ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ.) ಬಂಧಿತರಾಗಿದ್ದ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ಗೆ ಸ್ಥಳೀಯ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ.) ಬಂಧಿತರಾಗಿದ್ದ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ಗೆ ಸ್ಥಳೀಯ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಇದರಿಂದಾಗಿ 5 ತಿಂಗಳ ನಂತರ ಸೊರೇನ್‌ ಬಂಧಮುಕ್ತರಾದಂತಾಗಿದೆ. ಸೊರೇನ್‌ ಅವರ ಜಾಮೀನು ಅರ್ಜಿಯ ಆದೇಶವನ್ನು ಹೈಕೋರ್ಟ್ ಜೂನ್ 13ರಂದು ಕಾಯ್ದಿರಿಸಿತ್ತು. ಈಗ ತೀರ್ಪು ಪ್ರಕಟಿಸಿದೆ. ವಿಪಕ್ಷಗಳು ಜಾಮೀನು ಆದೇಶದ ಬಗ್ಗೆ ಹರ್ಷ ವ್ಯಕ್ತಪಡಿಸಿವೆ. ಜಾರ್ಖಂಡ್‌ನಲ್ಲಿ ಸೊರೇನ್‌ ಬೆಂಬಲಿಗರು ಸಂಭ್ರಮಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಹೇಳಿಕೆ ನೀಡಿರುವ ಸೋರೆನ್ ಅವರ ಹಿರಿಯ ವಕೀಲ ಅರುಣಾಭ್ ಚೌಧರಿ, ‘ನ್ಯಾಯಾಲಯವು ಮೇಲ್ನೋಟಕ್ಕೆ ಸೊರೇನ್‌ ಅವರು ಅಪರಾಧದಲ್ಲಿ ತಪ್ಪಿತಸ್ಥರಲ್ಲ ಎಂದು ಮನಗಂಡಿದೆ ಮತ್ತು ಜಾಮೀನಿನ ಮೇಲೆ ಬಿಡುಗಡೆ ಆದಾಗ ಅವರು ಅಪರಾಧ ಮಾಡುವ ಸಾಧ್ಯತೆಯಿಲ್ಲ ಎಂದು ಅಭಿಪ್ರಾಯಪಟ್ಟಿದೆ’ ಎಂದಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಸೊರೇನ್‌ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇ,ಡಿ. ಜ.31ರಂದು ಬಂಧಿಸಿತ್ತು. ಹೀಗಾಗಿ ಅಂದೇ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಅಗ್ನಿಪರೀಕ್ಷೆ ಗೆದ್ದ ಜಾರ್ಖಂಡ್‌ ಸರ್ಕಾರ: ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಹೇಮಂತ್ ಸೊರೇನ್

‘ಸೊರೇನ್‌ ಅವರು ರಾಜ್ಯದ ರಾಜಧಾನಿ ರಾಂಚಿಯ ಬಾರ್ಗೇನ್ ಆಂಚಲ್‌ನಲ್ಲಿ ಕಾನೂನುಬಾಹಿರವಾಗಿ 8.86 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಖ್ಯಮಂತ್ರಿಯಾಗಿ ತಮ್ಮ ಸ್ಥಾನ ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ಇ.ಡಿ. ಆರೋಪಿಸಿತ್ತು. ಆದರೆ ಇದು ಸುಳ್ಳು ಆರೋಪ ಎಂದು ಸೊರೇನ್‌ ಪರ ವಕೀಲರಾದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ವಾದಿಸಿದ್ದರು.

ರಾಂಚಿಯಲ್ಲಿ ಇಂಡಿಯಾ ಮಹಾ ಶಕ್ತಿ ಪ್ರದರ್ಶನ: ಹೇಮಂತ್ ಸೊರೇನ್, ಕೇಜ್ರಿವಾಲ್‌ಗೆ ಖಾಲಿ ಕುರ್ಚಿ ಇಟ್ಟು ಗೌರವ