ತಮಿಳುನಾಡಿನ ವಿಜಯ್ ನೇತೃತ್ವದ ಸರ್ಕಾರವು, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಶಿಶುಗಳಿಗೆ 1 ಗ್ರಾಂ ಚಿನ್ನದ ಉಂಗುರ ನೀಡುವ 'ತೈಮಾಮನ್ ತಂಗ ಮೋತಿರಾಂ ತಿಟ್ಟಂ' ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಸಿ.ಎನ್. ಅಣ್ಣಾದುರೈ ಅವರ ಜನ್ಮದಿನವಾದ ಸೆಪ್ಟೆಂಬರ್ 15 ರಂದು ಈ ಯೋಜನೆಗೆ ಚಾಲನೆ ಸಿಗಲಿದೆ.
ಚೆನ್ನೈ (ಜೂ.25): ಟಿವಿಕೆ ಪಕ್ಷ(TVK Party)ದ ಭರವಸೆಗಳಲ್ಲಿ ಒಂದಾದ ಶಿಶುಗಳಿಗೆ 1 ಗ್ರಾಂ ಚಿನ್ನದ ಉಂಗುರ ನೀಡುವ ಯೋಜನೆಯನ್ನು ಜೂ.22ರಿಂದ ಪೂರ್ವಾನ್ವಯ ಆಗುವಂತೆ ಸೆ.15ರಿಂದ ಜಾರಿಗೆ ತರಲು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಸರ್ಕಾರ ನಿರ್ಧರಿಸಿದೆ. ಪ್ರಣಾಳಿಕೆಯಲ್ಲಿ ತಿಳಿಸಿದಂತೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಮಕ್ಕಳಿಗೆ ಇದು ಅನ್ವಯ ಆಗಲಿದೆ.
ಇದೇ ವೇಳೆ, ಯೋಜನೆಯ ನಿರ್ವಹಣೆಗಾಗಿ ಪ್ರತ್ಯೇಕ ರಾಜ್ಯ ಯೋಜನೆ/ಕಾರ್ಯಕ್ರಮ ನಿರ್ವಹಣಾ ಘಟಕದ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.
ಪರಿವಾರದಲ್ಲಿ ಜನಿಸುವ ಮಗುವನ್ನು ಮನೆಗೆ ಬರಮಾಡಿಕೊಳ್ಳುವಾಗ ಸೋದರ ಮಾವನ ಕಡೆಯಿಂದ ಚಿನ್ನದ ಉಡುಗೊರೆ ನೀಡುವ ಪದ್ಧತಿ ತಮಿಳುನಾಡಲ್ಲಿದೆ. ಇದನ್ನೇ ‘ತೈಮಾಮನ್ ತಂಗ ಮೋತಿರಾಂ ತಿಟ್ಟಂ’ ಯೋಜನೆಯ ಮೂಲಕ ವಿಜಯ್ ಮಾಡಲು ಹೊರಟಿದ್ದು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ಶಿಶುವಿಗೆ 13,600 ರು. ಮೌಲ್ಯದ 1 ಗ್ರಾಂ ಚಿನ್ನದ ಉಂಗುರವನ್ನು ನೀಡಲಾಗುವುದು. ಇದಕ್ಕೆ ವಾರ್ಷಿಕ 755 ಕೋಟಿ ರು. ಅನುದಾನ ತೆಗೆದಿಡಲಾಗಿದೆ.
ಶಿಶುಗಳಿಗೆ ಚಿನ್ನದ ಉಂಗುರ ಸೆ.15ಕ್ಕೆ ಜಾರಿ:
ಡಿಎಂಕೆ ಪಕ್ಷದ ಸ್ಥಾಪಕರಾದ ಸಿ.ಎನ್. ಅಣ್ಣಾದುರೈ ಅವರ ಜನ್ಮದಿನವಾದ ಸೆ.15ರಂದು ಚಿನ್ನದುಂಗುರದ ಯೋಜನೆಯನ್ನು ಜಾರಿಗೆ ತರಲು ವಿಜಯ್ ಸರ್ಕಾರ ನಿರ್ಧರಿಸಿದೆ. ಇದರ ಭಾಗವಾಗಿ ವಿಜಯ್ ಅವರ ಜನ್ಮದಿನವಾದ 2026ರ ಜೂ.22ರ ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಎಲ್ಲಾ ಕಂದಮ್ಮಗಳಿಗೆ ಪೂರ್ವಾನ್ವಯ ಆಗುವಂತೆ 1 ಗ್ರಾಂ ಹೊನ್ನಿನ ಉಗುರ ನೀಡಲಾಗುವುದು. ತಮಿಳುನಾಡಿನ ಸಂಸ್ಕೃತಿಯಂತೆ ಮಗುವನ್ನು ಜಗತ್ತಿಗೆ ಬರಮಾಡಿಕೊಳ್ಳಲು ಮತ್ತು ತಾಯ್ತನವನ್ನು ಸಂಭ್ರಮಿಸುವ ಉದ್ದೇಶವು ಈ ಯೋಜನೆಯದ್ದಾಗಿದೆ.
ತಮಿಳುನಾಡಿನಲ್ಲಿ ವರ್ಷಕ್ಕೆ ಸರಾಸರಿ 7.8 ಲಕ್ಷ ಮಕ್ಕಳು ಜನಿಸುತ್ತಿದ್ದು, ಅವುಗಳ ಪೈಕಿ 4.2 ಲಕ್ಷ ಜನನಗಳು ಸರ್ಕಾರಿ ಆಸ್ಪತ್ರೆಗಳಲ್ಲಾಗುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ಸೆರಾಸರಿ 63 ಸಾವಿರ ರು. ಖರ್ಚಿದ್ದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ 1300 ರು.ಗೆ ಆಗುತ್ತದೆ.


