ಹೈದರಾಬಾದ್ನ ಜ್ಯುಬಿಲಿಹಿಲ್ಸ್ನಲ್ಲಿ ನಟ ನಂದಮೂರಿ ಬಾಲಕೃಷ್ಣ ಅವರ ನಿವಾಸದ ಮುಂದೆ 4 ಕೋಟಿ ಮೌಲ್ಯದ ಫೆರಾರಿ ಕಾರು ಭೀಕರ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು, ಸರಣಿ ಅಪಘಾತಕ್ಕೆ ಕಾರಣವಾಗಿ ಹಲವರು ಗಾಯಗೊಂಡಿದ್ದಾರೆ.
ಜ್ಯುಬಿಲಿಹಿಲ್ಸ್ನಲ್ಲಿ ಭೀಕರ ಅಪಘಾತ:
ಹೈದರಾಬಾದ್ನ ಜ್ಯುಬಿಲಿಹಿಲ್ಸ್ ನಗರದ ಅತ್ಯಂತ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದು ಇಲ್ಲಿ ಟಾಲಿವುಡ್ನ ಅನೇಕ ಸಿನಿಮಾ ತಾರೆಯರು ಸೆಲೆಬ್ರಿಟಿಗಳ ನಿವಾಸಗಳಿದ್ದು, ಅನೇಕರು ಇಲ್ಲಿ ವಾಸ ಮಾಡ್ತಾರೆ. ಈ ಪ್ರದೇಶದಲ್ಲಿರುವ ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರ ನಿವಾಸದ ಮುಂದೆ ಇಂದು ಭೀಕರ ಅಪಘಾತವೊಂದು ಸಂಭವಿಸಿದ್ದು, ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ಘಟನೆಯಲ್ಲಿ 4 ಕೋಟಿ ಮೌಲ್ಯದ ಐಷಾರಾಮಿ ಫೆರಾರಿ ಕಾರು ನಜ್ಜುಗುಜ್ಜಾಗಿದೆ. ವೇಗವಾಗಿ ಬಂದ ಈ ಫೆರಾರಿ ಕಾರು ಚಾಲಕನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಲ್ಲಿದ್ದ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ಡಿವೈಡರ್ನಿಂದ ಹಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮೂರು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಈ ಸರಣಿ ಅಪಘಾತದಿಂದ ಸ್ಥಳದಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಈ ಪ್ರದೇಶ ಸದಾ ಜನಜಂಗುಳಿಯಿಂದ ತುಂಬಿರುವ ಪ್ರದೇಶವಾಗಿದ್ದು, ಈ ಕಾರು ಅಪಘಾತ ಹಲವು ಗಂಟೆಗಳ ಕಾಲ ಸಂಚಾರ ದಟ್ಟಣೆಗೆ ಕಾರಣವಾಯ್ತು.
4 ಕೋಟಿ ಮೌಲ್ಯದ ಫೆರಾರಿ ಧ್ವಂಸ:
ಪ್ರಾಥಮಿಕ ವರದಿಗಳ ಪ್ರಕಾರ, ಕಾರು ಅತಿ ವೇಗದಲ್ಲಿದ್ದು, ಚಾಲಕನ ನಿಯಂತ್ರಣ ತಪ್ಪಿ ಹೋಯಿತು. ಪಕ್ಕದ ರಸ್ತೆಗೆ ಹಾರಿ ನಿಂತಿದ್ದ ಹಲವಾರು ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು, ನಂತರ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಭಾನುವಾರ ಬೆಳಗ್ಗೆ 10:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ರಭಸ ಎಷ್ಟು ತೀವ್ರವಾಗಿತ್ತೆಂದರೆ ಹಾನಿಗೊಳಗಾದ ವಾಹನಗಳು ರಸ್ತೆಯಾದ್ಯಂತ ಚದುರಿಹೋಗಿವೆ. ಅವುಗಳ, ಅವಶೇಷಗಳು ಬಹಳ ದೂರವರೆಗೆ ಹಾರಿ ಹೋಗಿವೆ.
ಇದನ್ನೂ ಓದಿ: ಮದುವೆಯ ಸುಳಿವು ನೀಡಿದ ಬಿಗ್ಬಾಸ್ ಬೆಡಗಿ: ವೀಡಿಯೋ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್
ಅಪಘಾತದ ವೇಳೆ ಜೋರಾಗಿ ಸದ್ದು ಕೇಳಿ ಬಂದಿದ್ದು, ಅಲ್ಲಿದ್ದ ಸುತ್ತಮುತ್ತಲ ನಿವಾಸಿಗಳು ಮನೆಯಿಂದ ಹೊರಗೋಡಿ ಬಂದಿದ್ದಾರೆ. ತುರ್ತು ಸೇವೆಗಳು ಸ್ಥಳಕ್ಕೆ ತಲುಪುವ ಮೊದಲು ಅಲ್ಲಿದ್ದ ಗಾಯಾಳುಗಳಿಗೆ ಸಹಾಯ ಮಾಡಲು ಪ್ರಯತ್ನಿಸಿದರು. ಈ ಘಟನೆಯಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಗಳಲ್ಲಿ ಇದ್ದ ಅನೇಕ ವ್ಯಕ್ತಿಗಳು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಆದರೆ ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.
ಇದನ್ನೂ ಓದಿ: ಇರಾನ್ ತೊರೆಯುವಂತೆ ತಮ್ಮ ನಾಗರಿಕರಿಗೆ ಸೂಚಿಸಿದ ಸ್ವೀಡನ್, ಸೆರ್ಬಿಯಾ
ಅಪಘಾತದ ಬಗ್ಗೆ ಮಾಹಿತಿ ಪಡೆದ ಸ್ವಲ್ಪ ಸಮಯದ ನಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಹಾನಿಗೊಳಗಾದ ವಾಹನಗಳನ್ನು ತೆರವುಗೊಳಿಸಲು ಪ್ರಾರಂಭಿಸಿ ಸಂಚಾರವನ್ನು ಸಾಮಾನ್ಯಗೊಳಿಸಲು ಪ್ರಯತ್ನಿಸಿದ್ದಾರೆ. ಸುತ್ತಮುತ್ತಲಿನ ಜನರು ನೋಡುತ್ತಿದ್ದಂತೆಯೇ ಗಾಯಾಳುಗಳನ್ನು ಆಂಬ್ಯುಲೆನ್ಸ್ಗಳು ಕರೆದೊಯ್ಯುತ್ತಿರುವುದು ಕಂಡುಬಂದಿತು. ಈ ಅಪಘಾತದಿಂದಾಗಿ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಪರಿಸ್ಥಿತಿಯನ್ನು ನಿರ್ವಹಿಸಲು ಮತ್ತು ಹೆಚ್ಚಿನ ಅನಾಹುತ ತಡೆಯಲು ಪೊಲೀಸರು ಶ್ರಮಿಸಿ ವಾಹನಗಳನ್ನು ಪರ್ಯಾಯ ಮಾರ್ಗಗಳಿಗೆ ತಿರುಗಿಸಿದರು.
ಈ ವಾಹನವೂ ಈಮಣಿ ವೆಂಕಟರಾಜ ರೆಡ್ಡಿ ಎಂಬುವವರ ಹೆಸರಿನಲ್ಲಿ ನೋಂದಣಿಯಾಗಿದ್ದು, ಈ ವಾಹನವನ್ನು ಈ. ಕ್ರಾಂತಿರೆಡ್ಡಿ ಎಂಬುವವರು ಚಾಲನೆ ಮಾಡುತ್ತಿದ್ದರು. ಮದುವೆಗೆ ಅವರು ಹೋಗುತ್ತಿದ್ದರು ಎಂದು ವರದಿಯಾಗಿದ್ದು, ಮದ್ಯಪಾನ ಪರೀಕ್ಷೆ ವೇಳೆ ಅವರು ಮದ್ಯ ಸೇವಿಸಿಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ ಅಪಘಾತಕ್ಕೆ ಕಾರಿನ ಬ್ರೇಕ್ ಮತ್ತು ಎಂಜಿನ್ನಲ್ಲಿ ಉಂಟಾದ ತಾಂತ್ರಿಕ ದೋಷ ಕಾರಣ ಎಂದು ಹೇಳಲಾಗಿದೆ. ಮೋಟಾರು ವಾಹನ ನಿರೀಕ್ಷಕರ ತಪಾಸಣೆಯ ನಂತರ ಖಚಿತ ಕಾರಣ ತಿಳಿದು ಬರಲಿದೆ.


