Asianet Suvarna News Asianet Suvarna News

ಬೆಂಗಳೂರಲ್ಲಿ ನಾಳೆಯಿಂದ 3 ದಿನ ಜಿ20 ಆರ್ಥಿಕ ಸಭೆ

ವಿಶ್ವದ ಪ್ರಭಾವಿ ಜಿ-20 ಕೂಟದ ಸದಸ್ಯ ದೇಶಗಳ ಹಣಕಾಸು ನಿಗಾ ಸಭೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ.  

G20 Summit Meeting Will be Held on December 13th in Bengaluru grg
Author
First Published Dec 12, 2022, 2:00 AM IST

ನವದೆಹಲಿ(ಡಿ.12): ವಿಶ್ವದ ಪ್ರಭಾವಿ ಜಿ-20 ಕೂಟದ ಸದಸ್ಯ ದೇಶಗಳ ಹಣಕಾಸು ನಿಗಾ ಸಭೆ ಮಂಗಳವಾರದಿಂದ ಗುರುವಾರದವರೆಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. ಇದೇ ಮೊದಲ ಬಾರಿಗೆ ಜಿ-20 ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಭಾರತ ಮುಂದಿನ ಒಂದು ವರ್ಷದ ಅವಧಿಯಲ್ಲಿ 200ಕ್ಕೂ ಹೆಚ್ಚು ಸಭೆಗಳನ್ನು ದೇಶಾದ್ಯಂತ ನಡೆಸಲಿದೆ. ಆ ಪೈಕಿ 14 ಸಭೆಗಳು ಕರ್ನಾಟಕದಲ್ಲಿ ಜರುಗಲಿವೆ. ಅದರಲ್ಲಿ 11 ಸಭೆಗಳು ಬೆಂಗಳೂರಿನಲ್ಲೇ ನಡೆಯಲಿದ್ದು, ಮಂಗಳವಾರ ಆರಂಭವಾಗುವ ಸಭೆ ಈ ಸರಣಿಯಲ್ಲಿ ಮೊದಲನೆಯದ್ದಾಗಿದೆ. ಹಂಪಿಯಲ್ಲಿ 2 ಹಾಗೂ ಮೈಸೂರಿನಲ್ಲಿ ಒಂದು ಸಭೆ ನಿಗದಿಯಾಗಿದೆ.

ಜಿ20 ದೇಶಗಳ ಹಣಕಾಸು ಹಾಗೂ ಕೇಂದ್ರೀಯ ಬ್ಯಾಂಕುಗಳ ಉಪ ಮುಖ್ಯಸ್ಥರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಹಣಕಾಸು ಸಚಿವಾಲಯ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ)ಗಳು ಜಂಟಿಯಾಗಿ ಈ ಸಭೆಯನ್ನು ಆಯೋಜನೆ ಮಾಡಿವೆ. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್‌ ಸೇಠ್‌ ಹಾಗೂ ಆರ್‌ಬಿಐ ಉಪ ಗವರ್ನರ್‌ ಮೈಕೆಲ್‌ ಡಿ. ಪಾತ್ರಾ ಅವರು ಈ ಸಭೆಯ ಜಂಟಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಮೋದಿ ಅಧ್ಯಕ್ಷತೆಯಲ್ಲಿ G20 ಪೂರ್ವಭಾವಿ ಸಭೆ, ಅನಾರೋಗ್ಯದಲ್ಲೂ ಮಾಜಿ ಪ್ರಧಾನಿ ದೇವೇಗೌಡ ಭಾಗಿ!

ಜಿ20 ಸದಸ್ಯ ರಾಷ್ಟ್ರಗಳ ವಿತ್ತ ಹಾಗೂ ಕೇಂದ್ರೀಯ ಬ್ಯಾಂಕುಗಳ ಉಪಮುಖ್ಯಸ್ಥರು ಮಾತ್ರವಲ್ಲದೇ, ಭಾರತ ಆಹ್ವಾನಿಸಿರುವ ವಿವಿಧ ದೇಶಗಳ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಹಣಕಾಸು ಸಚಿವರು ಹಾಗೂ ಕೇಂದ್ರೀಯ ಬ್ಯಾಂಕ್‌ ಗವರ್ನರ್‌ಗಳ ಮೊದಲ ಸಭೆ ಫೆ.23ರಿಂದ 25ರವರೆಗೆ ನಿಗದಿಯಾಗಿದೆ. ಹಣಕಾಸಿಗೆ ಸಂಬಂಧಿಸಿದಂತೆ ಒಂದು ವರ್ಷದ ಅವಧಿಯಲ್ಲಿ ದೇಶಾದ್ಯಂತ 40 ಸಭೆಗಳು ನಡೆಯಲಿವೆ.

ಸಭೆಯ ಅಜೆಂಡಾ ಏನು?:

ಬೆಂಗಳೂರಿನಲ್ಲಿ ಮಂಗಳವಾರದಿಂದ ಆರಂಭವಾಗಲಿರುವ 3 ದಿನಗಳ ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಸುಸ್ಥಿರ ಹಣಕಾಸು, ಜಾಗತಿಕ ಆರೋಗ್ಯ, ಅಂತಾರಾಷ್ಟ್ರೀಯ ತೆರಿಗೆ ಪದ್ಧತಿ ಹಾಗೂ ಹಣಕಾಸು ವಲಯದ ವಿಷಯಗಳು ಸೇರಿದಂತೆ ಜಾಗತಿಕ ಪ್ರಸ್ತುತತೆ ಕುರಿತು ಗಹನವಾದ ಚರ್ಚೆ ನಡೆಯಲಿದೆ.

ಭಾರತಕ್ಕೆ ಜಿ20 ಶೃಂಗಸಭೆ ಅಧ್ಯಕ್ಷತೆ; ಐತಿಹಾಸಿಕ ಗೋಳಗುಮ್ಮಟಕ್ಕೆ ದೀಪಾಲಂಕಾರ

ಇದೇ ವೇಳೆ, 21ನೇ ಶತಮಾನದ ಜಾಗತಿಕ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳನ್ನು ಬಲಯುತಗೊಳಿಸುವ ಕುರಿತು ಸಂವಾದ ನಡೆಯಲಿದೆ. ಮತ್ತೊಂದೆಡೆ, ಹಸಿರು ಆರ್ಥಿಕತೆಯಲ್ಲಿ ಕೇಂದ್ರೀಯ ಬ್ಯಾಂಕುಗಳ ಪಾತ್ರ ಕುರಿತು ವಿಚಾರ ಸಂಕಿರಣವೂ ಆಯೋಜನೆಗೊಂಡಿದೆ.

ಏನು ಮಹತ್ವ?

- ಭಾರತದ 1 ವರ್ಷದ ಜಿ20 ಅಧ್ಯಕ್ಷತೆ ಇತ್ತೀಚೆಗಷ್ಟೇ ಆರಂಭ
- ಇಡೀ ವರ್ಷ ಭಾರತದ ವಿವಿಧೆಡೆ 200 ಸಭೆಗಳ ಆಯೋಜನೆ
- ಆ ಪೈಕಿ ಕರ್ನಾಟಕದಲ್ಲಿ 14 ಸಭೆ, ಅದರಲ್ಲೀಗ ಮೊದಲ ಸಭೆ
- ಮುಂದಿನ ದಿನಗಳಲ್ಲಿ ಬೆಂಗಳೂರಲ್ಲಿ 10, ಹಂಪಿಯಲ್ಲಿ 2, ಮೈಸೂರಿನಲ್ಲಿ 1 ಸಭೆ ನಿಗದಿ
- ಸದಸ್ಯ ರಾಷ್ಟ್ರಗಳ ಮೂಲಸೌಕರ‍್ಯ, ಹಣಕಾಸು, ಆರೋಗ್ಯ, ತೆರಿಗೆ ಪದ್ಧತಿಗಳ ಬಗ್ಗೆ ಚರ್ಚೆ
 

Follow Us:
Download App:
  • android
  • ios