16 ಕ್ಷೇತ್ರಗಳಲ್ಲಿ ಕನ್ನಡಿಗರ ಮತಗಳೇ ನಿರ್ಣಾಯಕ ಬಿಜೆಪಿ-ಕಾಂಗ್ರೆಸ್‌ ಚುನಾವಣಾ ಉಸ್ತುವಾರಿಗಳೆಲ್ಲ ಕನ್ನಡಿಗರು ಗೋವಾದಲ್ಲಿ ಕನ್ನಡ ಮಯ ಕ್ಯಾಂಪೇನ್

ಗೋವಾ(ಜ.24): ಫೆಬ್ರವರಿ 14ರಂದು ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ(Goa Election 2022) ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಯಾವುದೇ ಪಕ್ಷ ಗೆಲುವು ಸಾಧಿಸಿದರೂ ಅದರ ಹಿಂದಿನ ಶಕ್ತಿ ಕನ್ನಡಿಗರು(Kannadiga) ಆಗಲಿದ್ದಾರೆ. ಗೋವಾದಲ್ಲಿ ವಲಸಿಗ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ ಎನ್ನುವ ಕಾರಣಕ್ಕೆ ಆಯಾ ಪಕ್ಷಗಳು ಕನ್ನಡಿಗ ಮುಖಂಡರನ್ನೇ ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಿಸಿವೆ.

ಬಿಜೆಪಿ ತನ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕನ್ನಡಿಗ ಸಿ.ಟಿ.ರವಿ(CT Ravi) ಅವರನ್ನು ಗೋವಾ ಉಸ್ತುವಾರಿ ಮಾಡಿದೆ. ಅವರ ತಂಡದಲ್ಲಿ ಬೆಳಗಾವಿಯ ಅಭಯ ಪಾಟೀಲ್‌, ಶಶಿಕಾಂತ ಪಾಟೀಲ್‌, ಹುಬ್ಬಳ್ಳಿಯ ಮಹೇಶ್‌ ಟೆಂಗಿನಕಾಯಿ, ಲಿಂಗರಾಜ ಪಾಟೀಲ್‌, ಶಿವು ಮೆಣಸಿನಕಾಯಿ, ಮಲ್ಲಿಕಾರ್ಜುನ ಬಾಳಿಕಾಯಿ, ತಿಪ್ಪಣ್ಣ ಮಜ್ಜಗಿ ಸೇರಿದಂತೆ ಹಲವು ಕನ್ನಡಿಗರು ಇದ್ದಾರೆ.

Goa Elections: ಬಿಜೆಪಿಗೆ ಮತ್ತೊಂದು ಶಾಕ್, ಕಮಲ ಪಾಳಯಕ್ಕೆ ಮಾಜಿ ಸಿಎಂ ಗುಡ್‌ಬೈ!

ಕಾಂಗ್ರೆಸ್‌(Congress) ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ಗೋವಾ ಉಸ್ತುವಾರಿ ಮಾಡಿದೆ. ಬಹುತೇಕ ವಲಸಿಗ ಕನ್ನಡಿಗರು ಉತ್ತರ ಕರ್ನಾಟಕದವರು(Karnataka) ಮೇಲಾಗಿ ಹಿಂದುಳಿದವರು, ದಲಿತರು ಮತ್ತು ತಾಂಡಾ ನಿವಾಸಿಗಳು ಆಗಿದ್ದರಿಂದ ವಿಜಯಪುರದ ಪ್ರಕಾಶ ರಾಠೋಡ, ಬಾಗಲಕೋಟೆಯ ಚಂದ್ರಶೇಖರ ರಾಠೋಡ, ಕಲಬುರಗಿಯ ವಿಜಯ ಸಿಂಗ್‌ (ಧರ್ಮಸಿಂಗ್‌ ಪುತ್ರ) ಹುಬ್ಬಳ್ಳಿಯ ಸದಾನಂದ ಡಂಗನವರ, ರಾಜಶೇಖರ ಮೆಣಸಿನಕಾಯಿ, ಶಾಕೀರ ಸನದಿ ಮುಂತಾದವರನ್ನು ಗುಂಡೂರಾವ್‌ ತಂಡದಲ್ಲಿ ಜತೆ ಮಾಡಿದೆ.

Goa election 2022 ಕೈತಪ್ಪಿದ ಟಿಕೆಟ್ ಬಿಜೆಪಿಗೆ ಪರಿಕ್ಕರ್ ಪುತ್ರ ಉತ್ಪಾಲ್ ಗುಡ್‌ಬೈ, ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧೆ!

ಇವರೆಲ್ಲಾ ಕನ್ನಡಿಗರು ವಾಸಿಸುವ ಪ್ರದೇಶಗಳನ್ನು ಹುಡುಕಿ ಹುಡುಕಿ ಭೇಟಿಯಾಗುತ್ತಿದ್ದಾರೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶದಲ್ಲಿ ಕ್ಯಾಂಪೇನ್‌ ಮಾಡುತ್ತಿದ್ದರಿಂದ ಆಯಾ ಪ್ರದೇಶವೆಲ್ಲ ಕನ್ನಡಮಯ ಆಗುತ್ತಿವೆ. ಈ ಮುಖಂಡರನ್ನು ಕಂಡು ಹುಮ್ಮಸ್ಸುಗೊಂಡಿರುವ ವಲಸಿಗ ಕನ್ನಡಿಗರು ತಮ್ಮ ಹಿತರಕ್ಷಣೆಗಾಗಿ ನಿಗಮ ಸ್ಥಾಪಿಸಬೇಕು ಮತ್ತು ಗೋವಾ ನಿವಾಸಿಗಳಿಗೆ ಸಿಗುವ ಎಲ್ಲ ಸೌಲಭ್ಯಗಳು ತಮಗೂ ದಕ್ಕಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಗೋವಾ ಮೂಲಮಂತ್ರ:
ಈ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಕಳೆದ ಎರಡು ವರ್ಷಗಳಿಂದ ‘ವಲಸಿಗರಿಗೆ ಗೋವೆಯಲ್ಲಿ ಸೀಮಿತ ಅವಧಿ ಉಳಿದುಕೊಳ್ಳುವ ಅವಕಾಶ ನೀಡಿ, ಗೋವೆಯ ಉದ್ಯೋಗಗಳಲ್ಲಿ ಮೂಲ ಗೋವನ್ನರಿಗೆ ಆದ್ಯತೆ ಸಿಗಲಿ’ ಎನ್ನುವ ಸ್ಲೋಗನ್‌ ಮೂಲಕ ಸ್ಥಳೀಯ ಅಸ್ಮಿತೆಯ ತಂತು ಹಿಡಿದಿರುವ ಮನೋಜ್‌ ಪರಬ್‌ ಅವರ ‘ರೆವೂಲೇಶ್ನರಿ ಗೋವನ್‌’ (ಆರ್‌ಜಿ) ಈ ಚುನಾವಣೆಯಲ್ಲಿ ಎಲ್ಲ 40 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಆರ್‌ಜಿಯ ಈ ಸ್ಥಳೀಯತೆಯನ್ನು ಸದಾ ಬೆಂಬಲಿಸುತ್ತ ಬಂದಿರುವ ಸಾಮಾಜಿಕ ಕಾರ್ಯಕರ್ತ ವಿನೋದ ಪಾಲೇಕರ್‌ ಈಗ ಆಪ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಶೇ.34 ರಷ್ಟುಮತಗಳನ್ನು ಹೊಂದಿರುವ ಭಂಡಾರಿ ಸಮುದಾಯದ ಮುಖಂಡ ಈ ಪಾಲೇಕರ್‌ ಗುರಿ ಕೂಡ ವಲಸಿಗರನ್ನು ವಿರೋಧಿಸಿ ಸ್ಥಳೀಯರ ಹಿತ ಕಾಯುವುದು ಆಗಿದೆ. ಹಾಗಾಗಿ ಆಪ್‌ ಮತ್ತು ಆರ್‌ಜಿ ಪ್ರಚಾರದ ಪ್ರಮುಖ ಸರಕು ಕನ್ನಡಿಗರು.

ಪಶ್ಚಿಮ ಬಂಗಾಳದ ದೀದಿ ಪಕ್ಷ ಮತ್ತು ಸ್ಥಳೀಯ ಪಕ್ಷಗಳು ಈ ಚುನಾವಣೆಯಲ್ಲಿ ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. 16 ಕ್ಷೇತ್ರಗಳಲ್ಲಿ ನಿರ್ಣಾಯಕರು ಎನಿಸಿರುವ ಕನ್ನಡಿಗರು ಗೋವಾದಲ್ಲಿ ಯಾವುದೇ ಪಕ್ಷ ಗೆಲುವು ಸಾಧಿಸಿದರೂ, ಸೋತರೂ ಇವರದೇ ಹವಾ ಎನ್ನುವುದರಲ್ಲಿ ಎರಡು ಮಾತಿಲ್ಲ. ಉಸ್ತುವಾರಿ ಸಚಿವರು, ಮತದಾರರು, ಅಭ್ಯರ್ಥಿಗಳು, ಪ್ರಚಾರ ಸೇರಿದಂತೆ ಎಲ್ಲವೂ ಕನ್ನಡಮಯವಾಗಿದೆ. ಗೋವಾ ಚುನಾವಣೆಯಲ್ಲಿ ಪೈಪೋಟಿ ಕೂಡ ಅಷ್ಟೋ ಜೋರಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಆಮ್ ಆದ್ಮಿ ಪಾರ್ಟಿ ನಡುವೆ ನೇರಾ ಹಣಾಹಣಿ ಇದೆ. ಹೀಗಾಗಿ ಗೋವಾ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. 

ಮಲ್ಲಿಕಾರ್ಜುನ ಸಿದ್ದಣ್ಣವರ
ಕನ್ನಡಪ್ರಭ ವಾರ್ತೆ ವಾಸ್ಕೋ