ಸ್ವಾಮಿ ನಿತ್ಯಾನಂದ ಕೇಸ್, ಕೇಂದ್ರ ಗೃಹ ಸಚಿವಾಲಯಕ್ಕೆ ಗುಜರಾತ್ ಹೈಕೋರ್ಟ್ ಛೀಮಾರಿ!
ನಿತ್ಯಾನಂದನ ಬಂಧನದಲ್ಲಿರುವ ಇಬ್ಬರು ಬಾಲಕಿಯರನ್ನು ಮರಳಿ ಕರೆತರಲು ವಿಫಲವಾಗಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ಗುಜರಾತ್ ಹೈಕೋರ್ಟ್ ಛೀಮಾರಿ ಹಾಕಿದೆ. 2019ರ ನವೆಂಬರ್ನಲ್ಲಿ ಇಬ್ಬರು ಬಾಲಕಿಯರ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಬ್ಬರನ್ನು ಕಿಂಗ್ಸ್ಟನ್ನ ಜಮೈಕಾದಲ್ಲಿ ಇರಿಸಲಾಗಿದ್ದು, ಅವರನ್ನು ಕರೆತರಲು ತೀರಾ ಸಣ್ಣ ಮಟ್ಟದ ಪ್ರಯತ್ನ ಮಾಡಲಾಗಿದೆ ಎಂದಿದ್ದಾರೆ.
ಅಹಮದಾಬಾದ್ (ಜ.14): ಕೇಂದ್ರ ಗೃಹ ಸಚಿವಾಲಯ (MHA) ಮತ್ತು ಇತರ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಮತ್ತು ಇಬ್ಬರು ಹುಡುಗಿಯರ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಲು ವಿಫಲರಾಗಿದ್ದಾರೆ ಎಂದು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಹೇಳುವ ಮೂಲಕ ಗೃಹ ಸಚಿವಾಲಯಕ್ಕೆ ಛೀಮಾರಿ ಹಾಕಿದೆ. ಇಬ್ಬರೂ ಬಾಲಕಿಯರನ್ನು ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ವಿದೇಶದಲ್ಲಿ ಅಕ್ರಮವಾಗಿ ಬಂಧನದಲ್ಲಿರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತಾಗಿ ಸರ್ಕಾರ ಯಾವುದೇ ಕ್ರಮವನ್ನು ಕೈಗೊಳ್ಳದೇ ಇರುವ ಬಗ್ಗೆ ಕೋರ್ಟ್ ಕಿಡಿಕಾರಿದೆ. 2019 ರ ನವೆಂಬರ್ನಲ್ಲಿ ಇಬ್ಬರು ಬಾಲಕಿಯರ ತಂದೆ ಹೇಬಿಯಸ್ ಕಾರ್ಪಸ್ ಅರ್ಜಿಯ ಮೂಲಕ ಹೈಕೋರ್ಟ್ಗೆ ತೆರಳಿದ್ದರೂ, ಅಧಿಕಾರಿಗಳು ಹುಡುಗಿಯರನ್ನು ಮರಳಿ ಕರೆತರಲು ಅಥವಾ ಸಂಪರ್ಕ ಸಾಧಿಸಲು ಸ್ವಲ್ಪವೂ ಕೆಲಸ ಮಾಡಿದ್ದ ಎಂದು ನ್ಯಾಯಮೂರ್ತಿಗಳಾದ ಎನ್ವಿ ಅಂಜಾರಿಯಾ ಮತ್ತು ನಿರಾಲ್ ಆರ್ ಮೆಹ್ತಾ ಅವರ ವಿಭಾಗೀಯ ಪೀಠವು ಗಮನಿಸಿದೆ. ಇಬ್ಬರೂ ಬಾಲಕಿಯರನ್ನು ಜಮೈಕಾದ ಕಿಂಗ್ಸ್ಟನ್ನಲ್ಲಿ ಅಕ್ರಮವಾಗಿ ಬಂಧನದಲ್ಲಿ ಇರಿಸಲಾಗಿದೆ.
"ಹೇಬಿಯಸ್ ಕಾರ್ಪಸ್ ಅರ್ಜಿಯ ಪ್ರಕ್ರಿಯೆಯು ಹಲವಾರು ಆದೇಶಗಳನ್ನು ನೀಡಾಗಿದೆ. ಸಾಕಷ್ಟು ಸಮಯದ ಬಳಿಕವೂ ಈಗಲೂ ಇದೇ ಪ್ರಕರಣ ಮತ್ತೆ ವಿಚಾರಣೆಗೆ ಬಂದಿದೆ. ಈವರೆಗೂ ನೀಡಿರುವ ಆದೇಶದಿಂದ ಯಾವುದೇ ಫಲವಾಗಿಲ್ಲ. ಇನ್ನು ಈ ಅರ್ಜಿಯ ವಿಚಾರವಾಗಿ ನಡೆದ ಪ್ರಕ್ರಿಯೆಯನ್ನು ಸ್ವಾಗತಾರ್ಹ ಎಂದು ಹೇಳಲು ಸಾಧ್ಯವಿಲ್ಲ' ಎಂದು ವಿಭಾಗೀಯ ಪೀಠ ಹೇಳಿದೆ. ನವೆಂಬರ್ 12 ರಂದು ಪೀಠವು ಈ ಆದೇಶವನ್ನು ಹೊರಡಿಸಿದೆ.
ಅರ್ಜಿಯಲ್ಲಿ ಕೇಂದ್ರ ಗೃಹ ಸಚಿವಾಲಯವನ್ನೂ ಪ್ರತಿವಾದಿಯನ್ನಾಗಿ ಮಾಡಲಾಗಿದ್ದರೂ, ಪ್ರಕರಣದಲ್ಲಿ ಇನ್ನೂ ಯಾವುದೇ ಅಫಿಡವಿಟ್ ಸಲ್ಲಿಸಿಲ್ಲ ಎಂದು ನ್ಯಾಯಾಧೀಶರು ಗಮನಿಸಿದ್ದಾರೆ.
ತನಿಖೆಯಲ್ಲಿ, ಇಬ್ಬರು ಬಾಲಕಿಯರ ವೈಯಕ್ತಿಕ ಸ್ವಾತಂತ್ರ್ಯವನ್ನು ಭದ್ರಪಡಿಸಲು ಮತ್ತು ಚಿಂತೆಗೀಡಾದ ತಂದೆಯ ಕಳವಳವನ್ನು ಪರಿಹಾರ ಮಾಡಲು ಅಧಿಕಾರಿಗಳು ತಮ್ಮ ಕರ್ತವ್ಯಗಳ ನಿರ್ವಹಣೆಯಲ್ಲಿ ಕೊರತೆಯನ್ನು ತೋರುತ್ತಿದ್ದಾರೆ ಎಂದು ಪೀಠವು ಹೇಳಿದೆ. ಇಬ್ಬರೂ ಬಾಲಕಿಯರು ಭಾರತದಿಂದ ಹೊರಗೆ ಬಂಧನದಲ್ಲಿರುವ ಕಾರಣ, ಈ ಪ್ರಕರಣದಲ್ಲಿ ಸ್ವತಃ ಗೃಹ ಸಚಿವಾಲಯವೇ ಅಫಡವಿಟ್ ಸಲ್ಲಿಸಬೇಕು ಎಂದು ಕೋರ್ಟ್ ಹೇಳಿದೆ.
ವಿಶ್ವದ ಗರ್ಭಿಣಿಯರಿಗೆ ಬಂಪರ್ ಆಫರ್, ಹೆರಿಗೆಗೆ ಕೈಲಾಸಕ್ಕೆ ಬನ್ನಿ ಎಂದ ನಿತ್ಯಾನಂದ!
ನವೆಂಬರ್ 2019 ರಲ್ಲಿ ತನ್ನ ಇಬ್ಬರು ಹೆಣ್ಣುಮಕ್ಕಳು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ ಎಂದು ಅರ್ಜಿದಾರರು ದೂರು ಸಲ್ಲಿಸಿದ್ದರು. ಸ್ವಾಮಿ ನಿತ್ಯಾನಂದ ತನ್ನಿಬ್ಬರು ಬಾಲಕಿಯರನ್ನು ಬಲವಂತವಾಗಿ ಕರೆದೊಯ್ಡು, ಅಕ್ರಮವಾಗಿ ಬಂಧನದಲ್ಲಿ ಇರಿಸಿದ್ದಾರೆ. ಈ ಪ್ರಕರಣದಲ್ಲಿ ಅವರ ಪಾತ್ರವೇ ಪ್ರಮುಖವಾಗಿದೆ ಎಂದು ಆರೋಪಿಸಿದ್ದಾರೆ. ಹೈಕೋರ್ಟ್ನ ವಿವಿಧ ಪೀಠಗಳು ಈ ಹಿಂದೆ ಹಲವು ಆದೇಶಗಳನ್ನು ನೀಡಿದ್ದರೂ ಯಾವುದೇ ಫಲ ನೀಡಿಲ್ಲ ಎಂದು ಕೋರ್ಟ್ ಗಮನಿಸಿದೆ.
ಸೂರ್ಯನನ್ನೇ ತಡೆದಿದ್ದೇ ಎಂದಿದ್ದ ನಿತ್ಯಾನಂದನಿಗೆ ಈಗ ಸಾವಿನ ಭಯ!
ಇಬ್ಬರು 'ಕಾಣೆಯಾದ' ಹುಡುಗಿಯರನ್ನು ಪ್ರತಿನಿಧಿಸುವ ಹಿರಿಯ ವಕೀಲ ಬಿಬಿ ನಾಯ್ಕ್ ಅವರು, ಏಪ್ರಿಲ್ 2022 ರಲ್ಲಿ ಬಾಲಕಿಯರೊಂದಿಗೆ ಕೊನೆಯದಾಗಿ ಸಂವಹನ ನಡೆಸಿದ್ದರು ಮತ್ತು ಅಂದಿನಿಂದ ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ನ್ಯಾಯಾಲಯದ ಮುಂದೆ ತಮ್ಮ ವಾಸ್ತವ ಉಪಸ್ಥಿತಿಯನ್ನು ಭದ್ರಪಡಿಸಿಕೊಳ್ಳಲು ವಿವಿಧ ಪೀಠಗಳು ಈ ಹಿಂದೆ ಪ್ರಯತ್ನಿಸಿದ್ದವು ಆದರೆ ಹುಡುಗಿಯರು ಹಾಜರಾಗಲಿಲ್ಲ. ಕಳೆದ ವರ್ಷ ಫೆಬ್ರವರಿಯಲ್ಲಿ ಬಾಲಕಿಯರು ತಮ್ಮ ಪ್ರಸ್ತುತ ವಾಸಸ್ಥಳವನ್ನು ಬಹಿರಂಗಪಡಿಸದೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ (UNCHR) ಪ್ರತಿನಿಧಿಯೊಂದಿಗೆ ಮತ್ತು ಅಮೆರಿಕದ ವಕೀಲರೊಂದಿಗೆ ವಿಶ್ವಸಂಸ್ಥೆಗೆ ಭಾರತೀಯ ಖಾಯಂ ಮಿಷನ್ನಲ್ಲಿ ಹಾಜರಾಗಲು ಒಪ್ಪಿಕೊಂಡಿದ್ದರು. ಪೀಠ ಮುಂದಿನ ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿತು.