ಆ.28ಕ್ಕೆ ವಿಶ್ವ ಹಿಂದೂ ಪರಿಷತ್ ಶೋಭಯಾತ್ರೆ, ಮುಂಜಾಗ್ರತೆಯಾಗಿ 2 ದಿನ ಇಂಟರ್ನೆಟ್ ಸ್ಥಗಿತ!
ಆಗಸ್ಟ್ 28ರಂದು ವಿಶ್ವ ಹಿಂದೂ ಪರಿಷತ್ ಶೋಭಯಾತ್ರೆ ಕೈಗೊಂಡಿದೆ. ಈಗಾಗಲೇ ಅನುಮತಿ ಪಡೆದಿರುವ ವಿಶ್ವ ಹಿಂದೂ ಪರಿಷತ್ ಎಲ್ಲಾ ತಯಾರಿ ಮಾಡಿಕೊಂಡಿದೆ. ಇತ್ತ ಶೋಭಯಾತ್ರೆ ಯಾವುದೇ ಅಡೆ ತಡೆ ಇಲ್ಲದೆ ಸಾಗಲು ಪೊಲೀಸರು 2 ದಿನ ಇಂಟರ್ನೆಟ್ ಸ್ಥಗಿತಗೊಳಿಸಿದ್ದಾರೆ.
ಹರ್ಯಾಣ(ಆ.26) ಯಾವುದೇ ಶೋಭಯಾತ್ರೆ ಅಥವಾ ಧಾರ್ಮಿಕ ಮೆರವಣಿಗೆ ಸುಸೂತ್ರವಾಗಿ ಆಯೋಜಿಸುವುದು ದೊಡ್ಡ ಸವಾಲು. ಕಾರಣ ಕೋಮು ಸಂಘರ್ಷ, ಕಲ್ಲು ತೂರಾಟ, ಹಿಂಸಾಚಾರ ಸೇರಿದಂತೆ ಹಲವು ಅಹಿತಕರ ಘಟನೆಗಳು ಹೆಚ್ಚು. ಈಗಾಗಲೇ ಹರ್ಯಾಣದ ನುಹ್ ಶೋಭಯಾತ್ರೆಯಿಂದ ಹೊತ್ತಿ ಉರಿದಿದೆ. ಕೋಮು ಸಂಘರ್ಷಕ್ಕೆ ಕಾರಣವಾದ ನುಹ್ ಪ್ರದೇಶದಲ್ಲಿ ಇದೀಗ ವಿಶ್ವ ಹಿಂದೂ ಪರಿಷತ್ ಆಗಸ್ಟ್ 28 ರಂದು ಶೋಭಯಾತ್ರೆ ಆಯೋಜನೆ ಮಾಡಿದೆ. ಹಿಂಸಾಪೀಡಿತ ನುಹ್ ಪ್ರದೇಶದಲ್ಲೇ ಈ ಶೋಭಯಾತ್ರೆ ಸಾಗುವ ಕಾರಣ ಪೊಲೀಸರು ಮುಂಜಾಗ್ರತ ಕ್ರಮವಾಗಿ ಎರಡು ದಿನ ಇಂಟರ್ನೆಟ್ ಸ್ಥಗಿತಗೊಳಿಸಿದ್ದಾರೆ.
ಇಂದು(ಆ.26) ಮಧ್ಯರಾತ್ರಿ 12 ರಿಂದ ಆಗಸ್ಟ್ 28ರ ಮಧ್ಯರಾತ್ರಿ 12ರ ವರೆಗೆ ಹರ್ಯಾಣದ ನುಹ್ ಜಿಲ್ಲೆಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಪ್ರಚೋದಿತ ಘೋಷಣೆ, ಸಮುದಾಯಗಳನ್ನು ಟಾರ್ಗೆಟ್ ಮಾಡಿವ ಯಾವುದೇ ವಿಚಾರಗಳನ್ನು ಶೋಭಯಾತ್ರೆಯಲ್ಲಿರಬಾರದು. ಶೋಭಯಾತ್ರೆ ಶಾಂತಿಯುತವಾಗಿ ಸಾಗುವಂತೆ ಆಯೋಜಕರು ನೋಡಿಕೊಳ್ಳಬೇಕು ಎಂದು ತಾಕೀತು ಮಾಡಲಾಗಿದೆ.
Haryana ಕೋಮುಗಲಭೆ ಎಫೆಕ್ಟ್: ಮುಸ್ಲಿಮರನ್ನು ಬಹಿಷ್ಕರಿಸಲು ನಿರ್ಧರಿಸಿದ 14 ಗ್ರಾಮಗಳು
ಕಳೆದ ಬಾರಿ ವಿಶ್ವ ಹಿಂದೂ ಪರಿಷತ್ ಶೋಭಯಾತ್ರೆ ಮೇಲೆ ಅನ್ಯಕೋಮಿನ ತಂಡ ಕಲ್ಲುತೂರಾಟ ನಡೆಸಿತ್ತು. ಇದರ ಪರಿಣಾಮ ನುಹ್ ಜಿಲ್ಲೆ ಹೊತ್ತಿ ಉರಿದಿತ್ತು. ವಾಹನಗಳು, ಅಂಗಡಿ ಮುಂಗಡ್ಡು ಧ್ವಂಸಗೊಂಡಿತ್ತು. ಎಲ್ಲೆಡೆ ಬೆಂಕಿ ಕೆನ್ನಾಲಿಗೆ ಹರಡಿತ್ತು. ಸಂಘರ್ಷ, ಹತ್ಯೆಗಳು ಭಯಾನಕತೆಯನ್ನು ಸಾರಿಹೇಳುತ್ತಿತ್ತು. ಹೀಗಾಗಿ ಜುಲೈ 31 ರಂದು ಹರ್ಯಾಣ ಪೊಲೀಸರು ನುಹ್ ಜಿಲ್ಲೆಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದ್ದರು. ಪರಿಸ್ಥಿತಿ ನಿಯಂತ್ರಣಕ್ಕ ತರಲು ಪೊಲೀಸರು ಇಂಟರ್ನೆಟ್ ಸ್ಥಗಿತಗೊಳಿಸಿದ್ದರು.
ಜುಲೈ ತಿಂಗಳ ಅಂತ್ಯದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಶೋಭಯಾತ್ರೆ ಹಿಂಸಾಚಾರಕ್ಕೆ ತಿರುಗಿತ್ತು. ನೂಹ್ ಪಟ್ಟಣದಲ್ಲಿ ಆರಂಭವಾಗಿದ್ದ ಕೋಮುಗಲಭೆಯಲ್ಲಿನ ಹಿಂಸಾಚಾರ ಮುಂದುವರೆದಿದ್ದು, ಉದ್ರಿಕ್ತರು ಘಟನೆಗೆ ಪ್ರತೀಕಾರವಾಗಿ ಗುರುಗ್ರಾಮದಲ್ಲಿರುವ ಮಸೀದಿಯೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಇಮಾಂ ಸೇರಿದಂತೆ ಹಲವರು ಮೃತಪಟ್ಟಿದ್ದರು.
ಹಿಂದೂ ಯಾತ್ರೆ ಮೇಲೆ ಕಲ್ಲೆಸೆಯಲು ಬಳಸಿದ ಹೊಟೆಲ್ ಕಟ್ಟಡವನ್ನೇ ಧ್ವಂಸಗೊಳಿಸಿದ ಸರ್ಕಾರ!
ನೂಹ್ನಲ್ಲಿ ವಿಎಚ್ಪಿ ಹಮ್ಮಿಕೊಂಡಿದ್ದ ಜಲಾಭಿಷೇಕ ಯಾತ್ರೆಯಲ್ಲಿ ಕ್ರಿಮಿನಲ್ ಹಿನ್ನೆಲೆಯ ಗೋರಕ್ಷಕ ಮೋನು ಮನೇಸಾರ್ ಭಾಗಿಯಾಗುವುದಾಗಿ ಹೇಳಿದ್ದು, ಈ ಸಂಘರ್ಷಕ್ಕೆ ಕಾರಣ ಎನ್ನಲಾಗಿದೆ. ಈ ಕೋಮುಗಲಭೆ ನುಹ್ ಸಮೀಪದ ಗುರುಗ್ರಾಮಕ್ಕೂ ಹಬ್ಬಿದ್ದು, ಸೋಮವಾರ ತಡರಾತ್ರಿ ಮಸೀದಿಗೆ ನುಗ್ಗಿದ ಉದ್ರಿಕ್ತರು ಬೆಂಕಿ ಹಚ್ಚಿದ್ದು, ಇಮಾಂ ಮೇಲೆ ದಾಳಿ ಮಾಡಿದ್ದಾರೆ. ಈ ಘಟನೆಯಲ್ಲಿ ಇಮಾಂ ಮೃತಪಟ್ಟಿದ್ದಾರೆ. ಇದೇ ವೇಳೆ, ಗುರುಗ್ರಾಮದಲ್ಲಿ ಮಂಗಳವಾರ ಸಂಜೆ ವೇಳೆ ಕೆಲವು ರೆಸ್ಟೋರೆಂಟ್ ಹಾಗೂ ಅಂಗಡಿಗಳಿಗೆ ನುಗ್ಗಿ ಬೆಂಕಿ ಹಚ್ಚಲಾಗಿತ್ತು.
ನುಹ್ ಗಲಭೆ ನಿಯಂತ್ರಿಸಲು 4 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ದೆಹಲಿ- ಗುರುಗ್ರಾಮ ಮತ್ತು ದೆಹಲಿ-ಫರೀದಾಬಾದ್ ನಡುವಿನ ಗಡಿ ಪ್ರದೇಶದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ದೆಹಲಿಯಲ್ಲಿರುವ ಸೂಕ್ಷ್ಮ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಿರುವ ಪೊಲೀಸರು ಗಸ್ತು ನಡೆಸಿದ್ದರು.. ಸುಳ್ಳುಸುದ್ದಿ ಹರಡುವುದು ಮತ್ತು ಸುಖಾಸುಮ್ಮನೆ ಗುಂಪು ಸೇರುವುದನ್ನು ತಡೆಗಟ್ಟಲು ಪೊಲೀಸರು ಕ್ರಮ ಕೈಗೊಂಡಿದ್ದರು.