ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಚಂಡೀಗಢ ಶಾಖೆಯಲ್ಲಿ ನಡೆದ ₹590 ಕೋಟಿ ವಂಚನೆ ಪ್ರಕರಣದಲ್ಲಿ, ಮಾಜಿ ಮ್ಯಾನೇಜರ್ ರಿಭವ್ ರಿಷಿ ತನ್ನ ಪತ್ನಿಯ ಕಂಪನಿಗೆ ಹಣ ವರ್ಗಾಯಿಸಿರುವುದು ಬೆಳಕಿಗೆ ಬಂದಿದೆ. ಹರಿಯಾಣ ಭ್ರಷ್ಟಾಚಾರ ವಿರೋಧಿ ದಳವು ರಿಷಿ, ಆತನ ಪತ್ನಿ ಸೇರಿದಂತೆ ನಾಲ್ವರನ್ನು ಬಂಧಿಸಿದೆ,

ಚಂಡೀಗಢ (ಫೆ.25): ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಚಂಡೀಗಢ ಶಾಖೆಯಲ್ಲಿ ನಡೆದ ₹590 ಕೋಟಿ ವಂಚನೆಯ ಹಿಂದೆ ಅದೇ ಬ್ಯಾಂಕ್‌ನ ಮಾಜಿ ಮ್ಯಾನೇಜರ್ ಮಾಸ್ಟರ್ ಪ್ಲಾನ್ ಇರುವುದು ಪತ್ತೆಯಾಗಿದೆ. ಹರಿಯಾಣ ಸರ್ಕಾರದ ಇಲಾಖೆಗಳ ಖಾತೆಯಲ್ಲಿದ್ದ ಹಣವನ್ನು ಮ್ಯಾನೇಜರ್ ತನ್ನ ಪತ್ನಿ ಮತ್ತು ಭಾವನಿಗೆ ಸೇರಿದ ಕಂಪನಿಗೆ ಅಕ್ರಮವಾಗಿ ವರ್ಗಾಯಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಹರಿಯಾಣದ ಭ್ರಷ್ಟಾಚಾರ ವಿರೋಧಿ ದಳ (ACB) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಬ್ರಾಂಚ್ ಮ್ಯಾನೇಜರ್ ರಿಭವ್ ರಿಷಿ, ಮಾಜಿ ರಿಲೇಶನ್‌ಶಿಪ್ ಮ್ಯಾನೇಜರ್ ಅಭಯ್, ರಿಭವ್ ಪತ್ನಿ ಸ್ವಾತಿ ಸಿಂಗ್ಲಾ ಮತ್ತು ಆಕೆಯ ಸಹೋದರ ಅಭಿಷೇಕ್ ಸಿಂಗ್ಲಾ ಅವರನ್ನು ಬಂಧಿಸಿದೆ.

ಪತ್ನಿಯ ಕಂಪನಿಗೆ ₹300 ಕೋಟಿ

ಹಗರಣದ ಒಟ್ಟು ಮೊತ್ತದಲ್ಲಿ ಸುಮಾರು ₹300 ಕೋಟಿ ಹಣವನ್ನು 'ಸ್ವಸ್ತಿಕ್‌ ದೇಶ್ ಪ್ರಾಜೆಕ್ಟ್ಸ್' ಎಂಬ ಕಂಪನಿಗೆ ವರ್ಗಾಯಿಸಲಾಗಿತ್ತು. ಈ ಕಂಪನಿಯಲ್ಲಿ ರಿಭವ್ ಪತ್ನಿ ಸ್ವಾತಿ ಶೇ. 75 ಮತ್ತು ಆಕೆಯ ಸಹೋದರ ಅಭಿಷೇಕ್ ಶೇ. 25 ರಷ್ಟು ಪಾಲುದಾರಿಕೆ ಹೊಂದಿದ್ದಾರೆ.

ಕೆಲಸಕ್ಕೆ ರಾಜೀನಾಮೆ

ಮುಖ್ಯ ಆರೋಪಿಗಳಾದ ರಿಭವ್ ಮತ್ತು ಅಭಯ್ ಸುಮಾರು ಆರು ತಿಂಗಳ ಹಿಂದೆಯೇ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿದ್ದರು ಎಂದು ಎಸಿಬಿ ಮಹಾನಿರ್ದೇಶಕ ಎ.ಎಸ್. ಚಾವ್ಲಾ ತಿಳಿಸಿದ್ದಾರೆ.

ವಂಚನೆ ಬೆಳಕಿಗೆ ಬಂದಿದ್ದು ಹೇಗೆ?

ಹರಿಯಾಣ ಸರ್ಕಾರದ ಇಲಾಖೆಯೊಂದು ತನ್ನ ಖಾತೆಯನ್ನು ಮುಚ್ಚಿ, ಹಣವನ್ನು ಬೇರೆ ಬ್ಯಾಂಕಿಗೆ ವರ್ಗಾಯಿಸಲು ಐಡಿಎಫ್‌ಸಿ ಬ್ಯಾಂಕಿಗೆ ಕೋರಿಕೆ ಸಲ್ಲಿಸಿತ್ತು. ಈ ಪ್ರಕ್ರಿಯೆಯ ವೇಳೆ ಬ್ಯಾಂಕ್ ದಾಖಲೆಗಳಲ್ಲಿರುವ ಮೊತ್ತ ಮತ್ತು ವಾಸ್ತವವಾಗಿ ಖಾತೆಯಲ್ಲಿರುವ ಬಾಕಿ ನಡುವೆ ಭಾರಿ ವ್ಯತ್ಯಾಸವಿರುವುದು ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದೇ ರೀತಿಯ ವ್ಯತ್ಯಾಸಗಳು ಹರಿಯಾಣ ಸರ್ಕಾರದ ಇತರ ಖಾತೆಗಳಲ್ಲೂ ಪತ್ತೆಯಾದಾಗ ಹಗರಣದ ಗಂಭೀರತೆ ಅರಿವಿಗೆ ಬಂದಿದೆ.

ತನಿಖಾಧಿಕಾರಿಗಳು ಹೇಳುವುದೇನು?

"ರಿಭವ್ ಮತ್ತು ಅಭಯ್ ಈ ಇಡೀ ಹಗರಣದ ರೂವಾರಿಗಳು. ₹300 ಕೋಟಿ ಹಣವು ಸ್ವಸ್ತಿಕ್‌ ದೇಶ್ ಪ್ರಾಜೆಕ್ಟ್ಸ್ ಕಂಪನಿಗೆ ವರ್ಗಾವಣೆಯಾಗಿ ಅಲ್ಲಿಂದ ಬೇರೆಡೆಗೆ ಹೋಗಿದೆ. ಹರಿಯಾಣದ ಸರ್ಕಾರಿ ಇಲಾಖೆಗಳ ಖಾತೆಯನ್ನು ರಾಜ್ಯದ ವ್ಯಾಪ್ತಿಯ ಹೊರಗೆ (ಚಂಡೀಗಢ) ತೆರೆಯಲು ಹಿರಿಯ ಮ್ಯಾನೇಜ್‌ಮೆಂಟ್ ಹೇಗೆ ಅನುಮತಿ ನೀಡಿತು ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ," ಎಂದು ಚಾವ್ಲಾ ತಿಳಿಸಿದ್ದಾರೆ. ವಂಚನೆಯ ಹಣವನ್ನು ಮೊಹಾಲಿಯಲ್ಲಿರುವ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಶಾಖೆಗೆ ವರ್ಗಾಯಿಸಲಾಗಿತ್ತು.

ಬ್ಯಾಂಕ್‌ನಿಂದ ₹583 ಕೋಟಿ ಮರುಪಾವತಿ

ತನಿಖೆ ಪ್ರಗತಿಯಲ್ಲಿರುವಾಗಲೇ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮಹತ್ವದ ನಿರ್ಧಾರ ಕೈಗೊಂಡಿದೆ. ಹರಿಯಾಣ ಸರ್ಕಾರದ ಇಲಾಖೆಗಳು ಕ್ಲೈಮ್ ಮಾಡಿದ ಪೂರ್ಣ ಮೊತ್ತವನ್ನು (ಅಸಲು ಮತ್ತು ಬಡ್ಡಿ ಸೇರಿ ಒಟ್ಟು ₹583 ಕೋಟಿ) ಬ್ಯಾಂಕ್ ಈಗಾಗಲೇ ಮರುಪಾವತಿಸಿದೆ.

ಬ್ಯಾಂಕ್ ಹೇಳಿಕೆ: "ತನಿಖೆ ಪೂರ್ಣಗೊಳ್ಳುವವರೆಗೆ ನಾವು ಹಣವನ್ನು ತಡೆಹಿಡಿಯಲಿಲ್ಲ. ನಮ್ಮ 'ಗ್ರಾಹಕರಿಗೆ ಮೊದಲ ಆದ್ಯತೆ' (Customer First) ಎಂಬ ತತ್ವದ ಅಡಿಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ. ಬ್ಯಾಂಕಿನ ಈ ವೃತ್ತಿಪರ ಮತ್ತು ತ್ವರಿತ ಸ್ಪಂದನೆಗೆ ಹರಿಯಾಣ ಸರ್ಕಾರವು ಮೆಚ್ಚುಗೆ ವ್ಯಕ್ತಪಡಿಸಿದೆ," ಎಂದು ಬ್ಯಾಂಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.