Asianet Suvarna News Asianet Suvarna News

ಅಗ್ನಿಪರೀಕ್ಷೆ ಗೆದ್ದ ಜಾರ್ಖಂಡ್‌ ಸರ್ಕಾರ: ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಹೇಮಂತ್ ಸೊರೇನ್

ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯಬಹುದು, ಜಾರ್ಖಂಡ್ ಸರ್ಕಾರ ಪತನಕ್ಕೆ ಕಾರಣವಾಗಬಹುದು ಎಂಬ ಲೆಕ್ಕಾಚಾರಗಳು ಹುಸಿ ಯಾಗಿದ್ದು, ಮುಖ್ಯಮಂತ್ರಿ ಚಂಪೈ ಸೊರೇನ್ ನೇತೃತ್ವದ ಸರ್ಕಾರ ಸೋಮವಾರ ಬಹುಮತ ಪರೀಕ್ಷೆಯಲ್ಲಿ ಪಾಸಾಗಿದೆ. 

Jharkhand government led by Chief Minister Champai Soren passed the majority test akb
Author
First Published Feb 6, 2024, 9:54 AM IST

ರಾಂಚಿ: ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯಬಹುದು, ಜಾರ್ಖಂಡ್ ಸರ್ಕಾರ ಪತನಕ್ಕೆ ಕಾರಣವಾಗಬಹುದು ಎಂಬ ಲೆಕ್ಕಾಚಾರಗಳು ಹುಸಿಯಾಗಿದ್ದು, ಮುಖ್ಯಮಂತ್ರಿ ಚಂಪೈ ಸೊರೇನ್ ನೇತೃತ್ವದ ಸರ್ಕಾರ ಸೋಮವಾರ ಬಹುಮತ ಪರೀಕ್ಷೆಯಲ್ಲಿ ಪಾಸಾಗಿದೆ. ಇಬ್ಬರು ಶಾಸಕರ ಅಸಮಾಧಾನದ ಹೇಳಿಕೆಯ ನಡುವೆಯೂ, ತನ್ನ ಬಳಿ ಇರುವ 47 ಸದಸ್ಯರ ಬೆಂಬಲ ಪಡೆದು ಜೆಎಂಎಂ-ಕಾಂಗ್ರೆಸ್ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಿದೆ. 29 ಮಂದಿ ಶಾಸಕರು ಸರ್ಕಾರದ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಒಂದು ಸ್ಥಾನ ಖಾಲಿ ಇತ್ತು. ಪಕ್ಷೇತರ ಶಾಸಕ ಸರಯೂ ರಾಯ್ ಅವರು ಕಲಾಪದಿಂದ ದೂರ ಉಳಿದಿದ್ದರು. 

ಜಾರಿ ನಿರ್ದೇಶನಾಲಯದ (ಇ.ಡಿ.) ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ನ್ಯಾಯಾಲಯದ ಅನುಮತಿ ಪಡೆದು ವಿಶ್ವಾಸಮತ ಅಧಿವೇಶನಕ್ಕೆ ಹಾಜರಾಗಿದ್ದರು. ಮತದಾನದ ವೇಳೆ 77 ಶಾಸಕರಷ್ಟೇ ಉಪಸ್ಥಿತರಿದ್ದರು. ವಿಶ್ವಾಸಮತ ಸಾಬೀತು ಪಡಿಸಲು ಚಂಪೈ ಅವರಿಗೆ ರಾಜ್ಯಪಾಲರು 10 ದಿನಗಳ ಕಾಲಾವಕಾಶ ನೀಡಿದ್ದರು. ಆದಾಗ್ಯೂ ಫೆ.5ರಂದೇ ಬಹುಮತ ಸಾಬೀತುಪಡಿ ಸುವುದಾಗಿ ಚಂಪೈ ತಿಳಿಸಿದ್ದರು.ಬಿಜೆಪಿ ಆಪರೇಷನ್ ಮಾಡಬಹುದು ಎಂಬ ಭೀತಿಯಿಂದ ಆಡಳಿತಾರೂಢ ಕೂಟದ 38 ಶಾಸಕರನ್ನು ಕಾಂಗ್ರೆಸ್ ಆಳ್ವಿಕೆಯ ಹೈದರಾಬಾದ್‌ಗೆ ಕರೆದೊಯ್ದು ರೆಸಾರ್ಟ್‌ನಲ್ಲಿರಿಸಲಾಗಿತ್ತು. ಭಾನುವಾರಸಂಜೆಯಷ್ಟೇ ಅವರನ್ನು ವಾಪಸ್ ಕರೆತರಲಾಗಿತ್ತು.

ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ: ಹೇಮಂತ್ ಸೊರೇನ್

ರಾಂಚಿ: ತಮ್ಮ ವಿರುದ್ಧ ಹೊರಿಸಿರುವ ಭ್ರಷ್ಟಾಚಾರ ಆರೋಪಗಳನ್ನು ಸಾಬೀತುಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಬಂಧಿತ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬಿಜೆಪಿಗೆ ಸವಾಲು ಹಾಕಿದ್ದಾರೆ. ಚಂಪೈ ಸೊರೇನ್ ಅವರ ವಿಶ್ವಾಸಮತಯಾಚನೆ ಕಲಾಪದಲ್ಲಿ ಪಾಲ್ಗೊಂಡು ಸೋಮವಾರ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಂಚು ರೂಪಿಸಿದ ಬಳಿಕ ರಾಜಭವನ ತಮ್ಮ ಬಂಧನಕ್ಕೆಕಾರಣವಾಗಿದೆ ಎಂದು ದೂಷಿಸಿದರು. ಜ.31 ದೇಶದ ಇತಿಹಾಸದಲ್ಲಿ ಕರಾಳ ಅಧ್ಯಾಯ. ರಾಜಭವನದ ಅಣತಿಯ ಮೇರೆಗೆ ಮುಖ್ಯಮಂತ್ರಿಯನ್ನು ಬಂಧಿಸಲಾಯಿತು. ಜಾರ್ಖಂಡ್‌ನಲ್ಲಿ ಬುಡಕಟ್ಟು ಮುಖ್ಯಮಂತ್ರಿ ಅಧಿಕಾರ ಪೂರೈಸುವುದು ಬಿಜೆಪಿಗೆ ಇಷ್ಟವಿಲ್ಲ. ಅವರ ಕಾಲದಲ್ಲೂ ಹೀಗೆಯೇ ಮಾಡಿದೆ ಎಂದು ಆರೋಪಿಸಿದರು.

ಹೇಮಂತ್‌ ಸೊರೆನ್‌ ಬಂಧನದ ಬಳಿಕ ಚಂಪೈ ಸೊರೆನ್‌ ಜಾರ್ಖಂಡ್‌ ಮುಖ್ಯಮಂತ್ರಿಯಾಗಿ ಪದಗ್ರಹಣ

ಇ.ಡಿ. ವಿರುದ್ಧವೇ ಎಸ್ಸಿಎಸ್ಟಿ ಕಾಯ್ದೆ ಅಡಿ ಜಾರ್ಖಂಡ್‌ ನಿರ್ಗಮಿತ ಸಿಎಂ ಹೇಮಂತ್ ಸೊರೇನ್‌ ಕೇಸು

Follow Us:
Download App:
  • android
  • ios