ಪತ್ನಿ, ಪುತ್ರಿಯನ್ನು ಕಾಣುವುದಕ್ಕೆ ಲಂಡನ್ ವಿಮಾನ ಹತ್ತಿದ್ದ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ವಿಮಾನ ದುರಂತದಲ್ಲಿ ಅಂತ್ಯ ಕಾಣುತ್ತಿದ್ದಂತೆ ಅವರ ಸಾವಿನ ಬಗ್ಗೆ ಅಚ್ಚರಿಯ ಅಂಶವೊಂದು ಹೊರಬಿದ್ದಿದೆ. 1206 ಸಂಖ್ಯೆಯನ್ನು ಅದೃಷ್ಟ ಎಂದು ನಂಬುತ್ತಿದ್ದ ರೂಪಾನಿಗೆ ಆ ಸಂಖ್ಯೆಯೇ ಗುರುವಾರ ಕೈಕೊಟ್ಟಿತ್ತು.
ಅಹಮದಾಬಾದ್: ಪತ್ನಿ, ಪುತ್ರಿಯನ್ನು ಕಾಣುವುದಕ್ಕೆ ಲಂಡನ್ ವಿಮಾನ ಹತ್ತಿದ್ದ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ವಿಮಾನ ದುರಂತದಲ್ಲಿ ಅಂತ್ಯ ಕಾಣುತ್ತಿದ್ದಂತೆ ಅವರ ಸಾವಿನ ಬಗ್ಗೆ ಅಚ್ಚರಿಯ ಅಂಶವೊಂದು ಹೊರಬಿದ್ದಿದೆ. 1206 ಸಂಖ್ಯೆಯನ್ನು ಅದೃಷ್ಟ ಎಂದು ನಂಬುತ್ತಿದ್ದ ರೂಪಾನಿಗೆ ಆ ಸಂಖ್ಯೆಯೇ ಗುರುವಾರ ಕೈಕೊಟ್ಟಿತ್ತು.
ವಿಜಯ್ ರೂಪಾನಿ 1206 ಸಂಖ್ಯೆಯನ್ನು ತಮ್ಮ ಲಕ್ಕಿ ನಂಬರ್ ಎಂದು ಭಾವಿಸಿದ್ದರು. ಇದೇ ಕಾರಣಕ್ಕಾಗಿ ಅವರ ದ್ವಿಚಕ್ರ ವಾಹನ ಮತ್ತು ಕಾರಿನ ನೋಂದಣಿಯೂ ಕೂಡ ಅದೇ ಸಂಖ್ಯೆಯಲ್ಲಿತ್ತು. ಕಾಕತಾಳೀಯ ಎನ್ನುವಂತೆ ಅವರು ಮರಣ ಹೊಂದಿದ ದಿನ ಜೂನ್ 12 ಅಂದರೆ 12-06. ಅದು ಅವರ ಅದೃಷ್ಟದ ಸಂಖ್ಯೆಯನ್ನೇ ಹೋಲುತ್ತದೆ. ಆದರೆ ಆ ದಿನವೇ ವಿಧಿಯಾಟಕ್ಕೆ ಬಲಿಯಾಗಿದ್ದು ದುರಂತ.
ಮತ್ತೊಂದು ಅದೃಷ್ಟ
ಗುರುವಾರ (ಜೂನ್ 12) ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ವಿಮಾನದಲ್ಲಿದ್ದ 241 ಪ್ರಯಾಣಿಕರು ಸೇರಿ ಒಟ್ಟು 265 ಜನರು ಸಾವನ್ನಪ್ಪಿದ್ದಾರೆ. ಆದರೆ ಈ ಅಪಘಾತದಲ್ಲಿ ಒಬ್ಬ ವ್ಯಕ್ತಿ ಪವಾಡಸದೃಶವಾಗಿ ಬದುಕುಳಿದಿದ್ದಾನೆ. ಮೃತ್ಯುಂಜಯ ರಮೇಶ್. ಅಪಘಾತಕ್ಕೀಡಾದ ಡ್ರೀಮ್ಲೈನರ್ ವಿಮಾನದಲ್ಲಿದ್ದ 238 ಎಕಾನಮಿ ಕ್ಲಾಸ್ ಸೀಟುಗಳಲ್ಲಿ, ಅದರಲ್ಲಿ ಕುಳಿತಿದ್ದ ವ್ಯಕ್ತಿ ಸಾವನ್ನೇ ಗೆದ್ದು ಬಂದಿದ್ದಾನೆ.
ವಿಮಾನ ಕಟ್ಟಡಕ್ಕೆ ಅಪ್ಪಳಿಸುತ್ತಿದ್ದಂತೆ ಬೆಂಕಿಯುಂಡೆಯಂತೆ ಛಿದ್ರವಾಯಿತು. ಇದರಲ್ಲಿ ಯಾವುದೇ ವ್ಯಕ್ತಿ ಜೀವಂತವಾಗಿ ಬದುಕಿಬರಲು ಸಾಧ್ಯವಿರಲ್ಲ. ಆದರೆ ಈ ಪವಾಡ ಸದೃಶವಾಗಿ ಬದುಕುಳಿದ ಬ್ರಿಟಿಷ್ ಪ್ರಜೆ ರಮೇಶ್ ತುಂಬಾ ಅದೃಷ್ಟಶಾಲಿ, ಸಾವನ್ನೇ ಗೆದ್ದ ಮೃತ್ಯುಂಜಯ ಎನಿಸಿದ್ದಾನೆ.
ಸುಟ್ಟು ಕರಕಲಾದ ವಿಮಾನ
ಅವಶೇಷ ನಡುವೆ ಸುಡದೇ
ಉಳಿದ ಭಗವದ್ಗೀತೆ ಪುಸ್ತಕ!
ಅಹಮದಾಬಾದ್: ಗುಜರಾತ್ನ ಭೀಕರ ವಿಮಾನ ದುರಂತ ನಡೆದ ಸ್ಥಳದಲ್ಲಿ ಪ್ರಯಾಣಿಕರ ಮೃತದೇಹಗಳು, ವಿಮಾನದ ಅವಶೇಷಗಳು ಮಾತ್ರವಲ್ಲದೆ, ಪ್ರಯಾಣಿಕರ ಸಾಮಾನು ಸರಂಜಾಮುಗಳೂ ದೊರೆಯುತ್ತಿವೆ. ಸುಟ್ಟು ಕರಕಲಾಗಿ ಬಿದ್ದಿರುವ ವಿಮಾನದ ಅವಶೇಷಗಳ ನಡುವೆ, ಪ್ರಯಾಣಿಕರೊಬ್ಬರ ಬಳಿಯಿದ್ದ ಭಗವದ್ಗೀತೆ ಪುಸ್ತಕ ಸಂಪೂರ್ಣ ಸುರಕ್ಷಿತವಾಗಿ ದೊರಕಿದ್ದು, ಗಮನ ಸೆಳೆದಿದೆ. ದುರಂತ ಸ್ಥಳದಲ್ಲಿ ಪರಿಶೀಲನೆ ವೇಳೆ ಭಗವದ್ಗೀತೆ ಪುಸ್ತಕ ದೊರಕಿದೆ. ವಿಮಾನದ ಅವಶೇಷಗಳೆಲ್ಲ ಸುಟ್ಟು ಕರಕಲಾಗಿದ್ದರೂ ಅದರ ನಡುವೆ ಈ ಪುಸ್ತಕ ಮಾತ್ರ ಸುಡದೇ ಉಳಿದಿರುವುದು ಅಚ್ಚರಿ ಮೂಡಿಸಿದೆ ಎಂದು ರಕ್ಷಣಾ ಸಿಬ್ಬಂದಿ ಹೇಳಿದ್ದಾರೆ.
