ಇರಾನ್ ಸಂಸತ್ತು ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ. ಇದು ಜಾಗತಿಕ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಲಿದ್ದು, ತೈಲ ಬೆಲೆ ಏರಿಕೆಗೆ ಕಾರಣವಾಗಬಹುದು. ಭಾರತದ ಮೇಲೆ ಈ ನಿರ್ಧಾರದ ಪರಿಣಾಮ ಕಡಿಮೆ ಇರಲಿದೆ.

ಇಸ್ರೇಲ್ ಜೊತೆಗಿನ ಯುದ್ಧದ ಮಧ್ಯೆ ಅಮೆರಿಕದ ದಾಳಿಯ ನಂತರ ಇರಾನ್‌ ತೀವ್ರ ಕ್ರಮಕ್ಕೆ ಮುಂದಾಗಿದೆ. ಭಾನುವಾರ (ಏಪ್ರಿಲ್ 22) ಅಮೆರಿಕದ ಬಿ-2 ಬಾಂಬರ್ ವಿಮಾನಗಳು ಇರಾನ್‌ನ ಮೂರು ಪರಮಾಣು ನೆಲೆಗಳ ಮೇಲೆ ಬಂಕರ್ ಬಸ್ಟರ್ ಬಾಂಬ್‌ಗಳೊಂದಿಗೆ ದಾಳಿ ನಡೆಸಿದವು. ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್ ಸಂಸತ್ತು ಜಾಗತಿಕ ಆರ್ಥಿಕತೆಗೆ ಆಘಾತವನ್ನುಂಟು ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ - ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಒಪ್ಪಿಗೆ ನೀಡಿದೆ. ಈ ನಿರ್ಧಾರವು ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಅಂತಿಮ ಅನುಮೋದನೆಗೆ ಕಾಯುತ್ತಿದೆ.

ಹಾರ್ಮುಜ್ ಜಲಸಂಧಿಯು ವಿಶ್ವದ ತೈಲ ಮತ್ತು ಅನಿಲ ವ್ಯಾಪಾರದ ಶೇ.20ರಷ್ಟು ಸಾಗಣೆಗೆ ಪ್ರಮುಖ ಮಾರ್ಗವಾಗಿದೆ. ಇದನ್ನು ಮುಚ್ಚಿದರೆ ತೈಲ ಬೆಲೆಗಳು ಗಗನಕ್ಕೇರಲಿದ್ದು, ಸಾರಿಗೆ ವೆಚ್ಚ ಹೆಚ್ಚಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಇತರ ವಸ್ತುಗಳ ಬೆಲೆಯೂ ಏರಿಕೆಯಾಗಲಿದೆ. ಈ ಕಾರಿಡಾರ್ ಪರ್ಷಿಯನ್ ಸಮುದ್ರ ಮತ್ತು ಓಮನ್ ಕೊಲ್ಲಿಯ ನಡುವಿನ ಕಡಿಮೆ ದೂರದ ಮಾರ್ಗವಾಗಿದ್ದು, ಮಾರ್ಗ ಬದಲಾವಣೆಯಿಂದ ಸರಕು ಸಾಗಣೆಯ ವೆಚ್ಚ ಮತ್ತು ಸಮಯ ಗಣನೀಯವಾಗಿ ಹೆಚ್ಚಾಗಲಿದೆ.

ಅಮೆರಿಕ ಮತ್ತು ಇಸ್ರೇಲ್ ಈ ಕಾರಿಡಾರ್‌ನ್ನು ತೆರೆದಿಡಲು ತೀವ್ರ ಪ್ರಯತ್ನ ನಡೆಸಲಿವೆ. ಯುರೋಪಿಯನ್ ರಾಷ್ಟ್ರಗಳೂ ಆರ್ಥಿಕ ಅಸ್ಥಿರತೆಯ ಭಯದಿಂದ ಈ ಕಾರಿಡಾರ್ ತೆರೆದಿರಲು ಬೆಂಬಲಿಸುತ್ತಿವೆ. ಆದರೆ, ಇರಾನ್‌ನ ಈ ಕ್ರಮವು ಇಸ್ರೇಲ್-ಇರಾನ್ ಯುದ್ಧವನ್ನು ಅರೇಬಿಯನ್ ಕೊಲ್ಲಿಗೂ ವಿಸ್ತರಿಸುವ ಸಾಧ್ಯತೆಯಿದೆ. ಇದರ ಜೊತೆಗೆ, ಯೆಮನ್‌ನ ಹೌತಿ ಬಂಡುಕೋರರು ಇಸ್ರೇಲಿ ಮತ್ತು ಅಮೆರಿಕನ್ ಸರಕು ಹಡಗುಗಳ ಮೇಲೆ ದಾಳಿಯ ಎಚ್ಚರಿಕೆ ನೀಡಿದ್ದಾರೆ, ಇದು ಸಂಘರ್ಷವನ್ನು ಮತ್ತಷ್ಟು ಉಗ್ರಗೊಳಿಸಲಿದೆ.

ಇರಾನ್ ಸಂಸದ ಮತ್ತು ರೆವ್ಯುಲೇಷನ್ ಗಾರ್ಡ್‌ಗಳ ಕಮಾಂಡರ್ ಇಸ್ಮಾಯಿಲ್ ಕೊಸಾರಿ, "ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಪ್ರಸ್ತಾಪ ನಮ್ಮ ಕಾರ್ಯಸೂಚಿಯಲ್ಲಿದೆ, ಅಗತ್ಯವಿದ್ದಾಗ ಅದನ್ನು ಜಾರಿಗೊಳಿಸಲಾಗುವುದು ಎಂದು ಯಂಗ್ ಜರ್ನಲಿಸ್ಟ್ ಕ್ಲಬ್‌ಗೆ ತಿಳಿಸಿದ್ದಾರೆ.

ಭಾರತದ ವಿಚಾರದಲ್ಲಿ, ಈ ನಿರ್ಧಾರದಿಂದ ಹೆಚ್ಚಿನ ತೊಂದರೆಯಾಗುವುದಿಲ್ಲ. ಭಾರತ ಈಗಾಗಲೇ ಮಧ್ಯಪ್ರಾಚ್ಯದ ತೈಲ ಪೂರೈಕೆಯ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ, ರಷ್ಯಾ ಮತ್ತು ಅಮೆರಿಕದಿಂದ ತೈಲ ಆಮದನ್ನು ಗಣನೀಯವಾಗಿ ಹೆಚ್ಚಿಸಿದೆ. ಕೆಪ್ಲರ್‌ನ ಡೇಟಾ ಪ್ರಕಾರ, ಜೂನ್‌ನಲ್ಲಿ ರಷ್ಯಾದಿಂದ ಭಾರತದ ತೈಲ ಆಮದು ಎರಡು ವರ್ಷಗಳಲ್ಲೇ ಅತ್ಯಧಿಕವಾಗಿದೆ.

ಈ ನಿರ್ಧಾರವು ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಮುಂದಿನ ಕೆಲವು ದಿನಗಳಲ್ಲಿ ಭದ್ರತಾ ಮಂಡಳಿಯ ಅಂತಿಮ ಒಪ್ಪಿಗೆಯ ನಂತರ ಈ ಕಾರಿಡಾರ್‌ನ ಭವಿಷ್ಯ ನಿರ್ಧಾರವಾಗಲಿದೆ.