ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ನೇಮಕ ಮಾಡಿ, ಸುಪ್ರೀಂ ಕೋರ್ಟ್ಗೆ ಕೇಂದ್ರದ ಪತ್ರ!
ಕೊಲಿಜಿಯಂ ಕುರಿತಾಗಿ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ನಡುವಿನ ತಿಕ್ಕಾಟ ಮುಂದುವರಿಯುವ ಲಕ್ಷಣ ಕಾಣುತ್ತಿದೆ. ನ್ಯಾಯಾಧೀಶರನ್ನು ನೇಮಕ ಮಾಡುವ ವ್ಯವಸ್ಥೆಯಾದ ಕೊಲಿಜಿಯಂನಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಯನ್ನು ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ಗೆ ಕೇಂದ್ರ ಕಾನೂನು ಸಚಿವ ಪತ್ರ ಬರೆದಿದ್ದಾರೆ.
ನವದೆಹಲಿ (ಜ.16): ಕೊಲಿಜಿಯಂನಲ್ಲಿ ತನ್ನ ಪ್ರತಿನಿಧಿಗಳನ್ನು ನೇಮಕ ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಸಲಹೆ ನೀಡಿದೆ. ನ್ಯಾಯಾಧೀಶರ ನೇಮಕ ಪ್ರಕ್ರಿಯೆಯಲ್ಲಿ ಸರ್ಕಾರಿ ಪ್ರತಿನಿಧಿಗಳನ್ನು ತೊಡಗಿಸಿಕೊಳ್ಳುವುದರಿಂದ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕರಿಗೆ ಉತ್ತರದಾಯಿತ್ವ ಬರುತ್ತದೆ ಎಂದು ಕಾನೂನು ಸಚಿವ ಕಿರಣ್ ರಿಜಿಜು ಅವರು ಸಿಜೆಐಗೆ ಪತ್ರ ಬರೆದಿದ್ದಾರೆ. ಕೊಲಿಜಿಯಂ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆಯಿದೆ ಎಂದು ಕಳೆದ ವರ್ಷ ನವೆಂಬರ್ನಲ್ಲಿ ಕಿರಣ್ ರಿಜಿಜು ಹೇಳಿದ್ದರು. ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟ ರಾಜ್ಯ ಸರ್ಕಾರದ ಪ್ರತಿನಿಧಿಗಳು ಭಾಗಿಯಾಗಬೇಕು ಎಂದು ಹೇಳಿದ್ದರು. ಲೋಕಸಭೆಯ ಡೆಪ್ಯುಟಿ ಸ್ಪೀಕರ್ ಕೂಡ ಸುಪ್ರೀಂ ಕೋರ್ಟ್ ಸಾಮಾನ್ಯವಾಗಿ ಶಾಸಕಾಂಗದ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂದು ಹೇಳಿದ್ದಾರೆ. ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಬೆಳವಣಿಗೆ ತುಂಬಾ ಅಪಾಯಕಾರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ನ್ಯಾಯಾಂಗ ನೇಮಕಾತಿಯಲ್ಲಿ ಸಂಪೂರ್ಣವಾಗಿ ಸರ್ಕಾರದ ಹಸ್ತಕ್ಷೇಪ ಇರಬಾರದು ಎಂದು ಹೇಳಿದ್ದಾರೆ.
ಈ ಸಲಹೆಯನ್ನು ಸುಪ್ರೀಂ ಕೋರ್ಟ್ ಒಪ್ಪಲಿದೆಯೇ?: ಕಾನೂನು ಸಚಿವರ ಸಲಹೆಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳುವುದು ಕಷ್ಟ. ಸಿಜೆಐ ಚಂದ್ರಚೂಡ್ ನೇತೃತ್ವದ ಕೊಲಿಜಿಯಂನಲ್ಲಿ ಇನ್ನೂ 5 ಸದಸ್ಯರಿದ್ದಾರೆ. ಇವರಲ್ಲಿ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್, ನ್ಯಾಯಮೂರ್ತಿ ಕೆಎಂ ಜೋಸೆಫ್, ನ್ಯಾಯಮೂರ್ತಿ ಎಂಆರ್ ಶಾ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಸೇರಿದ್ದಾರೆ. ಈ ಹಿಂದೆ ಅದು ಸಿಜೆಐ ಹೊರತುಪಡಿಸಿ ಇನ್ನೂ ನಾಲ್ವರು ನ್ಯಾಯಮೂರ್ತಿಗಳನ್ನು ಹೊಂದಿತ್ತು. ಇವರಲ್ಲಿ ಯಾರೂ ಸಿಜೆಐ ಉತ್ತರಾಧಿಕಾರಿಯಾಗಿರಲಿಲ್ಲ. ಅದಕ್ಕಾಗಿಯೇ ನಂತರ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಸಿಜೆಐ ಉತ್ತರಾಧಿಕಾರಿಯಾದ ಆರನೇ ಸದಸ್ಯರಾಗಿ ಕೊಲಿಜಿಯಂಗೆ ಸೇರಿಸಲಾಯಿತು.
ಕೊಲಿಜಿಯಂ ಈ ಸಲಹೆಯನ್ನು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ಕಾಯ್ದೆ (ಎನ್ಜೆಎಸಿ) ತರಲು ಸರ್ಕಾರದ ಹೊಸ ಪ್ರಯತ್ನ ಎಂದು ಸುಪ್ರೀಂ ಕೋರ್ಟ್ ಪರಿಗಣಿಸಿದೆ. ಎನ್ಜೆಎಸಿಅನ್ನು 2015 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು, ಆದರೆ ಅಕ್ಟೋಬರ್ 2015 ರಲ್ಲಿ, ಸುಪ್ರೀಂ ಕೋರ್ಟ್ನ ಐದು ನ್ಯಾಯಾಧೀಶರ ಪೀಠವು ಇದನ್ನು ಅಸಂವಿಧಾನಿಕ ಎಂದು ಘೋಷಿಸಿತು.
ಜಡ್ಜ್ ನೇಮಕ ಪ್ರಕ್ರಿಯೆ ಬಗ್ಗೆ ಮತ್ತೆ ರಿಜಿಜು ಅತೃಪ್ತಿ!
2015 ರಲ್ಲಿ ಸುಪ್ರೀಂ ಕೋರ್ಟ್ ಅಸಾಂವಿಧಾನಿಕ ಎಂದು ಕರೆದಿರುವ ಎನ್ಜೆಎಸಿ, ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಅದರಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ಸಿಜೆಐ ಎನ್ಜೆಎಸಿಯ ಮುಖ್ಯಸ್ಥರಾಗಿದ್ದರು. ಇವರ ಹೊರತಾಗಿ 2 ಅತ್ಯಂತ ಹಿರಿಯ ನ್ಯಾಯಾಧೀಶರನ್ನು ಉಳಿಸಿಕೊಳ್ಳಬೇಕಿತ್ತು. ಇವರಲ್ಲದೆ ಕಾನೂನು ಸಚಿವರು ಮತ್ತು ಇಬ್ಬರು ಗಣ್ಯರನ್ನು ಎನ್ಜೆಎಸಿಯಲ್ಲಿ ಇರಿಸುವ ವ್ಯವಸ್ಥೆ ಇತ್ತು. ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಸಿಜೆಐ ಒಳಗೊಂಡ ಸಮಿತಿಗೆ ಗಣ್ಯರನ್ನು ಆಯ್ಕೆ ಮಾಡುವ ವ್ಯವಸ್ಥೆ ಇತ್ತು. ಇದೀಗ ರಿಜಿಜು ಅವರು ನ್ಯಾಯಮೂರ್ತಿಗಳ ನೇಮಕಾತಿ ಕುರಿತ ಪತ್ರವನ್ನು ಇಂತಹ ವ್ಯವಸ್ಥೆಗೆ ಪರಿಗಣಿಸಲಾಗುತ್ತಿದೆ.
ಕೊಲಿಜಿಯಂ ಚರ್ಚೆ ವಿವರ ಬಹಿರಂಗ ಅಸಾಧ್ಯ ಎಂದ ಸುಪ್ರೀಂಕೋರ್ಟ್: ಜಡ್ಜ್ ಆಯ್ಕೆಗೆ ಪ್ರತ್ಯೇಕ ಆಯೋಗ..?
ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶೆ ರುಮಾ ಪಾಲ್ ಸುಮಾರು ಒಂದು ದಶಕದ ಹಿಂದೆ ಕೊಲಿಜಿಯಂ ವ್ಯವಸ್ಥೆಯನ್ನು ಟೀಕಿಸಿದ್ದರು. ನೀವು ನನ್ನನ್ನು ರಕ್ಷಿಸಿ, ನಾನು ನಿಮ್ಮನ್ನು ರಕ್ಷಿಸುತ್ತೇನೆ ಎಂಬ ಊಹೆಯನ್ನು ಕೊಲಿಜಿಯಂ ಪ್ರಕ್ರಿಯೆ ಹುಟ್ಟುಹಾಕಿದೆ ಎಂದು ಹೇಳಿದ್ದರು. ಹೈಕೋರ್ಟ್ಗೆ ನ್ಯಾಯಾಧೀಶರನ್ನು ನೇಮಿಸುವ ಕೊಲಿಜಿಯಂ ಪ್ರಕ್ರಿಯೆಯು ದೇಶದ ಅತ್ಯುತ್ತಮ ರಹಸ್ಯಗಳಲ್ಲಿ ಒಂದಾಗಿದೆ ಎಂದಿದ್ದರು. ಕೊಲಿಜಿಯಂ ಕಳುಹಿಸಿದ ಹೆಸರುಗಳನ್ನು ಅಂಗೀಕರಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂಬ ಆರೋಪ ಎದುರಿಸುತ್ತಿದೆ. ಕೊಲಿಜಿಯಂ ಕಳುಹಿಸಿದ ಸುಮಾರು 104 ಶಿಫಾರಸುಗಳು ಸರ್ಕಾರದ ಬಳಿ ಬಾಕಿ ಇವೆ. ವಿಷಯ ಸುಪ್ರೀಂ ಕೋರ್ಟ್ಗೆ ಗಮನಕ್ಕೆ ಬಂದಾಗ ಬಾಕಿ ಉಳಿದಿರುವ ಹೆಸರುಗಳನ್ನು ಶೀಘ್ರವಾಗಿ ಅಂತಿಮಗೊಳಿಸುವಂತೆ ನ್ಯಾಯಾಲಯವು ಸರ್ಕಾರವನ್ನು ಕೇಳಿತು.