ವಾರಣಾಸಿಯ ಗ್ಯಾನವಾಪಿ ಮಸೀದಿ ಎನ್ನಲಾಗುವ ಕಟ್ಟಡದ ಹೊರಗೋಡೆಯ ಮೇಲೆ ಹಿಂದೂ ದೇವರ ವಿಗ್ರಹದ ಕೆತ್ತನೆಗಳಿವೆ. ಇದರ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ವಾರಣಾಸಿ ಜಿಲ್ಲಾ ಕೋರ್ಟ್‌ಗೆ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ಕೋರ್ಟ್‌ ನಡೆಸಿದೆ. 

ಲಕ್ನೋ (ಆ. 24): ಇಲ್ಲಿನ ಗ್ಯಾನವಾಪಿ ಮಸೀದಿ-ಶೃಂಗಾರ್ ಗೌರಿ ಸಂಕೀರ್ಣ ಪ್ರಕರಣದ ವಿಚಾರಣೆ ನಡೆಸುತ್ತಿರುವ ಜಿಲ್ಲಾ ನ್ಯಾಯಾಲಯವು ತನ್ನ ತೀರ್ಪನ್ನು ಸೆಪ್ಟೆಂಬರ್ 12 ರವರೆಗೆ ಕಾಯ್ದಿರಿಸಿದ್ದು, ದಾವೆಯ ನಿರ್ವಹಣೆಯ ಕುರಿತು ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯವರು ಬುಧವಾರ ತಮ್ಮ ವಾದವನ್ನು ಮುಕ್ತಾಯಗೊಳಿಸಿದ್ದಾರೆ. ಮಸೀದಿಯ ಹೊರ ಗೋಡೆಯ ಮೇಲೆ ವಿಗ್ರಹಗಳಿರುವ ಹಿಂದೂ ದೇವತೆಗಳ ದೈನಂದಿನ ಪೂಜೆಗೆ ಅನುಮತಿ ಕೋರಿ ಐವರು ಮಹಿಳೆಯರು ವಾರಣಾಸಿ ಜಿಲ್ಲಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಐವರು ಮಹಿಳೆಯರ ಪರವಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ವಕೀಲ ಮದನ್‌ ಮೋಹನ್‌ ಯಾದವ್‌, ಎರಡೂ ಪಕ್ಷದವರು ತಮ್ಮ ವಾದವನ್ನು ಪೂರ್ಣ ಮಾಡಿದ್ದಾರೆ. ನ್ಯಾಯಮೂರ್ತಿ ಎಕೆ ವಿಶ್ವೇಶ್ ಸೆಪ್ಟೆಂಬರ್‌ 12ರವರೆಗೆ ತೀರ್ಪನ್ನು ಕಾಯ್ದಿರಿದ್ದಾರೆ ಎಂದು ವಿವರ ನೀಡಿದ್ದಾರೆ. ಪ್ರಕರಣದಲ್ಲಿ ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿಯನ್ನು ಪ್ರತಿನಿಧಿಸಿದ ವಕೀಲ ಶಮೀಮ್ ಅಹ್ಮದ್, ಜ್ಞಾನವಾಪಿ ಮಸೀದಿ ವಕ್ಫ್ ಆಸ್ತಿಯಾಗಿದ್ದು, ನ್ಯಾಯಾಲಯಕ್ಕೆ ಈ ವಿಷಯವನ್ನು ಕೇಳುವ ಹಕ್ಕು ಇಲ್ಲ. ಮಸೀದಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಆಲಿಸುವ ಹಕ್ಕು ವಕ್ಫ್ ಮಂಡಳಿಗೆ ಮಾತ್ರ ಇದೆ ಎಂದು ವಾದ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ದೇವಸ್ಥಾನದ ವಸ್ತುಗಳನ್ನೇ ಬಳಸಿ ಮಸೀದಿ ಕಟ್ಟಿದ್ದಾರೆ: ಶಮೀಮ್‌ ಅಹ್ಮದ್‌ ಅವರ ವಾದದ ಬಗ್ಗೆ ಮಾತನಾಡಿದ ಮದನ್‌ ಮೋಹನ್‌ ಯಾದವ್, "ಮುಸ್ಲಿಂ ಪರವಾದ ವಕೀಲ, ಕೋರ್ಟ್‌ಗೆ ತಮ್ಮ ಹಳೆಯದೇ ಆದ ಹೇಳಿಕೆಯನ್ನು ನೀಡಿದ್ದಾರಷ್ಟೇ' ಎಂದರು. ಅದಲ್ಲದೆ, ಅವರು ಕೋರ್ಟ್‌ಗೆ ಹಾಜರುಪಡಿಸಿದ ದಾಖಲೆಗಳು ಒಂದು ಅಲಮ್ಗೀರ್ ಮಸೀದಿಯ ದಾಖಲೆಗಳಾಗಿವೆ ಎಂದು ತಿಳಿಸಿದರು. ಅಲ್ಲಿದ್ದ ದೇವಸ್ಥಾನವನ್ನು ಧ್ವಂಸ ಮಾಡಿ ಅದರ ವಸ್ತುಗಳನ್ನು ಬಳಸಿಕೊಂಡು ದೇವಸ್ಥಾನವನ್ನು ಕಟ್ಟಿದ್ದಾರೆ ಎಂದು ಯಾದವ್‌ ಕೋರ್ಟ್‌ಗೆ ಹೇಳಿದ್ದಾರೆ.

ಗ್ಯಾನವಾಪಿ ಮಸೀದಿ ಉತ್ತರ ಪ್ರದೇಶ ವಕ್ಫ್‌ ಬೋರ್ಡ್‌ನ ಆಸ್ತಿ: 1992 ರಲ್ಲಿ ಉತ್ತರ ಪ್ರದೇಶ ಸರ್ಕಾರ ಮತ್ತು ವಕ್ಫ್ ಮಂಡಳಿ ನಡುವಿನ ಒಪ್ಪಂದದ ನಂತರ ಗ್ಯಾನವಾಪಿ ಸಂಕೀರ್ಣದ ಒಂದು ಭಾಗವನ್ನು ಪೊಲೀಸ್ ನಿಯಂತ್ರಣ ಕೊಠಡಿಯಾಗಿ ಪರಿವರ್ತಿಸಲಾಯಿತು ಎಂದು ಮುಸ್ಲಿಂ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಗ್ಯಾನವಾಪಿ ಮಸೀದಿಯ ಸ್ವಲ್ಪ ಜಾಗವನ್ನು ತೆಗೆದುಕೊಂಡು ಅದರ ಬದಲಾಗಿ ಬೇರೆ ಸ್ಥಳದಲ್ಲಿ ಭೂಮಿಯನ್ನು ಒದಗಿಸಿದೆ ಎಂದು ಅವರು ಹೇಳಿದರು. ಇದರಿಂದ ಗ್ಯಾನವಾಪಿ ಮಸೀದಿ ವಕ್ಫ್ ಆಸ್ತಿ ಎಂಬುದು ಸಾಬೀತಾಗಿದೆ ಎಂದು ಅಹ್ಮದ್ ನ್ಯಾಯಾಲಯಕ್ಕೆ ತಿಳಿಸಿದರು.

ಗ್ಯಾನವ್ಯಾಪಿ ಮಸೀದಿ ಪ್ರಕರಣ, ಪೂಜೆಗೆ ಅವಕಾಶ ಕೋರಿದ ಅರ್ಜಿದಾರರ ಪತಿಗೆ ಸರ್ ತನ್‌ ಸೆ ಜುದಾ ಬೆದರಿಕೆ!

ದೇವಾಲಯವನ್ನು ಕೆಡವಿ ಔರಂಗಜೇಬ ಮಸೀದಿ ನಿರ್ಮಾಣ ಮಾಡಿದ್ದ: 1669 ರಲ್ಲಿ ಔರಂಗಜೇಬನು ದೇವಾಲಯವನ್ನು ಕೆಡವಿ ಆ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಿದ್ದ ಎಂದು ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ನ್ಯಾಯಾಲಯಕ್ಕೆ ತಿಳಿಸಿದೆ ಎಂದು ಯಾದವ್ ಹೇಳಿದ್ದಾರೆ. ಇಂದು ಭಾರತದಲ್ಲಿ ಸನಾತನಿ ಜನರ ಆಡಳಿತವಿರುವಾಗ, ದೇವಸ್ಥಾನಗಳನ್ನು ಕೆಡವಿ ನಿರ್ಮಿಸಿದ ಮಸೀದಿಗಳನ್ನು ಸನಾತನಿ ಜನರಿಗೆ ಹಸ್ತಾಂತರಿಸಬೇಕು ಎಂದು ಅವರು ವಾದಿಸಿದ್ದಾರೆ.

ಗ್ಯಾನವಾಪಿಯ ಕಹಿಸತ್ಯ ಬಹಿರಂಗ: ಶಿವಲಿಂಗನೋ? ಕಾರಂಜಿಯೋ?

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುತ್ತಿದೆ. ಈ ಹಿಂದೆ, ಕೆಳ ನ್ಯಾಯಾಲಯವು ಸಂಕೀರ್ಣದ ವಿಡಿಯೋಗ್ರಫಿ ಸಮೀಕ್ಷೆಗೆ ಆದೇಶಿಸಿತ್ತು. ಮೇ 16ರಂದು ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಮೇ 19ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಗ್ಯಾನವಾಪಿ ಮಸೀದಿ-ಶ್ರಿಂಗಾರ್ ಗೌರಿ ಕಾಂಪ್ಲೆಕ್ಸ್‌ನ ವೀಡಿಯೋಗ್ರಫಿ ಸಮೀಕ್ಷೆಯಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹಿಂದೂ ಕಡೆಯವರು ಕೆಳ ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದರು.