Asianet Suvarna News Asianet Suvarna News

ಕರೆನ್ಸಿ ನೋಟುಗಳಲ್ಲಿ ಲಕ್ಷ್ಮೀ, ಗಣೇಶನ ಚಿತ್ರಗಳನ್ನು ಸೇರಿಸಿ: ಪ್ರಧಾನಿಗೆ Arvind Kejriwal ಮನವಿ

ಹೊಸ ಕರೆನ್ಸಿ ನೋಟುಗಳ ಒಂದು ಬದಿಯಲ್ಲಿ ಮಹಾತ್ಮ ಗಾಂಧಿಯವರ ಚಿತ್ರ ಮತ್ತು ಇನ್ನೊಂದು ಬದಿಯಲ್ಲಿ ಲಕ್ಷ್ಮೀ ದೇವಿ ಮತ್ತು ಗಣೇಶನ ಚಿತ್ರಗಳನ್ನು ಹೊಂದಿರಬಹುದು ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. 

include lakshmi ganesh images on currency notes says arvind kejriwal to pm narendra modi ash
Author
First Published Oct 26, 2022, 12:40 PM IST

ಹೊಸ ಕರೆನ್ಸಿ ನೋಟುಗಳ (Currency Notes) ಮೇಲೆ ಲಕ್ಷ್ಮೀ ದೇವತೆ (Lakshmi) ಮತ್ತು ಗಣೇಶನ (Ganesh) ಚಿತ್ರಗಳನ್ನು ಸೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಮನವಿ ಮಾಡಿಕೊಂಡಿದ್ದಾರೆ. ಹೊಸ ಕರೆನ್ಸಿ ನೋಟುಗಳ ಒಂದು ಬದಿಯಲ್ಲಿ ಮಹಾತ್ಮ ಗಾಂಧಿಯವರ (Mahatma Gandhi) ಚಿತ್ರ ಮತ್ತು ಇನ್ನೊಂದು ಬದಿಯಲ್ಲಿ ಲಕ್ಷ್ಮೀ ದೇವಿ ಮತ್ತು ಗಣೇಶನ ಚಿತ್ರಗಳನ್ನು ಹೊಂದಿರಬಹುದು ಎಂದು ಅವರು ಸಲಹೆ ನೀಡಿದರು. ಹಾಗೆ, ಈ ಇಬ್ಬರು ದೇವತೆಗಳ ಚಿತ್ರಗಳನ್ನು ಪ್ರಿಂಟ್‌ ಮಾಡುವುದರಿಂದ  ದೇಶದ ಏಳಿಗೆಗೆ ಸಹಾಯ ಮಾಡುತ್ತದೆ ಎಂದೂ ಅರವಿಂದ್‌ ಕೇಜ್ರಿವಾಲ್ ಹೇಳಿದ್ದಾರೆ.

ಕೆಲವೊಮ್ಮೆ ದೇವರು ಮತ್ತು ದೇವತೆಗಳು ನಮ್ಮನ್ನು ಆಶೀರ್ವದಿಸದಿದ್ದರೆ ಪ್ರಯತ್ನಗಳನ್ನು ಮಾಡಿದರೂ, ನಮ್ಮ ಪ್ರಯತ್ನಗಳು ಫಲ ನೀಡುವುದಿಲ್ಲ. ಈ ಹಿನ್ನೆಲೆ ನಮ್ಮ ಕರೆನ್ಸಿ ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮೀ ದೇವಿಯ ಫೋಟೋಗಳನ್ನು ಮುದ್ರಿಸುವಂತೆ ನಾನು ಪ್ರಧಾನಿ ಮೋದಿಯವರಿಗೆ ಮನವಿ ಮಾಡುತ್ತೇನೆ" ಎಂದು ದೆಹಲಿ ಮುಖ್ಯಮಂತ್ರಿ ಟ್ವೀಟ್‌ ಮಾಡಿದ್ದಾರೆ.

ಇದನ್ನು ಓದಿ: ಗಾಂಧಿ ಬದಲು ದೇಶದ ಕರೆನ್ಸಿ ನೋಟುಗಳಲ್ಲಿ ನೇತಾಜಿ ಚಿತ್ರ ಬಳಸಿ: ಹಿಂದು ಮಹಾಸಭಾ ಆಗ್ರಹ!

ಮುಸ್ಲಿಮ್ ರಾಷ್ಟ್ರವಾದ ಇಂಡೋನೇಷ್ಯಾ, ಕರೆನ್ಸಿ ನೋಟಿನಲ್ಲಿ ಗಣೇಶನ ಚಿತ್ರವನ್ನು ಹೊಂದಿರುವ ಉದಾಹರಣೆಯನ್ನು ಸಹ ಅರವಿಂದ್‌ ಕೇಜ್ರಿವಾಲ್‌ ಉಲ್ಲೇಖಿಸಿದ್ದಾರೆ. "ಇಂಡೋನೇಷ್ಯಾ ಇದನ್ನು ಮಾಡಲು ಸಾಧ್ಯವಾದರೆ, ನಮಗೆ ಏಕೆ ಸಾಧ್ಯವಿಲ್ಲ. ನಾನು ನಾಳೆ ಅಥವಾ ನಾಡಿದ್ದು ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡುತ್ತೇನೆ.  ದೇಶದ ಆರ್ಥಿಕ ಸ್ಥಿತಿಯನ್ನು ಸರಿ ಪಡಿಸುವ ಪ್ರಯತ್ನಗಳ ಹೊರತಾಗಿ ನಮಗೆ ಸರ್ವಶಕ್ತನ ಆಶೀರ್ವಾದವೂ ಬೇಕು’’ ಎಂದೂ ಅರವಿಂದ್‌ ಕೇಜ್ರಿವಾಲ್‌ ಹೇಳಿಕೊಂಡಿದ್ದಾರೆ.

ಇನ್ನು, ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುವ ಮೂಲಕ ದೇಶವು ಸೂಕ್ಷ್ಮ ಪರಿಸ್ಥಿತಿಯ ಮೂಲಕ ಹಾದುಹೋಗುತ್ತಿದೆ ಎಂದು ಹೇಳಿದರು. ''ಭಾರತ ಶ್ರೀಮಂತವಾಗಿರಬೇಕು ಮತ್ತು ಇಲ್ಲಿನ ಪ್ರತಿಯೊಂದು ಕುಟುಂಬವೂ ಸಮೃದ್ಧವಾಗಿರಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ನಾವು ಶಾಲೆಗಳು ಮತ್ತು ಆಸ್ಪತ್ರೆಗಳನ್ನು ದೊಡ್ಡ ಪ್ರಮಾಣದಲ್ಲಿ ತೆರೆಯಬೇಕು,'' ಎಂದೂ ದೆಹಲಿ ಸಿಎಂ ಹೇಳಿದರು.

ಇದನ್ನು ಓದಿ: ಶೀಘ್ರ ಬರಲಿದೆ ಆರ್‌ಬಿಐ Digital Currency: ಇ - ರುಪಿ ಬಗ್ಗೆ ಇಲ್ಲಿದೆ ವಿವರ..
 
ರಾಷ್ಟ್ರ ರಾಜಧಾನಿಯ ಜನರು ಬಿಜೆಪಿಯನ್ನು ತಿರಸ್ಕರಿಸುತ್ತಾರೆ: ಕೇಜ್ರಿವಾಲ್‌
ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಆಮ್ ಆದ್ಮಿ ಪಕ್ಷವು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ರಾಷ್ಟ್ರ ರಾಜಧಾನಿಯ ಜನರು ಬಿಜೆಪಿಯನ್ನು ತಿರಸ್ಕರಿಸುತ್ತಾರೆ ಎಂದೂ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದರು.
 
ಅಲ್ಲದೆ, ಕಳೆದ 27 ವರ್ಷಗಳಿಂದ ಸರ್ಕಾರ ನಡೆಸುತ್ತಿರುವ ಗುಜರಾತ್‌ನಲ್ಲಿ ಬಿಜೆಪಿ ಮಾಡಿರುವ ಒಂದು ಒಳ್ಳೆಯ ಕೆಲಸವನ್ನು ಉಲ್ಲೇಖಿಸಲಿ ಎಂದೂ ಕೇಜ್ರಿವಾಲ್‌ ಸವಾಲು ಹಾಕಿದರು. ಹಾಗೂ, "ಎಲ್ಲಾ ರಾಕ್ಷಸ ಶಕ್ತಿಗಳು ನಮ್ಮ ವಿರುದ್ಧ ಒಟ್ಟುಗೂಡಿವೆ," ಎಂದೂ ದೆಹಲಿ ಮುಖ್ಯಮಂತ್ರಿ ಗುಜರಾತ್‌ನಲ್ಲಿ ಮುಂಬರುವ ಚುನಾವಣೆಯ ಬಗ್ಗೆ ಹೇಳಿದರು.
 
ಇನ್ನು, ರಾಷ್ಟ್ರ ರಾಜಧಾನಿಯ ಮಾಲಿನ್ಯ ಮಟ್ಟ ಇಳಿಮುಖವಾಗಲು ದೆಹಲಿ ನಿವಾಸಿಗಳ ಪ್ರಯತ್ನವನ್ನು ಶ್ಲಾಘಿಸಿದ ದೆಹಲಿ ಮುಖ್ಯಮಂತ್ರಿ,  ''ನಮಗೆ ಇನ್ನೂ ತೃಪ್ತಿಯಾಗಿಲ್ಲ. ದೆಹಲಿಯನ್ನು ಸ್ವಚ್ಛ ಗಾಳಿ ಇರುವ ನಗರವನ್ನಾಗಿ ಮಾಡಲು ನಾವು ಬಯಸುತ್ತೇವೆ,'' ಎಂದೂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. 

Follow Us:
Download App:
  • android
  • ios