ಜಡತ್ವ ಹಿಂದೂ ಸಮಾಜದ ಭಾಗವಲ್ಲ: ಸಲಿಂಗಿ ಮದುವೆಗೆ ಚರ್ಚ್ ಏಕೆ ಬಿಡಲಿಲ್ಲ?
ಜಡತ್ವ ಹಿಂದೂ ಸಮಾಜದ ಭಾಗವೇ?| ಸರ್ವರನ್ನು ಒಳಗೊಳ್ಳುವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರುವ ಹಿಂದೂ ಧರ್ಮ| ಸಲಿಂಗ ಕಾಮ ಅಪರಾಧವಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪು| ಸುಪ್ರೀಂ ತೀರ್ಪು ವಿರೋಧಿಸುವ ಧಾರ್ಮಿಕ ಮೂಲಭೂತವಾದಿಗಳು| ಹೇರ್ ಸ್ಟೈಲಿಸ್ಟ್ ಡೇನಿಯಲ್ ಬಯೂರ್ ಹಾಗೂ ಟೈರೋನ್ ಸಲಿಂಗಿ ವಿವಾಹ| ಡೇನಿಯಲ್-ಟೈರೋನ್ ಸಲಿಂಗಿ ವಿವಾಹಕ್ಕೆ ಚರ್ಚ್ ವಿರೋಧ| ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಲಿಂಗಿ ಜೋಡಿ|
ತಿರುವನಂತಪುರಂ(ಜ.12): ಹಿಂದೂ ಸಮಾಜ ಜಡತ್ವದಿಂದ ಕೂಡಿದೆ ಎಂದು ಈ ದೇಶದಲ್ಲಿ ವಾದಿಸುವವರಿಗೇನೂ ಕಮ್ಮಿಯಿಲ್ಲ. ಜಡತ್ವದ ಸಾಂಪ್ರದಾಯಿಕ ಸಮಾಜ ನಿರ್ಮಾಣ ಅಪಾಯಕಾರಿ ಎಂದೆಲ್ಲಾ ಬೊಬ್ಬೆ ಇಡುವವರು ಇತರ ಧರ್ಮಗಳಲ್ಲಿನ ಜಡತ್ವದ ಕುರಿತು ಪ್ರಜ್ಞಾಪೂರ್ವಕವಾಗಿಯೇ ಕುರುಡರಾಗಿರುತ್ತಾರೆ.
ಹಿಂದೂ ಧರ್ಮ ಕೂಡಿ ಬಾಳುವ, ಹೊಂದಾಣಿಕೆಯ ಹಾಗೂ ಸರ್ವರನ್ನೂ ಒಳಗೊಳ್ಳುವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿದೆ ಎಂಬುದು ಸರ್ವವಿಧಿತ. ಆಸ್ತಿಕ, ನಾಸ್ತಿಕ, ಚಾರ್ವಾಕರೆಲ್ಲರನ್ನೂ ಸಮಾನವಾಗಿ ಕಾಣುವ ಹಿಂದೂ ಧರ್ಮ ಕಾಲಕ್ಕೆ ತಕ್ಕಂತೆ ತನ್ನನ್ನು ಮಾರ್ಪಡಿಸಿಕೊಳ್ಳುವ ಶಕ್ತಿ ಹೊಂದಿದೆ. ಇದೇ ಕಾರಣಕ್ಕೆ ಸಾವಿರಾರು ವರ್ಷಗಳಿಂದ ಅದೆಷ್ಟೋ ನಾಗರಿಕತೆಗಳು ಅಳಿದು ಹೋದರೂ, ಭಾರತೀಯ ನಾಗರಿಕತೆ ಇನ್ನೂ ತಲೆ ಎತ್ತಿ ನಿಂತಿರುವುದು.
ಸಲಿಂಗ ಕಾಮ ಅಪರಾಧವಲ್ಲ ಎಂದ ಸುಪ್ರೀಂಕೋರ್ಟ್
ಸಲಿಂಗ ಕಾಮ ಅಪರಾಧವಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಈ ದೇಶದ ಎಲ್ಲ ವರ್ಗ ಅತ್ಯಂತ ಹರ್ಷದಿಂದ ಸ್ವಾಗತಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಧಾರ್ಮಿಕ ಕಟ್ಟುಪಾಡುಗಳ ಪರ ಇರುವ ಕೆಲವು ಜನ ಹಾಗೂ ಸಂಘಟನೆಗಳು ಈ ತೀರ್ಪನ್ನು ವಿರೋಧಿಸಿದ್ದೂ ಸುಳ್ಳಲ್ಲ. ಎಲ್ಲ ಸಮಾಜದಲ್ಲೂ ಭಿನ್ನ ಭಿನ್ನ ಅಭಿಪ್ರಾಯಗಳಿರುವುದು ಪ್ರಜಾಪ್ರಭುತ್ವದ ಸೌಂದರ್ಯ ಎನ್ನಬಹುದು.
ಆಧುನಿಕ ಭಾರತದಲ್ಲಿ ಲಿಂಗಭೇದಕ್ಕೆ ಸ್ಥಾನವಿಲ್ಲ ಎಂಬುದು ಸುಪ್ರೀಂಕೋರ್ಟ್ ತೀರ್ಪು ಸಾರಿ ಹೇಳಿತ್ತು. ಈ ಕಾರಣಕ್ಕೆ ದೇಶದ ಎಲ್ಲ ಜನ ಸಮುದಾಯ ಈ ತೀರ್ಪನ್ನು ಸ್ವಾಗತಿಸಿ ಸಲಿಂಗಿ ಸಂಬಂಧಕ್ಕೆ ಗೌರವ ನೀಡಿದೆ.
ಸಲಿಂಗ ಕಾಮಕ್ಕೆ ಕಲ್ಲು ಹೊಡೆದು ಹತ್ಯೆ ಶಿಕ್ಷೆ
ಆದರೆ ಧಾರ್ಮಿಕ ಕಟ್ಟುಪಾಡುಗಳಿಗೆ ಜೋತು ಬಿದ್ದಿರುವ ಕೆಲವು ಮೂಲಭೂತವಾದಿಗಳು ಈ ತೀರ್ಪನ್ನು ವಿರೋಧಿಸುತ್ತವೆ. ಇದೇ ಕಾರಣಕ್ಕೆ ಸಲಿಂಗಿ ಮದುವೆಗೆ ಇವು ವಿರೋಧ ವ್ಯಕ್ತಪಡಿಸುತ್ತವೆ.
ಪ್ರಖ್ಯಾತ ಹೇರ್ ಸ್ಟೈಲಿಸ್ಟ್ ಡೇನಿಯಲ್ ಬಯೂರ್ ಹಾಗೂ ಟೈರೋನ್ ಇತ್ತೀಚಿಗೆ ಸಲಿಂಗಿ ವಿವಾಹವಾಗಿದ್ದು, ಇವರ ಮದುವೆಗೆ ಚರ್ಚ್ನಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣಕ್ಕೆ ಹಿಂದೂ ಸಂಪ್ರದಾಯದಂತೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಹರಸುವ ಮನಸ್ಸಿರಲಿ: ಈ ಸಲಿಂಗಿಳ ಪ್ರಿ ವೆಡ್ಡಿಂಗ್ ಶೂಟ್ ಸದಾ ನೆನಪಿರಲಿ!
ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಸಲಿಂಗಿ ಮದುವೆಗೆ ಅವಕಾಶವಿಲ್ಲ ಎಂಬ ಕಾರಣಕ್ಕೆ ಏನಿಯಲ್ ಹಾಗೂ ಟೈರೋನ್ ಮದುವೆಗೆ ಚರ್ಚ್ ವಿರೋಧ ವ್ಯಕ್ತಪಡಿಸಿತ್ತು. ಈ ಕಾರಣಕ್ಕೆ ಈ ಜೋಡಿ ಹಿಂದೂ ಸಂಪ್ರದಾಯದಂತೆ ಹಸೆಮಣೆ ಏರಿದೆ.
ಈ ಕುರಿತು ಟ್ವೀಟ್ ಮಾಡಿರುವ ಕೇರಳದ ಚಾಥೂಟ್ಟಿ ಎಂಬುವವರು ಕ್ರಿಶ್ಚಿಯನ್ ಹಾಗೂ ಇಸ್ಲಾಂ ಧರ್ಮಗಳು ಸಲಿಂಗಿ ಮದುವೆಯನ್ನು ವಿರೋಧಿಸುತ್ತವೆ. ಆದರೆ ದೇಶದ LGBT ಸಮುದಾಯ ಚರ್ಚ್ ಹಾಗೂ ಮಸೀದಿಗಳ ಮುಂದೆ ಪ್ರತಿಭಟನೆಯನ್ನೇಕೆ ನಡೆಸುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಚಾಥೂಟ್ಟಿ ಅವರ ಟ್ವೀಟ್ ಇದೀಗ ಭಾರೀ ವೈರಲ್ ಆಗಿದ್ದು, ಹಿಂದೂ ಸಮಾಜವನ್ನು ಜಡತ್ವಕ್ಕೆ ಹೋಲಿಸುವವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.