ಇಂಡಿಯಾ ಕೂಟಕ್ಕೆ ನಿತೀಶ್ ಪ್ರಹಾರ: ಇನ್ನು ಎನ್ಡಿಎ ಬಿಡಲ್ಲ; ಬಿಹಾರ ಸಿಎಂ ಸ್ಪಷ್ಟೋಕ್ತಿ
ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದ ನಾಯಕತ್ವ ಕಸಿದುಕೊಳ್ಳಲು ಬಯಸಿದ್ದೇ ನಿತೀಶ್ ಮೈತ್ರಿಕೂಟದಿಂದ ಹೊರಬರಲು ಕಾರಣ ಎಂದು ಜೆಡಿಯು ಹಿರಿಯ ನಾಯಕ ಮಾತನಾಡಿದ್ದಾರೆ.
![jdu blames congress bid to steal india bloc leadership for nitish kumar s exit ash jdu blames congress bid to steal india bloc leadership for nitish kumar s exit ash](https://static-ai.asianetnews.com/images/01hn7y5f89nq1awghdhh0qhahc/whatsapp-image-2024-01-28-at-17-11-56_363x203xt.jpg)
ಪಟನಾ (ಜನವರಿ 29, 2024): ‘ಇಂಡಿಯಾ ಮೈತ್ರಿಕೂಟ ನನ್ನ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿದೆ. ಮತ್ತೊಂದೆಡೆ ರಾಜ್ಯದಲ್ಲಿನ ಮೈತ್ರಿ ಸರ್ಕಾರದಲ್ಲೂ ಎಲ್ಲವೂ ಸರಿ ಇರಲಿಲ್ಲ. ಹೀಗಾಗಿ ಹಳೆಯ ಮೈತ್ರಿಕೂಟದಿಂದ ಹೊರಬಂದು ಹೊಸ ಮೈತ್ರಿಕೂಟ ರಚಿಸಿದ್ದೇವೆ’ ಎಂದು ಆರ್ಜೆಡಿ-ಕಾಂಗ್ರೆಸ್ ಸಂಗ ತೊರೆದು ಬಿಜೆಪಿ ಕೈಹಿಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಭಾನುವಾರ ಜೆಡಿಯು-ಆರ್ಜೆಡಿ-ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಿತೀಶ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ‘ನಾನು ಇಂದು ಸಿಎಂ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಜತೆ ಸೇರಿದ್ದೇನೆ. ಈ ಸಂದರ್ಭ ಎದುರಾಗಲು ಇಂಡಿಯಾ ಮೈತ್ರಿಕೂಟ ನನ್ನ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿದ್ದರ ಜೊತೆಗೆ, ರಾಜ್ಯದಲ್ಲೂ ಮೈತ್ರಿ ಸರ್ಕಾರದಲ್ಲೂ ಎಲ್ಲವೂ ಸರಿ ಇರಲಿಲ್ಲ. ಅದನ್ನು ಸರಿಪಡಿಸಲು ನಾನು ಸಾಕಷ್ಟು ಯತ್ನಿಸಿದರೂ ಅದು ಫಲ ಕೊಡಲಿಲ್ಲ. ಈ ಬಗ್ಗೆ ನನಗೆ ಹಲವರಿಂದ ಅಭಿಪ್ರಾಯಗಳು ಸಲ್ಲಿಕೆಯಾಗಿದ್ದವು. ಅವರೆಲ್ಲರ ಅಭಿಪ್ರಾಯಗಳನ್ನು ಆಲಿಸಿ ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
ನಿತೀಶ್ ನಿರ್ಗಮನ: ಇಂಡಿಯಾ ಕೂಟಕ್ಕೆ ಆಘಾತ; ಸೀಟು ಹಂಚಿಕೆಗೆ ಕಾಂಗ್ರೆಸ್ಗೆ ತಲೆನೋವು!
ನಿತೀಶ್ ಮುಗಿಸಲು ಸಂಚು - ಜೆಡಿಯು:
ಇದೇ ವೇಳೆ ಪಕ್ಷದ ಇನ್ನೋರ್ವ ಹಿರಿಯ ನಾಯಕ ಕೆ.ಸಿ.ತ್ಯಾಗಿ ಮಾತನಾಡಿ, ‘ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದ ನಾಯಕತ್ವ ಕಸಿದುಕೊಳ್ಳಲು ಬಯಸಿದ್ದೇ ನಿತೀಶ್ ಮೈತ್ರಿಕೂಟದಿಂದ ಹೊರಬರಲು ಕಾರಣ ಎಂದಿದ್ದಾರೆ. ಮುಂಬೈನಲ್ಲಿ ನಡೆದ ಮೈತ್ರಿಕೂಟದ ಸಭೆಯಲ್ಲಿ ನಾವು ಯಾರನ್ನೂ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದೇ ಚುನಾವಣೆ ಎದುರಿಸಲು ನಿರ್ಧರಿಸಿದ್ದೆವು. ಆದರೆ ಡಿ.19ರಂದು ನಡೆದ ಸಭೆಯಲ್ಲಿ ಸಂಚಿನ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಪ್ರಸ್ತಾಪಿಸಲಾಯಿತು. ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೂಲಕ ಖರ್ಗೆ ಹೆಸರು ಸೂಚಿಸುವಂತೆ ಮಾಡಲಾಯಿತು’ ಎಂದು ಆರೋಪಿಸಿದರು.
ಪಕ್ಷದ ಇನ್ನೋರ್ವ ನಾಯಕ ರಜಿಬ್ ರಂಜನ್ ಮಾತನಾಡಿ ‘ಕಾಂಗ್ರೆಸ್ ಭಸ್ಮಾಸುರ ಇದ್ದಂತೆ’ ಎಂದು ವ್ಯಂಗ್ಯವಾಡಿದರು. ‘ಮೊದಲಿಗೆ ಯಾವುದೇ ನಾಯಕತ್ವ ಇಲ್ಲದ ವ್ಯಕ್ತಿಯನ್ನು ತನ್ನ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ತನ್ನನ್ನು ತಾನು ಮುಳುಗಿಸಿಕೊಂಡಿತು ಎಂದು ಹೆಸರು ಹೇಳದೆಯೇ ರಾಹುಲ್ ಹಾಂಧಿ ವಿರುದ್ಧ ಕಿಡಿಕಾರಿದರು.
ನಿತೀಶ್ಗೆ ಮತ್ತೆ ಬಿಜೆಪಿ ಬಾಗಿಲು ತೆರೆದಿದ್ದೇಕೆ? ನಿತೀಶ್ ನಡೆಗೆ ಪಿಎಂ ಅಭ್ಯರ್ಥಿ ಖರ್ಗೆ ಕಾರಣ!