ಭಾರತಕ್ಕೆ ಮುಂಗಾರು ಆಘಾತ, ಕಳೆದ 11 ವರ್ಷದಲ್ಲೇ ಅತ್ಯಂತ ಕಳಪೆ ಮಾನ್ಸೂನ್ ಜೊತೆಗೆ ಎಲ್ ನಿನೋ
ಒಂದೆಡೆ ತೀವ್ರ ಬಿಸಿಗಾಳಿಯಿಂದ ಬಹುತೇಕ ರಾಜ್ಯಗಳು ತತ್ತರಿಸಿದೆ. ಇದರ ನಡುವೆ ಅಲ್ಲೊಂದು ಇಲ್ಲೊಂದು ಮಳೆ, ಆಲಿಕಲ್ಲು ಮಳೆ, ಬಿರುಗಾಳಿಗೆ ಅವಾಂತರಗಳು ಸೃಷ್ಟಿಯಾಗಿದೆ. ಇದರ ನಡುವೆ ಮತ್ತೊಂದು ಆಘಾತ ಎದುರಾಗಿದೆ.

ಈ ಬಾರಿ ಮುಂಗಾರು ಕೊರತೆ, ಎಲ್ ನಿನೋ ಭೀತಿ
ಕಳೆದ ಎರಡು ವರ್ಷಗಳಿಂದ ಸತತವಾಗಿ ಉತ್ತಮ ಮಳೆ ತಂದಿದ್ದ ಮುಂಗಾರು ಹಬ್ಬಕ್ಕೆ ಈ ಬಾರಿ ಬ್ರೇಕ್ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ಭಾರತೀಯ ಹವಾಮಾನ ಇಲಾಖೆಯು (IMD) ಈ ವರ್ಷದ ಮುಂಗಾರು ಮಳೆಯ (Monsoon Rain) ಮುನ್ಸೂಚನೆಯನ್ನು ಸಾಮಾನ್ಯ ಮಟ್ಟಕ್ಕಿಂತ ಶೇ. 90 ಕ್ಕೆ ಇಳಿಸಿದ್ದು, ದೇಶದಾದ್ಯಂತ ತೀವ್ರ ಆತಂಕ ಮೂಡಿಸಿದೆ.2024 ಮತ್ತು 2025 ರ ಅವಧಿಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿದ್ದರಿಂದ ಜಲಾಶಯಗಳು ತುಂಬಿ ತುಳುಕಿದ್ದವು ಮತ್ತು ರೈತರು (farmers) ಸತತವಾಗಿ ಬಂಪರ್ ಇಳುವರಿ ಪಡೆದಿದ್ದರು. ಆದರೆ, 2026 ರಲ್ಲಿ ಆ ಸುವರ್ಣ ಅವಧಿ ಕೊನೆಗೊಂಡಂತೆ ಕಾಣುತ್ತಿದೆ.
ಅಧಿಕೃತ ಸೂಚನೆ ನೀಡಿದ ಹವಾಮಾನ ಇಲಾಖೆ
ಜೂನ್ನಿಂದ ಸೆಪ್ಟೆಂಬರ್ವರೆಗೆ ದೇಶದ ವಾರ್ಷಿಕ ಮಳೆಯ ಸುಮಾರು ಶೇಕಡಾ 70 ರಷ್ಟನ್ನು ಒದಗಿಸುವ ನೈಋತ್ಯ ಮುಂಗಾರು ಮಳೆಯು, ಈ ಬಾರಿ ವಿಜ್ಞಾನಿಗಳು ಸಾಮಾನ್ಯ ಎಂದು ಪರಿಗಣಿಸುವ ಮಟ್ಟಕ್ಕಿಂತ ಕೇವಲ ಶೇಕಡಾ 90 ರಷ್ಟನ್ನು ಮಾತ್ರ ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮೇ 29 ರಂದು ಅಧಿಕೃತವಾಗಿ ಖಚಿತಪಡಿಸಿದೆ.
ಶೇಕಡಾ 90ಕ್ಕಿಂತ ಕಡಿಮೆ ಮಳೆ
ಒಂದು ವೇಳೆ ಈ ಮುನ್ಸೂಚನೆ ನಿಜವಾದರೆ, 2026ರ ವರ್ಷವು ಕಳೆದ ಒಂದು ದಶಕದಲ್ಲೇ ಭಾರತ ಎದುರಿಸಲಿರುವ ಅತ್ಯಂತ ಒಣ ಹವಾಮಾನದ (ಶುಷ್ಕ) ಮುಂಗಾರು ಆಗಲಿದೆ. ಇದಕ್ಕೂ ಮುನ್ನ ದೇಶವು ಶೇಕಡಾ 90 ಕ್ಕಿಂತ ಕಡಿಮೆ ಮಳೆಯಾಗುವ ಇಂತಹ ತೀವ್ರ ಕೊರತೆಯ ಮುಂಗಾರನ್ನು ಎದುರಿಸಿದ್ದು 2015 ರಲ್ಲಿ. ಆ ವರ್ಷ ಭಾರತದ ಬಹುತೇಕ ಭಾಗಗಳು ತೀವ್ರ ಬರಗಾಲ, ಬೆಳೆ ವೈಫಲ್ಯ ಮತ್ತು ತೀವ್ರ ಕುಡಿಯುವ ನೀರಿನ ಅಭಾವವನ್ನು ಎದುರಿಸಬೇಕಾಗಿ ಬಂದಿತ್ತು. ಐಎಂಡಿ ಬಿಡುಗಡೆ ಮಾಡಿರುವ ಹೊಸ ನಕ್ಷೆಯ ಪ್ರಕಾರ, ಈ ಬಾರಿ ಈಶಾನ್ಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ ಇಡೀ ದೇಶದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ದಟ್ಟವಾಗಿದೆ.
ತೀವ್ರ ಮುಂಗಾರು ಕೊರತೆ
ಈ ಕೇವಲ ಶೇ. 90 ರ ಮಳೆಯ ಅಂಕಿ-ಅಂಶವೇ ಆತಂಕಕಾರಿಯಾಗಿದ್ದರೆ, ಇದರ ಬೆನ್ನಲ್ಲೇ ಇರುವ ಮತ್ತೊಂದು ಆಘಾತಕಾರಿ ವಿಷಯವೆಂದರೆ—ದೇಶದಲ್ಲಿ ಸಂಪೂರ್ಣ ಬರಗಾಲ ಅಥವಾ ತೀವ್ರ ಮಳೆ ಕೊರತೆ ಉಂಟಾಗುವ ಸಾಧ್ಯತೆಯು (Probability) ಶೇಕಡಾ 60 ರಷ್ಟಿದೆ ಎಂದು ಐಎಂಡಿ ಹೇಳಿದೆ. ಸಾಮಾನ್ಯವಾಗಿ ಯಾವುದೇ ಒಂದು ವರ್ಷದಲ್ಲಿ ಇಷ್ಟು ಕಳಪೆ ಮುಂಗಾರು ಉಂಟಾಗುವ ಐತಿಹಾಸಿಕ ಸಾಧ್ಯತೆ ಕೇವಲ ಶೇಕಡಾ 16 ರಷ್ಟು ಮಾತ್ರ ಇರುತ್ತದೆ. ಆದರೆ ಐಎಂಡಿ ಈ ಬಾರಿ ಆ ಭೀತಿಯನ್ನು ನಾಲ್ಕು ಪಟ್ಟು ಹೆಚ್ಚು ಮಾಡಿದೆ.
ಪ್ರಬಲಗೊಳ್ಳುವ ಮೊದಲೇ ಎಲ್ ನಿನೋ ಭೀತಿ ತೀವ್ರ
ಮುಂಗಾರು ಕೊರತೆ ಹಿಂದೆ ಎಲ್ ನಿನೋ ಭೀತಿ ಅಡಗಿದೆ. ಎಲ್ ನಿನೋ ರೂಪುಗೊಂಡಿರುವ ಕಾರಣ ಮುಂಗಾರು ಕೊರತೆ ಎದುರಾದಿದೆ. ಆದರೆ ಸದ್ಯ ರೂಪುಗೊಂಡಿರುವ ಎಲ್ ನಿನೊ ಇನ್ನು ಪೂರ್ಣಪ್ರಮಾಣದ ತೀವ್ರತೆಗೆ ತಲುಪಿಲ್ಲ. ಎಲ್ ನಿನೋ ಪ್ರಬಲಗೊಳ್ಳುತ್ತಿದ್ದಂತೆ ಹವಾಮಾನ ವೈಪರಿತ್ಯಗಳು ಸಂಭವಿಸಲಿದೆ. ಕೆಲೆವೆಡೆ ಭಾರಿ ಪ್ರವಾಹ, ಮತ್ತೆ ಕೆಲೆವೆಡೆ ಬರಗಾಲ ಪರಿಸ್ಥಿತಿಗಳು ಎದುರಾಗಲಿದೆ.
ರೈತರ ಬಿತ್ತನೆಗೆ ತೀವ್ರ ಸಂಕಷ್ಟ
ಕಳೆದ ಏಪ್ರಿಲ್ ತಿಂಗಳಲ್ಲೇ ಐಎಂಡಿ ತನ್ನ ಮೊದಲ ಮುನ್ಸೂಚನೆಯಲ್ಲಿ ಮಳೆಯ ಪ್ರಮಾಣ ಶೇ. 92 ರಷ್ಟು ಇರಲಿದೆ ಎಂದು ಎಚ್ಚರಿಸಿತ್ತು. ಅದು ತಾಂತ್ರಿಕವಾಗಿ ಸಾಮಾನ್ಯಕ್ಕಿಂತ ಕಡಿಮೆ ಎನಿಸಿಕೊಂಡರೂ, ಚೇತರಿಕೆಯ ಭರವಸೆ ಇತ್ತು. ಆದರೆ ಈಗ ಕೇವಲ ಕೆಲವೇ ವಾರಗಳಲ್ಲಿ ಆ ಮುನ್ಸೂಚನೆ ಶೇ. 90 ಕ್ಕೆ ಕುಸಿದಿದೆ (ಇದರಲ್ಲಿ ಶೇ. 4 ರಿಂದ 5 ರಷ್ಟು ಹೆಚ್ಚು-ಕಡಿಮೆಯಾಗುವ ಮಾದರಿ ದೋಷದ ಮಾರ್ಜಿನ್ ಇದೆ). ಅಷ್ಟೇ ಅಲ್ಲದೆ, ಮಳೆಯು ಈ ಶೇ. 90 ಕ್ಕಿಂತಲೂ ಕೆಳಕ್ಕೆ ಕುಸಿಯುವ ಸಾಧ್ಯತೆ ಶೇಕಡಾ 35 ರಷ್ಟಿದೆ ಎಂದು ಐಎಂಡಿ ಕಳವಳ ವ್ಯಕ್ತಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

