ಇಬ್ಬರು ಮಕ್ಕಳ ಸಾವಿನ ಬೆನಲ್ಲೇ ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ಇಂಟರ್ನೆಟ್ ಕಡಿತ, ರಾಕೆಟ್ ದಾಳಿಯಲ್ಲಿ ಇಬ್ಬರು ಮಕ್ಕಳ ಸಾವಿನಿಂದ ಮಣಿಪುರದ 5 ಜಿಲ್ಲೆಗಳಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಂಡಿದೆ. 

ಮಣಿಪುರ (ಏ.07) ಮಣಿಪುರ ಕಳೆದ ಕೆಲ ವರ್ಷಗಳಿಂದ ಉದ್ವಿಘ್ನ ಪರಿಸ್ಥಿತಿಯಲ್ಲೇ ಇದೆ. ಭಾರಿ ಹಿಂಸಾಚಾರಗಳಲ್ಲಿ ಹಲವರು ಮೃತಪಟ್ಟಿದ್ದಾರೆ. ಮೈತಿಯೇ, ಕುಕಿ ಸಮುದಾಯದ ನಡುವೆ ಶುರುವಾದ ತಿಕ್ಕಾಟ ಬಳಿಕ ಭಾರಿ ಹಿಂಸಾಚಾರವಾಗಿ ಮಾರ್ಪಟ್ಟಿತ್ತು. ಹಲವು ತಿಂಗಳ ಕಾಲ ಮಣಿಪುರದಲ್ಲಿ ಪರಿಸ್ಥಿತಿ ಉದ್ನಿಘ್ನವಾಗಿತ್ತು. ರಾಷ್ಟ್ರಪತಿ ಆಡಳಿತ, ಸೇನೆ ಕಾರ್ಯಾಚರಣೆಯಿಂದ ಮಣಿಪುರ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ಇದೀಗ ಮತ್ತೆ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಇಬ್ಬರು ಮಕ್ಕಳ ಸಾವಿನ ಬೆನ್ನಲ್ಲೇ ಮಣಿಪುರದ 5 ಜಿಲ್ಲೆಯಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. 5 ಜಿಲ್ಲೆಗಳಲ್ಲಿ ಇಂಟರ್ನೆಟ್, ಮೊಬೈಲ್ ಡೇಟಾ ಕಡಿತ ಮಾಡಲಾಗಿದೆ.

ಕುಕಿ ಗುಂಪಿನಿಂದ ದಾಳಿ

ಮಣಿಪುರದಲ್ಲಿ ಕುಕಿ ಶಸಸ್ತ್ರ ಗುಂಪು ಸೇರಿದಂತೆ ಹಲವು ಗುಂಪುಗಳು ದಾಳಿ ನಡೆಸಿದೆ ಇದರ ನಡುವೆ ರಾಕೆಟ್ ದಾಳಿ ನಡೆದಿದೆ. ಮಲಗಿದ್ದ ವೇಳೆ ಮನೆಗೆ ಬಾಂಬ್ ಎಸೆಯಲಾಗಿದೆ. ಈ ಬಾಂಬ್ ಸ್ಫೋಟಗೊಂಡು ಪೋಷಕರೊಂದಿಗೆ ಮಲಗಿದ್ದ 5 ತಿಂಗಳ ಹೆಣ್ಣು ಮಗು ಹಾಗೂ 5 ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರು ಮಕ್ಕಳನ್ನು ಇಂಫಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಬದುಕುಳಿಯಲಿಲ್ಲ. ಇತ್ತ ಪೋಷಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೇನಾ ಕ್ಯಾಂಪ್ ಮೇಲೆ ದಾಳಿಗೆ ಯತ್ನ

ಮಕ್ಕಳ ಸಾವಿನ ಬಳಿಕ ಆಕ್ರೋಶ ತೀವ್ರಗೊಂಡಿದೆ. ಇತ್ತ ಉದ್ರಿಕ್ತರ ಗುಂಪುಗಳಿಂದ ಬಿಷ್ಣುಪುರ ಜಿಲ್ಲೆಯಲ್ಲಿ ಹಾಗೂ ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಪ್ರತಿಭಟನೆ ತೀವ್ರಗೊಂಡಿತ್ತು. ಈ ಪ್ರತಿಭಟನೆಯಲ್ಲಿ ಹೆಣ್ಣುಮಕ್ಕಳು, ಮಕ್ಕಳು ಪಾಲ್ಗೊಂಡಿದ್ದರು. ಆದರೆ ಪ್ರತಿಭಟನೆ ನಡೆಯುತ್ತಿದ್ದತೆ ಸ್ವರೂಪ ಬದಲಾಗಿತ್ತು.ಪ್ರತಿಭಟನಾಕಾರರು ಬಿಷ್ಣುಪುರದಲ್ಲಿರುವ ಸಿಆರ್‌ಪಿಫ್ ಕ್ಯಾಂಪ್ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಸಿಆರ್‌ಪಿಫ್ ಸೇನಾ ಕ್ಯಾಂಪ್‌ಗೆ ನುಗ್ಗಿದ ಉದ್ರಿಕ್ತರು ಇಂಧನ ಟ್ಯಾಂಕರ್‌ಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಇಂಧನ ಕೊರತೆ, ಪೂರೈಕೆಯಲ್ಲಿ ವ್ಯತ್ಯಯ ನಡುವೆ ಭರ್ತಿಯಾಗಿದ್ದ ಇಂಧನ ಟ್ಯಾಂಕರ್‌ಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಇದು ಮಣಿಪುರದ ಸಿಆರ್‌ಪಿಫ್ ಸೇನೆಗೆ ಹಂಚಿಕೆ ಮಾಡಿದ್ದ ಇಂಧನವಾಗಿತ್ತು. ಪ್ರತಿಭಟನಾಕಾರರು ಇಂಧನ ಟ್ಯಾಂಕರ್‌ಗೆ ಬೆಂಕಿ ಹಚ್ಚಿದರೆ ಪರಿಣಾಮ ಅತ್ಯಂತ ಗಂಭೀರವಾಗುತ್ತಿತ್ತು. ತಕ್ಷಣವೇ ಎಚ್ಚೆತ್ತೆ ಸಿಆರ್‌ಪಿಫ್ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ.

ಇಂದು ಬೆಳಗ್ಗೆ ಕುಕಿ ಶಸಸ್ತ್ರ ಗುಂಪು ದಾಳಿ ನಡೆಸಿತ್ತು. ಮೊರಿಯಾಂಗ್ ಬಳಿ ಕುಕಿ ಶಸ್ತ್ರಸಜ್ಜಿತ ಗುಂಪು ದಾಳಿ ನಡೆಸಿತದ್ತು. ಬೆಳಗಿನ ಜಾವ ಬಿಎಸ್‌ಎಫ್ ಯೋಧನ ಮನೆ ಮೇಲೆ ದಾಳಿ ನಡೆದಿತ್ತು. ಪರಿಸ್ಥಿತಿ ತೀವ್ರಗೊಂಡಿತ್ತು. ಹಲವು ಕಡೆಗಳಲ್ಲಿ ಪ್ರತಭಟನೆ ನಡೆಯುತ್ತಿದೆ. ಹಿಂಸಾಚಾರ ತೀವ್ರಗೊಳ್ಳುತ್ತಿದೆ. ಇದರ ಪರಿಣಾಮ ಮಣಿಪುರದ 5 ಜಿಲ್ಲೆಗಳಲ್ಲಿ ಇಂಟರ್ನೆಟ್, ಮೊಬೈಲ್ ಡೇಟಾ ಕಡಿತ ಮಾಡಲಾಗಿದೆ. ಶಾಂತಿ ಸ್ಥಾಪನೆಗೆ ಕಠಿಣ ಕ್ರಮಗಳನ್ನ ಕೈಗೊಳ್ಳಲಾಗಿದೆ.