ತಮಿಳುನಾಡು ರಾಜ್ಯಪಾಲರು ತಮ್ಮ ಕೇರಳ ಪ್ರವಾಸ ರದ್ದು ಮಾಡಿ ನಟ ವಿಜಯ್ ಜೊಸೆಫ್ ಭೇಟಿಗೆ ಸಮಯ ನೀಡಿದ್ದಾರೆ. ನಾಳೆ ನಟ ವಿಜಯ್ ಜೊಸೆಫ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಚೆನ್ನೈ (ಮೇ.08) ತಮಿಳುನಾಡಿನಲ್ಲಿ ಚುನಾವಣೆ ಫಲಿತಾಂಶ ಬಳಿಕ ಪ್ರತಿ ದಿನ ರಾಜಕೀಯ ಬೆಳವಣಿಗೆ ದೇಶದ ಗಮನಸೆಳೆದಿತ್ತು. ಇದೀಗ ಕ್ಲೈಮಾಕ್ಸ್ ಹಂತ ತಲುಪಿದೆ. ವಿಸಿಕೆ ಬೆಂಬಲ ಪಡೆಯದ ಟಿವಿಕೆ ಪಾರ್ಟಿ ಇದೀಗ ಮ್ಯಾಜಿಕ್ ನಂಬರ್ ದಾಟಿ ಮತ್ತೆರೆಡು ಶಾಸಕರ ಬೆಂಬಲ ಪಡೆದಿದೆ. 120 ಶಾಸಕರ ಬೆಂಬಲದೊಂದಿಗೆ ನಟ ವಿಜಯ್ ಜೊಸೆಫ್ ಇಂದು 6.30ಕ್ಕೆ ರಾಜ್ಯಪಾಲರ ಭೇಟಿಯಾಗುತ್ತಿದ್ದಾರೆ. ರಾಜ್ಯಪಾಲರು ತಮ್ಮ ಕೇರಳ ಪ್ರವಾಸ ರದ್ದುಗೊಳಿಸಿ ವಿಜಯ್ ಭೇಟಿಗೆ ಅವಕಾಶ ನೀಡಿದ್ದಾರೆ.

ಲೋಕಭವನದತ್ತ ನಟ ವಿಜಯ್
ನಟ ವಿಜಯ್ ಜೊಸೆಫ್ ಇದೀಗ ಲೋಕಭವನದತ್ತ ತೆರಳಿದ್ದಾರೆ. 120 ಶಾಸಕರ ಬೆಂಬಲದೊಂದಿಗೆ ನಟ ವಿಜಯ್ ಜೊಸೆಫ್ ಸರ್ಕಾರ ರಚನೆಗೆ ರಾಜ್ಯಪಾಲರ ಅವಕಾಶ ಕೇಳಲಿದ್ದಾರೆ. ಸದ್ಯ ಮ್ಯಾಜಿಕ್ ನಂಬರ್ ದಾಟಿರುವ ಕಾರಣ ವಿಜಯ್ ಟಿವಿಕೆ ಪಕ್ಷಕ್ಕೆ ಸರ್ಕಾರ ರಜನೆಗೆ ಅಡ್ಡಿ ಆತಂಕವಿಲ್ಲ. ಈ ಮೂಲಕ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಮಹತ್ವದ ರಾಜಕೀಯ ಬೆಳವಣಿಗೆಗಳಿಗೆ ಬ್ರೇಕ್ ಬಿದ್ದಿದೆ.
ಫಲಿತಾಂಶ ಘೋಷಣೆಯಾದ ಬಳಿಕ ನಟ ವಿಜಯ್ ಮೂರು ಬಾರಿ ರಾಜ್ಯಪಾಲರ ಭೇಟಿಯಾಗಿದ್ದರು. ಈ ವೇಳೆ ಶಾಸಕರ ಬೆಂಬಲ ಕೊರತೆ ಕಾರಣ ಸರ್ಕಾರ ರಚನೆ ಗೊಂದಲ ಮುಂದುವರಿದಿತ್ತು. ಇದರ ನಡುವೆ ಡಿಎಂಕೆ ಹಾಗೂ ಎಐಡಿಎಂಕೆ ಸರ್ಕಾರ ರಚಿಸುವ ಮಾತುಗಳು ಕೇಳಿಬಂದಿತ್ತು. ಇದೀಗ ನಾಲ್ಕನೇ ಬಾರಿ ನಟ ವಿಜಯ್ ಜೊಸೆಫ್, ರಾಜ್ಯಪಾಲರನ್ನು ಭೇಟಿಯಾಗುತ್ತಿದ್ದಾರೆ.
ವಿಸಿಕೆಯಿಂದ ಮಹತ್ವದ ಹೇಳಿಕೆ
ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ಸೂಚಿಸಿದ ವಿಸಿಕೆ ಪಕ್ಷದ ಮುಖ್ಯಸ್ಥ ತಿರು ಮಾವಲವನ್, ಮಹತ್ವ ಹೇಳಿಕೆ ನೀಡಿದ್ದಾರೆ. ಟಿವಿಕೆಗೆ ನಾವು ಬೆಂಬಲ ಸೂಚಿಸುತ್ತಿದ್ದೇವೆ. ಸರ್ಕಾರ ರಚನೆಗೆ ನಮ್ಮ ಬೆಂಬಲವಿದೆ. ನಾವು ಈ ಮಾಹಿತಿಯನ್ನು ನಮ್ಮ ಮೈತ್ರಿ ಪಕ್ಷವಾಗಿರುವ ಡಿಎಂಕೆಗೆ ಸೂಚಿಸಿದ್ದೇವೆ. ಡಿಎಂಕೆ ಜೊತೆ ನಮ್ಮ ಮೈತ್ರಿ ಮುಂದುವರಿಯಲಿದೆ ಎಂದು ತಿರು ಹೇಳಿದ್ದಾರೆ.


