ಗೀಲಾನಿ ಮೃತದೇಹಕ್ಕೆ ಪಾಕ್ ಧ್ವಜ, ದೇಶದ್ರೋಹಿ ಘೋಷಣೆ: ಕುಟುಂಬದ ವಿರುದ್ಧ FIR!
* ಜಮ್ಮು ಕಾಶ್ಮೀರವನ್ನು ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿ ನಿಧನ
* ಗೀಲಾನಿ ಮೃತದೇಹದ ಮೇಲೆ ಪಾಕ್ ಧ್ವಜ, ದೇಶದ್ರೋಹಿ ಘೋಷಣೆಿ
* ಗೀಲಾನಿ ಕುಟುಂಬ ಸದಸ್ಯರ ವಿರುದ್ಧ ದಾಖಲಾಯ್ತು ಎಫ್ಐಆರ್
ಶ್ರೀನಗರ(ಫೆ.05): ಪಾಕಿಸ್ತಾನದ ಪರ ಹೇಳಿಕೆಗಳಿಂದ ಸದ್ದು ಮಾಡುತ್ತಿದ್ದ ಜಮ್ಮು ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿಸಲು ಪ್ರಯತ್ನಿಸಿದ್ದ ತೆಹ್ರಿಕ್-ಎ-ಹುರಿಯತ್ ಎಂಬ ಕಟ್ಟರ್ ಪ್ರತ್ಯೇಕತಾವಾದಿ ಸಂಘಟನೆಯ ಸಂಸ್ಥಾಪಕ ಸೈಯದ್ ಅಲಿ ಶಾ ಗೀಲಾನಿ ನಿಧನರಾಗಿದ್ದಾರೆ. ಯಾವತ್ತೂ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸದ್ದು ಮಾಡುತ್ತಿದ್ದ ಗೀಲಾನಿಯ ಅಂತ್ಯಕ್ರಿಯೆಯೂ ಸದ್ಯ ಭಾರೀ ವಿವಾದ ಸೃಷ್ಟಿಸಿದೆ. ಹೌದು ಗೀಲಾನಿ ಮೃತದೇಹದ ಮೇಲೆ ಪಾಕಿಸ್ತಾನ ಧ್ವಜ ಹೊದಿಸಿದ ಹಾಗೂ ದೇಶದ್ರೋಹಿ ಘೋಷಣೆಗಳನ್ನು ಕೂಗಿದ ವಿಚಾರವಾಗಿ ಅವರ ಕುಟುಂಬ ಸದಸ್ಯರ ವಿರುದ್ಧ ಜಮ್ಮು ಕಾಶ್ಮೀರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಲೆಫ್ಟಿನೆಂಟ್ ಜನರಲ್ ಕಂಡಂತೆ ಕಾಶ್ಮೀರ, ಪ್ರತ್ಯೇಕತಾವಾದಿ ಮತ್ತು ರಾಜಕೀಯ ಗೀಲಾನಿಯ ಪುರಾಣ!
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು 'ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಮತ್ತು ಬುಧವಾರ ಗೀಲಾನಿ ನಿಧನದ ಬಳಿಕ ಮೃತದೇಹದ ಮೇಲೆ ಪಾಕಿಸ್ತಾನದ ಧ್ವಜ ಹಾಕಿದ್ದ ಪ್ರಕರಣ ಸಂಬಂಧ ಅವರ ಕುಟುಂಬ ಸದಸ್ಯರ ವಿರುದ್ಧ ಬದ್ಗಾಮ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದಿದ್ದಾರೆ.
ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 92 ವರ್ಷದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿ ಬುಧವಾರ ರಾತ್ರಿ ಹೈದರ್ಪೋರಾದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು. ಹೀಗಿರುವಾಗ ಗೀಲಾನಿ ನಿಧನದ ಬೆನ್ನಲ್ಲೇ ಪೊಲೀಸರು ರಾತ್ರೋ ರಾತ್ರಿ ಅವರ ಮೃತದೇಹವನ್ನು ಕಸಿದುಕೊಂಡು ಸಮಾಧಿ ಮಾಡಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದರು. ಆದರೆ ಇವರ ಈ ಆರೋಪವನ್ನು ಪೊಲೀಸರು ತಳ್ಳಿ ಹಾಕಿದ್ದರು. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಗೀಲಾನಿ ಮೃತದೇಹದ ಮೇಲೆ ಪಾಕಿಸ್ತಾನ ಧ್ವಜ ಹೊದಿಸಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.
ಇನ್ನು ಗೀಲಾನಿ ನಿಧನದ ಬೆನ್ನಲ್ಲೇ ಕಣಿವೆ ನಾಡಿನಲ್ಲಿ ಹಿಂಸಾಚಾರ ಆರಂಭವಾಗುವ ಭೀತಿ ಇತ್ತು. ಅದೃಷ್ಟವಶಾತ್ ಭದ್ರತಾ ಪಡೆ ಕೈಗೊಂಡ ಕ್ರಮಗಳಿಂದ ಬದ್ಗಾಮ್ನ ನರ್ಕರಾದಲ್ಲಿ ನಡೆದ ಕಲ್ಲೆಸೆತ ಪ್ರಕರಣ ಬಿಟ್ಟರೆ ಇಡೀ ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು ಎಂಬುವುದು ಸಂತಸದ ವಿಚಾರ. ಈ ಬಗ್ಗೆ ಕಾಶ್ಮೀರ ವ್ಯಾಪ್ತಿಯ ಐಜಿಪಿ ವಿಜಯ ಕುಮಾರ್ ಪ್ರತಿಕ್ರಿಯಿಸಿದ್ದು, ಗೀಲಾನಿಯ ನಿಧನದ ಬಳಿಕ ಕಣಿವೆ ನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪೊಲೀಸರು ಈವರೆಗೆ ಹತ್ತಾರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.
ಗಿಲಾನಿ ನಿಧನಕ್ಕೆ ಪಾಕ್ನಲ್ಲಿ ಶೋಕ: ತನ್ನದೇ ಮಾಜಿ ರಾಷ್ಟ್ರಪತಿ ಸಾವಿಗಿರಲಿಲ್ಲ ಈ ದುಃಖ!
ಅಲ್ಲದೇ "ಗೀಲಾನಿ ನಿಧನದ ಬಳಿಕರ ಸ್ಥಗಿತಗೊಳಿಸಲಾದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಒಟ್ಟಾರೆ ಭದ್ರತೆಯ ಪರಿಶೀಲಿಸಿದ ನಂತರ ಶೀಘ್ರವೇ ಪುನಃಸ್ಥಾಪಿಸಲಾಗುವುದು" ಎಂದೂ ವಿಜಯ್ ಕುಮಾರ್ ಹೇಳಿದ್ದಾರೆ.