Asianet Suvarna News Asianet Suvarna News

ರೈಲು ಹಳಿ ಮೇಲೆ ಟೈರ್‌ ಇಟ್ಟ ಕಿಡಿಗೇಡಿಗಳು: ತಮಿಳುನಾಡಲ್ಲಿ ತಪ್ಪಿದ ಮತ್ತೊಂದು ಭೀಕರ ರೈಲು ದುರಂತ!

ತಮಿಳುನಾಡಲ್ಲೂ ಭೀಕರ ರೈಲು ದುರಂತ ಸಂಭವಿಸುವುದು ದೇವರ ಕೃಪೆಯಿಂದ ಮಿಸ್‌ ಆಗಿದೆ. ರೈಲು ಅಪಘಾತವಾಗಲೆಂದು ರೈಲು ಹಳಿ ಮೇಲೆ ಟೈರ್‌ ಇಡಲಾಗಿತ್ತಾದರೂ ಲೋಕೋ ಪೈಲಟ್‌ಗಳ ಸಮಯ ಪ್ರಜ್ಞೆಯಿಂದ ಅಪಘಾತ ತಪ್ಪಿದೆ. 

express train hits lorry tyre placed on track near tiruchi suffers detention ash
Author
First Published Jun 4, 2023, 11:44 AM IST

ಚೆನ್ನೈ (ಜೂನ್ 4, 2023): ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 288 ಜನ ಬಲಿಯಾಗಿದ್ದು, ಸುಮಾರು 1000 ಜನರಿಗೆ ಗಾಯಗಳಾಗಿದೆ ಎಂದು ವರದಿಯಾಗಿದೆ. ಘಟನಾ ಸ್ಥಳದಲ್ಲಿ ಹೆಣಗಳ ರಾಶಿ ಹಾಗೂ ರಕ್ತದ ಹೊಳೆ ಹರಿದಿರುವುದ್ನು ಪ್ರತ್ಯಕ್ಷದರ್ಶಿಗಳು ಹಾಗೂ ದುರಂತದ ರೈಲುಗಳಲ್ಲಿ ಇದ್ದು ಅದೃಷ್ಟವಶಾತ್‌ ಬಚಾವಾದವರು ಹೇಳಿದ್ದಾರೆ. ಈ ನಡುವೆ, ತಮಿಳುನಾಡಲ್ಲೂ ಭೀಕರ ರೈಲು ದುರಂತ ಸಂಭವಿಸುವುದು ದೇವರ ಕೃಪೆಯಿಂದ ಮಿಸ್‌ ಆಗಿದೆ. ರೈಲು ಅಪಘಾತವಾಗಲೆಂದು ರೈಲು ಹಳಿ ಮೇಲೆ ಟೈರ್‌ ಇಡಲಾಗಿತ್ತಾದರೂ ಲೋಕೋ ಪೈಲಟ್‌ಗಳ ಸಮಯ ಪ್ರಜ್ಞೆಯಿಂದ ಅಪಘಾತ ತಪ್ಪಿದೆ. 

ಹೌದು, ತಮಿಳುನಾಡಿನ ತಿರುಚ್ಚಿ ಬಳಿ ರೈಲ್ವೆ ಟ್ರ್ಯಾಕ್‌ ಮೇಲೆ ಇಡಲಾಗಿದ್ದ ಲಾರಿ ಟೈರ್‌ಗೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಆದರೆ, ಯಾರಿಗೂ ಗಾಯಗಳಾಗಿಲ್ಲ. ಇದಕ್ಕೆ ಕಾರಣ ಲೋಕೋ ಪೈಲಟ್‌ಗಳ ಸಮಯ ಪ್ರಜ್ಞೆ. ಕನ್ಯಾಕುಮಾರಿ-ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್‌ಗಳು ಎರಡು ಟ್ರಕ್‌ಗಳ ಟೈರ್‌ಗಳನ್ನು ರೈಲ್ವೆ ಟ್ರ್ಯಾಕ್‌ನಲ್ಲಿ ಇರಿಸಿರುವುದನ್ನು ಗಮನಿಸಿದ್ದಾರೆ. ಈ ಹಿನ್ನೆಲೆ ಶನಿವಾರ ನಸುಕಿನಲ್ಲಿ ರೈಲನ್ನು ಕ್ರಮೇಣ ನಿಧಾನಗೊಳಿಸಿದ ನಂತರ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಎಂಜಿನ್‌ ಟೈರ್‌ಗೆ ಡಿಕ್ಕಿ ಹೊಡೆದಿದ್ದರೂ, ಅದು ನಿಧಾನ ವೇಗದಲ್ಲಿತ್ತು ಮತ್ತು ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ಒಡಿಶಾ ರೈಲು ದುರಂತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ವಿಶ್ವದ ದೊಡ್ಡಣ್ಣ ಜೋ ಬೈಡೆನ್‌, ಕ್ಸಿ ಜಿನ್‌ಪಿಂಗ್‌

 ಸೂಪರ್‌ಫಾಸ್ಟ್ ರೈಲು ಚೆನ್ನೈ ಕಡೆಗೆ ಪ್ರಯಾಣಿಸುವಾಗ ಮಧ್ಯರಾತ್ರಿ 12:30 ರ ಸುಮಾರಿಗೆ ತಿರುಚ್ಚಿಗೆ ಆಗಮಿಸಿತು ಮತ್ತು ಲೋಕೋ ಪೈಲಟ್‌ ರಘುರಾಮನ್ ಹಾಗೂ ಸಹಾಯಕ ಲೋಕೋ ಪೈಲಟ್ ವಿನೋದ್ ರೈಲನ್ನು ಚಲಾಯಿಸುತ್ತಿದ್ದರು. 1:05 ರ ಸುಮಾರಿಗೆ ರೈಲು ವಾಲಾಡಿ ನಿಲ್ದಾಣವನ್ನು ದಾಟಿದ ನಂತರ, ಲೋಕೋ ಪೈಲಟ್ ಹಳಿಯಲ್ಲಿ ಕಪ್ಪು ವಸ್ತುವನ್ನು ಗಮನಿಸಿ ಬ್ರೇಕ್ ಹಾಕಿದರು. ಅದು ಎರಡು ದೊಡ್ಡ ಟೈರ್‌ಗಳನ್ನು ಒಂದರ ಮೇಲೊಂದು ಹಾಕಿರುವುದು ಅವರಿಗೆ ಅರಿವಾಯಿತು. ಎಂಜಿನ್ ಅದರೊಳಗೆ ನುಗ್ಗಿ ಸ್ವಲ್ಪ ದೂರದಲ್ಲಿ ನಿಂತಿತು. ಒಂದು ಟೈರ್ ಎಂಜಿನ್‌ಗೆ ಸಿಕ್ಕಿಹಾಕಿಕೊಂಡಿತು. ಅಪಘಾತದ ಪರಿಣಾಮವಾಗಿ ರೈಲಿನ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಲ್ಲದೆ, ತಿರುಚ್ಚಿ ಜಂಕ್ಷನ್‌ನಿಂದ ವೇಗವಾಗಿ ಬಂದ ಎಕ್ಸ್‌ಪ್ರೆಸ್ ರೈಲು ಟೈರ್ ಒಂದಕ್ಕೆ ಡಿಕ್ಕಿ ಹೊಡೆದು ಬ್ರೇಕ್ ಹಾಕಿ ಸ್ವಲ್ಪ ದೂರದಲ್ಲಿ ನಿಂತಿತು. ಪರಿಣಾಮ ರೈಲಿನ ಆರು ಬೋಗಿಗಳಲ್ಲಿ ಒಂದು ಮೆದುಗೊಳವೆ ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದೂ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Odisha Train Accident: ಸಾವಲ್ಲೂ ರಾಜಕೀಯ; ನಾರ್ಸಿಸಿಸ್ಟಿಕ್ ಪ್ರಚಾರ ಮಂತ್ರಿ ಎಂದು ಮೋದಿ ವಿರುದ್ಧ ಆರ್‌ಜೆಡಿ ವಾಗ್ದಾಳಿ

ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟೈರ್ ಹಾಕಿದ್ದ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಈ ಬಗ್ಗೆ ವಿಚಾರಣೆ ಆರಂಭಿಸಿದ್ದು, ಅವರು ಎರಡೂ ಟೈರ್‌ಗಳನ್ನು ವಶಪಡಿಸಿಕೊಂಡರು.  ಅವುಗಳಲ್ಲಿ ಒಂದು ಸ್ಥಳದಿಂದ ಸ್ವಲ್ಪ ದೂರದಲ್ಲಿ ಮತ್ತು ಹಾನಿಗೊಳಗಾದ ಸ್ಥಿತಿಯಲ್ಲಿ ಕಂಡುಬಂದಿದೆ. ಇನ್ನು, ಈ ಕಾರಣದಿಂದ ಸ್ಥಳದಲ್ಲಿಯೇ ಸುಮಾರು 25 ನಿಮಿಷಗಳ ಕಾಲ ರೈಲು ನಿಂತಿದ್ದು, ಸಮಸ್ಯೆ ಬಗೆಹರಿದ ಬಳಿಕ ಅಲ್ಲಿಂದ ತೆರಳಿದೆ.

ಇದನ್ನೂ ಓದಿ: ಕೈಕಾಲುಗಳಿಲ್ಲದ ದೇಹಗಳು, ರಕ್ತದ ಹೊಳೆ: ಪ್ರತ್ಯಕ್ಷದರ್ಶಿಗಳು ಹಂಚಿಕೊಂಡ ರೈಲು ಅಪಘಾತ ಸ್ಥಳದ ಭಯಾನಕ ಕಥೆ ಹೀಗಿದೆ..

Follow Us:
Download App:
  • android
  • ios