತಡರಾತ್ರಿ ಅಧಿಕಾರಿಗಳು ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳು ಸಂತ್ರಸ್ತೆಯ ತಾಯಿ ರೇಷ್ಮಿ ದೇವಿ, 55 ವರ್ಷದ ಮಾಟಗಾರ್ತಿ ಶಾಂತಿ ದೇವಿ ಮತ್ತು 40 ವರ್ಷದ ಭೀಮ್ ರಾಮ್ ಎಂದು ಗುರುತಿಸಲಾಗಿದೆ.
ಹಜಾರಿಬಾಗ್ ಎಸ್ಪಿ ಅಂಜನಿ ಅಂಜನ್ ಮತ್ತು ಡಿಐಜಿ ಅಂಜನಿ ಝಾ ಅವರ ಈ ಪ್ರಕರಣದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ರೇಷ್ಮಿ ದೇವಿಯ ಕಿರಿಯ ಮಗ ದೈಹಿಕ ಮತ್ತು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ. ಆತನ ಚಿಕಿತ್ಸೆಗಾಗಿ ರೇಷ್ಮಿ ದೇವಿ ಸ್ಥಳೀಯ ತಾಂತ್ರಿಕಳೊಬ್ಬಳನ್ನು ಭೇಟಿಯಾಗುತ್ತಿದ್ದಳು. ಕನ್ಯೆಯೊಬ್ಬಳನ್ನು ಬಲಿ ಕೊಟ್ಟರೆ ನಿನ್ನ ಮಗ ಗುಣಮುಖನಾಗುತ್ತಾನೆ ಎಂದು ಆ ಮಾಟಗಾರ್ತಿ ಹೇಳಿದ್ದಳಂತೆ
ಹಬ್ಬದ ರಾತ್ರಿಯೇ ನಡೆದ ಪೂಜೆ
ಪೊಲೀಸರ ಪ್ರಕಾರ, ಮಾರ್ಚ್ 24 ರಂದು, ಊರಿನವರೆಲ್ಲಾ ರಾಮ ನವಮಿ ಹಬ್ಬದ ಸಂಭ್ರಮದಲ್ಲಿದ್ದಾಗ, ಅಷ್ಟಮಿ ರಾತ್ರಿಯಂದು ಈ ಕೊಲೆ ನಡೆದಿದೆ. ಅಂದು ಬಾಲಕಿಯನ್ನು ಶಾಂತಿ ದೇವಿಯ ಮನೆಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆಯ ತಾಯಿ ಮತ್ತು ಭೀಮ್ ರಾಮ್ ಸೇರಿ ಕತ್ತು ಹಿಸುಕಿ ಕೊಂದಿದ್ದಾರೆ. ನಂತರ ಮಾಟಗಾರ್ತಿ ಶಾಂತಿ ದೇವಿ, ಬಾಲಕಿಯ ಖಾಸಗಿ ಭಾಗಕ್ಕೆ ಮರದ ಕೋಲನ್ನು ತುರುಕಿದ್ದಾಳೆ. ಪೂಜೆಗಾಗಿ ರಕ್ತ ಬೇಕೆಂದು ಭೀಮ್ ರಾಮ್ ಬಾಲಕಿಯ ತಲೆಗೆ ಹೊಡೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ಮೂವರೂ ಸೇರಿ ಶವವನ್ನು ತೋಟವೊಂದರಲ್ಲಿ ಹೂತು ಹಾಕಿದ್ದಾರೆ. ಆರಂಭದಲ್ಲಿ, ಆರೋಪಿಗಳು ಬಾಲಕಿಯ ಮೇಲೆ ಅತ್ಯಾ೧ಚಾರ ನಡೆದಿದೆ ಎಂದು ಹೇಳಿ ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಗಳಲ್ಲಿ ಲೈಂಗಿಕ ದೌರ್ಜನ್ಯದ ಯಾವುದೇ ಕುರುಹು ಪತ್ತೆಯಾಗಿಲ್ಲ.
ಭೀಮ್ ರಾಮ್ ತನ್ನ ಅತ್ತಿಗೆಯ ಕೊಲೆ ಸೇರಿದಂತೆ ಇನ್ನೂ ಎರಡು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೋರ್ಟ್ ಮತ್ತು ರಾಜಕೀಯ ಪ್ರತಿಕ್ರಿಯೆ
ಮಾಧ್ಯಮ ವರದಿಗಳನ್ನು ಗಮನಿಸಿದ ಜಾರ್ಖಂಡ್ ಹೈಕೋರ್ಟ್, ಸೋಮವಾರ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ. ನ್ಯಾಯಮೂರ್ತಿ ಸುಜಿತ್ ನಾರಾಯಣ್ ಪ್ರಸಾದ್ ಮತ್ತು ನ್ಯಾಯಮೂರ್ತಿ ಸಂಜಯ್ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ, ರಾಜ್ಯ ಆಡಳಿತ ಮತ್ತು ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದೆ.
ಇದಕ್ಕೂ ಮುನ್ನ, ಸಂತ್ರಸ್ತೆಯ ತಾಯಿ ತನ್ನ ಮಗಳನ್ನು ಯಾರೋ ಅಪಹರಿಸಿದ್ದಾರೆ ಎಂದು ನಾಟಕವಾಡಿದ್ದಳು. ಮಾರ್ಚ್ 25 ರಂದು ಗ್ರಾಮದ ಹೊಲವೊಂದರಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು.
ಈ ಘಟನೆ ರಾಜಕೀಯ ಪ್ರತಿಭಟನೆಗೂ ಕಾರಣವಾಗಿದೆ. ನ್ಯಾಯ ಮತ್ತು ರಾಜ್ಯ ಸರ್ಕಾರದ ಹೊಣೆಗಾರಿಕೆಯನ್ನು ಒತ್ತಾಯಿಸಿ ವಿರೋಧ ಪಕ್ಷವಾದ ಬಿಜೆಪಿ, ಸೋಮವಾರ ಹಜಾರಿಬಾಗ್ನಲ್ಲಿ 12 ಗಂಟೆಗಳ ಬಂದ್ಗೆ ಕರೆ ನೀಡಿತ್ತು.


