ಮೃತಪಟ್ಟು ನಾಲ್ಕು ದಿನವಾದರೂ ತಾಯಿಯ ಅಂತ್ಯಸಂಸ್ಕಾರ ನಡೆಸದೇ ಶವವನ್ನು ಮಂಚದ ಕೆಳಗೆ ಇರಿಸಿದ್ದ ವಿಚಿತ್ರ ಘಟನೆ ಉತ್ತರಪ್ರದೇಶದ ಗೋರಕ್‌ಪುರದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಗೋರಕ್‌ಪುರ: ಮೃತಪಟ್ಟು ನಾಲ್ಕು ದಿನವಾದರೂ ತಾಯಿಯ ಅಂತ್ಯಸಂಸ್ಕಾರ ನಡೆಸದೇ ಶವವನ್ನು ಮಂಚದ ಕೆಳಗೆ ಇರಿಸಿದ್ದ ವಿಚಿತ್ರ ಘಟನೆ ಉತ್ತರಪ್ರದೇಶದ ಗೋರಕ್‌ಪುರದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಶವ ಕೊಳೆತು ಕೆಟ್ಟ ವಾಸನೆ ಬರಲು ಶುರುವಾದ ಹಿನ್ನೆಲೆಯಲ್ಲಿ ನೆರೆಹೊರೆಯ ಮನೆಯುವರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

82 ವರ್ಷದ ಶಾಂತಿ ದೇವಿ ಮೃತ ಮಹಿಳೆ, ಇವರು ಉತ್ತರ ಪ್ರದೇಶದ (Uttar Pradesh) ಗೋರಕ್‌ಪುರದ (Gorakhpur) ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. 10 ವರ್ಷದ ಹಿಂದೆ ತಮ್ಮ ಪತಿ ಸಾವಿನ ನಂತರ ಶಿವಪುರದ ಸಹಬಜ್ಗಂಜ್ (Shivpur Sahabajganj) ಪ್ರದೇಶದಲ್ಲಿ ಇವರು ತಮ್ಮ ಪುತ್ರ ನಿಖಿಲ್ ಜೊತೆ ವಾಸವಿದ್ದರು. ಆದರೆ ನಾಲ್ಕು ದಿನದ ಹಿಂದೆ ಅವರು ಸಾವನ್ನಪ್ಪಿದ್ದು, ಮಗ ನಿಖಿಲ್ ಮಾನಸಿಕ ಅಸ್ವಸ್ಥನಾಗಿದ್ದು ಮೃತ ತಾಯಿಯ ಶವಕ್ಕೆ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗದೇ ಶವವನ್ನು ಮಂಚದ ಕೆಳಗೆ ಅಡಗಿಸಿಟ್ಟಿದ್ದ. 

ನಿಖಿಲ್ ಪತ್ನಿ ಇತ್ತೀಚೆಗಷ್ಟೇ ತನ್ನ ಮಕ್ಕಳೊಂದಿಗೆ ತವರು ಮನೆ ಸೇರಿಕೊಂಡಿದ್ದರು. ಇತ್ತ ನಿಖಿಲ್ (Nikhil) ತನ್ನ ಮಾದಕ ವ್ಯಸನದ ಚಟದಿಂದಾಗಿ ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದ. ವೈದ್ಯಕೀಯ ಅಸ್ವಸ್ಥತೆಯ ಕಾರಣದಿಂದಾಗಿ ವೃದ್ಧೆ ಸಾವನ್ನಪ್ಪಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆಯ ನಂತರ ನಿಜವಾದ ಕಾರಣ ತಿಳಿದು ಬರಲಿದೆ. ಸಾವಿಗೀಡಾಗಿ ನಾಲ್ಕು ದಿನಗಳೇ ಕಳೆದರೂ ಶವವನ್ನು ಏಕೆ ಮನೆಯಲ್ಲೇ ಅಡಗಿಸಿಡಲಾಗಿತ್ತು ಎಂಬ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ಧೆಯ ಮಗ ನಿಖಿಲ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಆತ ತಾಯಿ ಶಾಂತಿದೇವಿ (Shanti Devi) ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ್ದಾಗಿ ಹೇಳಿದ್ದಾನೆ. ಅಲ್ಲದೇ ಶವದಿಂದ ವಾಸನೆ ಬರುವುದನ್ನು ತಡೆಯಲು ಅಗರಬತ್ತಿ ಹೊತ್ತಿಸಿಟ್ಟಿದ್ದಾಗಿ ಆತ ಹೇಳಿದ್ದಾನೆ. ಆದಾಗ್ಯೂ ಮಂಗಳವಾರದ ಹೊತ್ತಿಗೆ ವಾಸನೆ ವಿಪರೀತವಾಗಿದ್ದು, ನೆರೆಹೊರೆಯ ಮನೆಯವರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಾಥ್ ಮನೋಜ್ ಕುಮಾರ್ ಅವಸ್ಥಿ (Nath Manoj Kumar Awasthi) ಹೇಳಿದ್ದಾರೆ. 

ವ್ಯಾನ್‌ ಕೊಡಲು ನಿರಾಕರಿಸಿದ ಆಸ್ಪತ್ರೆ, ಬೈಕ್‌ನಲ್ಲೇ ತಾಯಿಯ ಶವ ಸಾಗಿಸಿದ ಮಗ, ವಿಡಿಯೋ ವೈರಲ್!