ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಅವರಿಗೆ ಸೇರಿದ 'ಎಕ್ಸಾಲಾಜಿಕ್ ಸೊಲ್ಯೂಷನ್ಸ್' ಕಂಪನಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಬೆಂಗಳೂರು ಮತ್ತು ಕೇರಳದ 6 ಕಡೆ ದಾಳಿ ನಡೆಸಿದೆ. ಸಿಎಂಆರ್‌ಎಲ್ ಕಂಪನಿಯು ಕಾನೂನುಬಾಹಿರವಾಗಿ ಹಣ ಪಾವತಿಸಿದ ಆರೋಪದ ಮೇಲೆ ಈ ಪರಿಶೀಲನೆ ನಡೆದಿದೆ.

 ಬೆಂಗಳೂರು: ಕೇರಳಂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕುಟುಂಬಕ್ಕೆ ಸೇರಿದ್ದ ಕೊಚ್ಚಿನ್ ಮಿನರಲ್ಸ್ ಆಂಡ್ ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಕಂಪನಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬೆಂಗಳೂರಿನ 6 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಂತೆ ಕೇರಳಂನ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಐ(ಎಂ)ನ ಹಿರಿಯ ನಾಯಕ ಪಿಣರಾಯಿ ವಿಜಯನ್‌ಗೆ ಇ.ಡಿ ಅಧಿಕಾರಿಗಳು ಬಿಗ್‌ಶಾಕ್ ಕೊಟ್ಟಿದ್ದು, ಕೇರಳಂ ಹಾಗೂ ಬೆಂಗಳೂರಿನಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

‘ಎಕ್ಸಾಲಾಜಿಕ್ ಸೊಲ್ಯೂಷನ್ಸ್’ ಎಂಬ ಐಟಿ ಕಂಪನಿಗೆ ಕಾನೂನುಬಾಹಿರವಾಗಿ ಹಣ ಪಾವತಿ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಪಿಣರಾಯಿ ವಿಜಯನ್ ಪುತ್ರಿ ವೀಣಾ ಅವರಿಗೆ ಸೇರಿದ್ದ ಬೆಂಗಳೂರಿನಲ್ಲಿರುವ ಕೊಚ್ಚಿನ್ ಮಿನರಲ್ಸ್ ಆಂಡ್ ರೂಟೈಲ್ ಲಿಮಿಟೆಡ್ ಕಚೇರಿ ಮೇಲೆ ಹಾಗೂ ಸಿಬ್ಬಂದಿ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

ಕೇರಳಂ ಮತ್ತು ಬೆಂಗಳೂರಿನಲ್ಲಿ 6 ಕಡೆ ದಾಳಿ ನಡೆಸಿ ಪರಿಶೀಲನೆ

ಸಿಎಂಆರ್‌ಎಲ್‌ ಕಂಪನಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದ ಕೊಚ್ಚಿ ವಲಯದ ಇ.ಡಿ ಅಧಿಕಾರಿಗಳು ಕೇರಳಂ ಮತ್ತು ಬೆಂಗಳೂರಿನಲ್ಲಿ 6 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ತಿರುವನಂತಪುರಂನಲ್ಲಿರುವ ಮಾಜಿ ಸಿಎಂ ಪಿಣರಾಯಿ ವಿಜಯನ್ ಹಾಗೂ ಅಳಿಯ ಮೊಹಮದ್ ರಿಯಾಸ್‌ ನಿವಾಸ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಇನ್ನು ಬೆಂಗಳೂರಿನಲ್ಲಿರುವ ಎಕ್ಸಾಲಾಜಿಕ್ ಕಚೇರಿ ಹಾಗೂ ಕಚೇರಿಯ ಕೆಲ ಸಿಬ್ಬಂದಿ ಮನೆ ಮೇಲೂ ದಾಳಿ ನಡೆಸಲಾಗಿದೆ. ಪಿಣರಾಯಿ ವಿಜಯ್ ಅವರು ಪುತ್ರಿ ವೀಣಾ ಮೂಲಕ ಲಂಚ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪ ಕೇಳಿ ಬಂದಿದೆ.

ಇಡಿ ಮೇಲೆ ಬೆಂಬಲಿಗರ ಕಲ್ಲೇಟು

ಸುದ್ದಿ ತಿಳಿದು ತಿರುವನಂತಪುರದಲ್ಲಿರುವ ವಿಜಯನ್‌ ಅವರ ಮನೆ ಮುಂದೆ ಜಮಾಯಿಸಿದ್ದ ಸಿಪಿಎಂ ಕಾರ್ಯಕರ್ತರು ಭದ್ರತಾ ಸಿಬ್ಬಂದಿ ಹಾಗೂ ಇ.ಡಿ. ಅಧಿಕಾರಿಗಳಿದ್ದ ವಾಹನಗಳ ಮೇಲೆ ಕಲ್ಲು, ಇಟ್ಟಿಗೆ, ಮೊಟ್ಟೆ ತೂರಾಟ ನಡೆಸಿದ್ದಾರೆ. ಈ ವೇಳೆ ವಾಹನದ ಚಾಲಕ ಗಾಯಗೊಂಡಿದ್ದು, ವಾಹನಕ್ಕೆ ಹಾನಿಯಾಗಿದೆ.

ರಾಜಕೀಯ ಸೇಡು

ಈ ದಾಳಿಯು ದೇಶಾದ್ಯಂತ ಪ್ರತಿಪಕ್ಷಗಳ ನಾಯಕರನ್ನು ಹೆಡೆಮುರಿಕಟ್ಟುವ ಬಿಜೆಪಿ ಸರ್ಕಾರ ಪ್ರಯತ್ನದ ಭಾಗವಾಗಿದೆ ಎಂದು ಪಿಣರಾಯಿ ವಿಜಯನ್‌ ಆರೋಪಿಸಿದ್ದಾರೆ. ಈ ರೀತಿಯ ದಾಳಿಗಳು ನನ್ನನ್ನಾಗಲಿ ಅಥವಾ ಸಿಪಿಎಂ ಅನ್ನಾಗಲಿ ದುರ್ಬಲಗೊಳಿಸಲು ಸಾಧ್ಯವಿಲ್ಲ. ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ನಡೆಸುತ್ತಾ ಬರಲಾಗಿದೆ. ಈಗ ನನ್ನ ಮೇಲೆ ನಡೆದಿರುವ ದಾಳಿಯೂ ಆ ತಂತ್ರಗಾರಿಕೆಯ ಭಾಗ ಎಂದು ದೂರಿದ್ದಾರೆ.

ಏನಿದು ಪ್ರಕರಣ ?

ಖಾಸಗಿ ಕಂಪನಿಯಾದ ಕೊಚ್ಚಿನ್ ಮಿನರಲ್ಸ್ ಆಂಡ್ ರೂಟೈಲ್ ಲಿಮಿಟೆಡ್, ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕುಟುಂಬಕ್ಕೆ ನಿಕಟ ಸಂಬಂಧ ಹೊಂದಿರುವ ‘ಎಕ್ಸಾಲಾಜಿಕ್ ಸೊಲ್ಯೂಷನ್ಸ್’ ಎಂಬ ಐಟಿ ಕಂಪನಿಗೆ ಕಾನೂನುಬಾಹಿರವಾಗಿ ಹಣ ಪಾವತಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದರೊಂದಿಗೆ ಲಂಚ ಮತ್ತು ವ್ಯಾಪಕ ಅಕ್ರಮ ಹಣ ವರ್ಗಾವಣೆಯ ಆರೋಪಗಳೂ ಕೇಳಿಬಂದಿವೆ. ಈ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೆಸರನ್ನು ನೇರವಾಗಿ ಆರೋಪಿ ಎಂದು ಉಲ್ಲೇಖಿಸದಿದ್ದರೂ, ಅವರ ಪುತ್ರಿ ವೀಣಾ ಅವರಿಗೆ ಸೇರಿದ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸಿಎಂಆರ್‌ಎಲ್ ಕಂಪನಿಯು ನಿಯಮಬಾಹಿರವಾಗಿ ಹಣ ವರ್ಗಾವಣೆ ಮಾಡಿರುವುದು ಇಡೀ ವಿವಾದಕ್ಕೆ ಕಾರಣವಾಗಿದೆ.