I.N.D.I.A Alliance: ಪ್ರಿಯಾಂಕಾ ಚತುರ್ವೇದಿ ಅವರು ಒಕ್ಕೂಟದ ಪಕ್ಷಗಳು ಒಗ್ಗಟ್ಟಿನಿಂದ ಬಿಜೆಪಿ ವಿರುದ್ಧ ಹೋರಾಡಬೇಕೆಂದು ಕರೆ ನೀಡಿದ್ದಾರೆ. ತಾರೀಖ್ ಅನ್ವರ್ ಕಾಂಗ್ರೆಸ್ ಪಕ್ಷದ ರಾಜಕೀಯ ತಂತ್ರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ನವದೆಹಲಿ: ವಿಪಕ್ಷಗಳ ಒಕ್ಕೂಟವಾಗಿರುವ ಇಂಡಿಯಾ ಕೂಟದಲ್ಲಿ ಬಿರುಕುಗಳು ಮೂಡಿರುವುದು ಸ್ಪಷ್ಟವಾಗಿರುವ ನಡುವೆಯೇ, ‘ಕೂಟದ ಎಲ್ಲಾ ಪಕ್ಷಗಳು ಪರಸ್ಪರ ಕಚ್ಚಾಡುವ ಬದಲು ಒಟ್ಟಾಗಿ ಬಿಜೆಪಿಗೆ ಸವಾಲೊಡ್ಡಬೇಕು’ ಎಂದು ಉದ್ಧವ್‌ ಬಣದ ಶಿವಸೇನೆಯ ನಾಯಕಿ ಪ್ರಿಯಾಂಕಾ ಚತುರ್ವೇದಿ ಆಗ್ರಹಿಸಿದ್ದಾರೆ. ಸಂಸತ್ತಿನ ಆವರಣದಲ್ಲಿ ಮಾತನಾಡಿದ ಅವರು, ‘ಪಕ್ಷಗಳು ತಮ್ಮ ವೈಯಕ್ತಿಕ ರಾಜಕೀಯ ಮಹತ್ವಾಕಾಂಕ್ಷೆಗಳು ಭಾರತದ ಹಿತಾಸಕ್ತಿಯನ್ನು ಹಿಮ್ಮೆಟ್ಟುತ್ತಿರುವುದನ್ನು ಅರಿಯಬೇಕು. 

ಇಂಡಿಯಾ ಕೂಟವು ತನ್ನ ಯೋಚನೆ ಹಾಗೂ ಚಟುವಟಿಕೆಗಳನ್ನು ಒಗ್ಗೂಡಿಸಿಕೊಳ್ಳಬೇಕು. ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಿಸುವ ಅವಶ್ಯಕತೆಯಿದ್ದು, ಅದಕ್ಕಾಗಿಯೇ ಇಂಡಿಯಾ ಕೂಟ ರಚನೆಯಾಗಿದೆ. ಇದನ್ನು ಮರೆತು ತಮ್ಮತಮ್ಮಲ್ಲೇ ಕಚ್ಚಾಡಿಕೊಂಡಿದ್ದರೆ ಎಲ್ಲರೂ ಸೋಲುತ್ತೇವೆ’ ಎಂದರು. ಜೊತೆಗೆ, ‘ಎಲ್ಲರೂ ಪ್ರಾಮಾಣಿಕವಾಗಿ ಚರ್ಚಿಸಿ, ಬಿಜೆಪಿ ವಿರುದ್ಧ ಹುರುಪಿನಿಂದ ಹೋರಾಡೋಣ’ ಎಂದು ಕರೆ ನೀಡಿದರು.

ಇದನ್ನೂ ಓದಿ: ಕಾಂಗ್ರೆಸ್ ಗೆಲ್ಲುತ್ತೆ ಮುಂದಿನ ಸಲ ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗ್ತಾರೆ: ಶಿವರಾಜ ತಂಗಡಗಿ ಭವಿಷ್ಯ

ಕಾಂಗ್ರೆಸ್‌ನ ಚುನಾವಣಾ ರಣತಂತ್ರದ ಬಗ್ಗೆ ಅಪಸ್ವರ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಯೂ ಶೂನ್ಯ ಸಂಪಾದಿಸಿ ಹೀನಾಯ ಸೋಲುಕಂಡ ಕಾಂಗ್ರೆಸ್‌ನ ಚುನಾವಣಾ ರಣತಂತ್ರದ ಬಗ್ಗೆ ಇದೀಗ ಕಾಂಗ್ರೆಸ್‌ನೊಳಗೇ ಅಪಸ್ವರ ಕೇಳಿಬಂದಿದೆ.‘ಪಕ್ಷ ತನ್ನ ರಾಜಕೀಯ ತಂತ್ರವನ್ನು ಸ್ಪಷ್ಟಪಡಿಸುವ ಅವಶ್ಯಕತೆಯಿದೆ. ಚುನಾವಣೆಗಳಲ್ಲಿ ಅನ್ಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೇ ಅಥವಾ ಒಬ್ಬಂಟಿಯಾಗಿ ಸ್ಪರ್ಧಿಸಬೇಕೇ ಎಂಬ ಬಗ್ಗೆ ನಿರ್ಧರಿಸಬೇಕಿದೆ. ಜೊತೆಗೆ ಪಕ್ಷದ ಸಂಘಟನೆಯಲ್ಲಿ ಮೂಲಭೂತ ಬದಲಾವಣೆ ಆಗಬೇಕಿದೆ ಎಂದು ಪಕ್ಷದ ಹಿರಿಯ ನಾಯಕ, ಸಂಸದ ತಾರೀಖ್‌ ಅನ್ವರ್‌ ಆಗ್ರಹಿಸಿದ್ದಾರೆ.

ಲೋಕಸಭೆಯಲ್ಲಿ ಬಿಜೆಪಿಯ ವಿರುದ್ಧ ಕಟ್ಟಿಕೊಂಡ ಇಂಡಿಯಾ ಕೂಟವನ್ನು ದೆಹಲಿ ಚುನಾವಣೆಯಲ್ಲೂ ಉಳಿಸಿಕೊಂಡು ಆಪ್‌ನೊಂದಿಗೆ ಸ್ಪರ್ಧಿಸಿದ್ದರೆ ಅಲ್ಲೂ ಬಿಜೆಪಿಯನ್ನು ಮಣಿಸಬಹುದಿತ್ತು ಎಂಬ ವಿಶ್ಲೇಷಣೆಗಳ ನಡುವೆಯೇ ಅನ್ವರ್‌ ಹೀಗೆ ಹೇಳಿದ್ದಾರೆ.

ಇದನ್ನೂ ಓದಿ: ಮನುಸ್ಮೃತಿ ಬಗ್ಗೆ ಟೀಕೆ: ಹಿಂದೂ ಧರ್ಮದಿಂದ ರಾಹುಲ್‌ ಗಾಂಧಿಗೆ ಬಹಿಷ್ಕಾರ!