ತಮಿಳುನಾಡು ಮುಖ್ಯಮಂತ್ರಿಯಾಗಿ ನಟ ವಿಜಯ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ದೇಶಭ್ರಷ್ಟ ಸ್ವಾಮೀಜಿ ನಿತ್ಯಾನಂದ ತನ್ನ 'ಕೈಲಾಸ' ದೇಶದಿಂದ ಶುಭ ಕೋರಿದ್ದಾನೆ. ಈತನ ಪೋಸ್ಟ್‌ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆತನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ನಟ ವಿಜಯ್ ಅಧಿಕಾರ ಸ್ವೀಕರಿಸುತ್ತಿದ್ದಂತೆ, ದೇಶಭ್ರಷ್ಟ ಘೋಷಿತ ವಿವಾದಿತ ಸ್ವಾಮೀಜಿ ನಿತ್ಯಾನಂದ ತನ್ನ 'ಕೈಲಾಸ' ದೇಶದಿಂದ ಶುಭ ಸಂದೇಶ ಕಳುಹಿಸುವ ಮೂಲಕ ಸುದ್ದಿಯಾಗಿದ್ದಾನೆ. ವಿಜಯ್ ಅವರ ರಾಜಕೀಯ ಇನ್ನಿಂಗ್ಸ್‌ಗೆ ಅಭಿನಂದನೆ ಸಲ್ಲಿಸಿರುವ ನಿತ್ಯಾನಂದನ ನಡೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Add Asianetnews Kannada as a Preferred SourcegooglePreferred

ನಿತ್ಯಾನಂದನ ಶುಭ ಸಂದೇಶದಲ್ಲಿ ಏನಿದೆ?

ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ನಿತ್ಯಾನಂದ, "ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಮತ್ತು ಹಿಂದೂ ಧರ್ಮದ ಪರಮೋಚ್ಚ ಗುರುಗಳ ಪರವಾಗಿ ಭಗವಾನ್ ಶ್ರೀ ನಿತ್ಯಾನಂದ ಪರಮಶಿವಂ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ತಿರು ವಿಜಯ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾರೆ" ಎಂದು ತಿಳಿಸಿದ್ದಾರೆ. ಈ ಪೋಸ್ಟ್‌ನೊಂದಿಗೆ #CMJosephVijay ಎನ್ನುವ ಹ್ಯಾಶ್‌ಟ್ಯಾಗ್ ಬಳಸಲಾಗಿದೆ.

ನೆಟ್ಟಿಗರ ಕಿಡಿ: 'ಇವನನ್ನು ಮೊದಲು ಹಿಡಿದು ತನ್ನಿ'

ನಿತ್ಯಾನಂದನ ಈ ಪೋಸ್ಟ್‌ಗೆ ತಮಿಳುನಾಡಿನ ಜನರು ಹಾಗೂ ವಿಜಯ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಮುಖ್ಯಮಂತ್ರಿಗಳೇ, ಈತ ಎಲ್ಲಿ ಅಡಗಿದ್ದಾನೆಂದು ಪತ್ತೆ ಹಚ್ಚಿ ಹೊರಗೆ ಎಳೆದು ತನ್ನಿ ಮತ್ತು ಕಾನೂನಿನ ಪ್ರಕಾರ ಶಿಕ್ಷಿಸಿ' ಎಂದು ಅರುಣ್ ಆರ್ಮುಗಂ ಎಂಬುವವರು ಕಾಮೆಂಟ್ ಮಾಡಿದ್ದಾರೆ.

ಇನ್ನು ಕೆಲವರು ವ್ಯಂಗ್ಯವಾಗಿ, 'ಸ್ವಾಮೀಜಿ, ನಿಮ್ಮ ದೇಶದ ರಾಜಧಾನಿ ಯಾವುದು? ಅಧಿಕೃತ ಭಾಷೆ ಯಾವುದು? ನಾನೊಮ್ಮೆ ಅಲ್ಲಿಗೆ ಪ್ರವಾಸ ಬರಬೇಕು' ಎಂದು ಕೇಳಿದ್ದಾರೆ.

ಯಾರು ಈ ನಿತ್ಯಾನಂದ? ಈತನ ಮೇಲಿರುವ ಕೇಸುಗಳೇನು?

ಮೂಲತಃ ತಮಿಳುನಾಡಿನವನೇ ಆದ ನಿತ್ಯಾನಂದ, ಬೆಂಗಳೂರು ಸಮೀಪದ ಬಿಡದಿಯಲ್ಲಿ ಆಶ್ರಮ ಹೊಂದಿದ್ದ. ಆದರೆ, ಈತನ ಮೇಲೆ ಅತ್ಯಾ*ಚಾರ, ಕಿಡ್ನಾಪ್ ಹಾಗೂ ಮಕ್ಕಳನ್ನು ಅಕ್ರಮವಾಗಿ ಬಂಧಿಸಿಟ್ಟಿರುವ ಗಂಭೀರ ಆರೋಪಗಳಿವೆ. 2019ರಲ್ಲಿ ಭಾರತದಿಂದ ಪರಾರಿಯಾದ ಈತನನ್ನು ಹಿಡಿಯಲು ಇಂಟರ್ ಪೋಲ್ 'ಬ್ಲೂ ಕಾರ್ನರ್ ನೋಟಿಸ್' ಕೂಡ ಹೊರಡಿಸಿದೆ. ಭಾರತದ ಕಾನೂನಿನ ಕಣ್ಣಿಗೆ ಮಣ್ಣೆರಚಿ ಓಡಿಹೋಗಿರುವ ಈತ, ಇಕ್ವೆಡಾರ್ ಸಮೀಪದ ದ್ವೀಪವೊಂದರಲ್ಲಿ ಅಡಗಿದ್ದಾನೆ ಎನ್ನಲಾಗಿದೆ.

ಏನಿದು 'ಕೈಲಾಸ' ದೇಶ?

ನಿತ್ಯಾನಂದ ತಾನು ಭಾರತದಿಂದ ಓಡಿಹೋದ ಮೇಲೆ ಪೆಸಿಫಿಕ್ ಮಹಾಸಾಗರದ ದ್ವೀಪವೊಂದರಲ್ಲಿ 'ಕೈಲಾಸ' ಎಂಬ ಸ್ವತಂತ್ರ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರುವುದಾಗಿ ಘೋಷಿಸಿಕೊಂಡಿದ್ದಾನೆ. ಈ ದೇಶಕ್ಕೆ ತನ್ನದೇ ಆದ ಧ್ವಜ, ಪಾಸ್‌ಪೋರ್ಟ್, ಕರೆನ್ಸಿ (ಕೈಲಾಸಿಯನ್ ಡಾಲರ್) ಮತ್ತು ಸಂವಿಧಾನವಿದೆ ಎಂದು ಆತ ಪ್ರತಿಪಾದಿಸುತ್ತಾನೆ. ವಿಶ್ವಸಂಸ್ಥೆಯ ಕೆಲವು ಸಭೆಗಳಲ್ಲೂ ಈತನ ಪ್ರತಿನಿಧಿಗಳು ಭಾಗವಹಿಸಿ ಅಚ್ಚರಿ ಮೂಡಿಸಿದ್ದರು. ಆದರೆ, ಜಗತ್ತಿನ ಯಾವುದೇ ಅಧಿಕೃತ ರಾಷ್ಟ್ರ ಈ 'ಕೈಲಾಸ'ವನ್ನು ದೇಶವೆಂದು ಮಾನ್ಯ ಮಾಡಿಲ್ಲ.

ನಿತ್ಯಾನಂದನ ಅಧಿಕೃತ ಪೋಸ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ.