ಸಚಿವ ಶಿವರಾಜ ತಂಗಡಗಿ ಅವರು ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ಜಾತಿ ಧರ್ಮದ ಬಗ್ಗೆ ಮಾತನಾಡುವ ಹೊರತಾಗಿ ದೇಶದ ಜನರಿಗೆ ಯಾವ ಕೊಡುಗೆ ನೀಡಿಲ್ಲ ಎಂದು ಅವರು ಪ್ರಶ್ನಿಸಿದರು. ಇವಿಎಂ ಮಷಿನ್ ಮೇಲೆ ಅನುಮಾನ ವ್ಯಕ್ತಪಡಿಸಿದ ಅವರು, ಬಿಜೆಪಿ ಕುತಂತ್ರದಿಂದ ಚುನಾವಣೆಯಲ್ಲಿ ಗೆಲ್ಲುತ್ತಿದೆ ಎಂದು ಆರೋಪಿಸಿದರು.
ದಾವಣಗೆರೆ (ಫೆ.9): ಈ ದೇಶದಲ್ಲಿ ಮುಂದೆ ಅಧಿಕಾರಕ್ಕೆ ಬಂದೇ ಬರುತ್ತೆ. ಸೂಕ್ತ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ರಾಹುಲ್ ಗಾಂಧಿಯವರು ದೇಶದ ಪ್ರಧಾನಿಗಳಾಗುತ್ತಾರೆ ಎಂದು ಸಚಿವ ಶಿವರಾಜ ತಂಗಡಗಿ ಭವಿಷ್ಯ ನುಡಿದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಮಾತನಾಡಿದ ಸಚಿವರು, ಬಿಜೆಪಿಯವರು ಈ ದೇಶಕ್ಕೆ ಏನು ಕೊಡುಗೆ ನೀಡಿದ್ದಾರೆ. ಹಳೇ ರೋಡ್ ಗೆ ಟಾರ್ ಹಾಕುವ ಕೆಲಸ ಬಿಜೆಪಿ ಮಾಡುತ್ತಿದೆ ಅಷ್ಟೆ. ಬಿಜೆಪಿ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅಧಿಕಾರಕ್ಕೆ ಬಂದಂದಿನಿಂದ ಬರೀ ಜಾತಿ ಧರ್ಮದ ಬಗ್ಗೆ ಮಾತನಾಡುವ ಹೊರತಾಗಿ ದೇಶದ ಜನರಿಗೆ ಯಾವ ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ನಾವು ರಾಜನೀತಿಯನ್ನು ಬದಲಿಸಿದ್ದೇವೆ | BJP Wins Delhi । PM Modi speech | Suvarna News
ದೇಶಕ್ಕಾಗಿ ಬಿಜೆಪಿಯವರು ಏನೂ ಮಾಡಿಲ್ಲ ಅನ್ನೋದು ಜನರಿಗೆ ಗೊತ್ತಿದೆ. ದೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆಡಳಿತ ವಿರೋಧಿ ಅಲೆಯಿದೆ. ಅದ್ಯಾಗೂ ಚುನಾವಣೆಯಲ್ಲಿ ಬಿಜೆಪಿ ಕುತಂತ್ರದಿಂದ ಗೆಲ್ಲುತ್ತಿದೆ. ನಮಗೆ ಈಗಲೂ ಇವಿಎಂ ಮಷಿನ್ ಮೇಲೆ ಅನುಮಾನವಿದೆ. ದೇಶದ ಜನಕ್ಕೆ ಅನುಮಾನ ಬರಬಾರದು ಎಂದು ಅಲ್ಲಲ್ಲಿ ಗೆಲ್ಲಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಅದುಬಿಟ್ಟರೆ ಉಳಿದ ಕಡೆ ಇವಿಎಂ ಮಷಿನ್ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದರು.
