ಭೂ ಹಗರಣ ಕೇಸ್: ಶಿವಸೇನಾ ನಾಯಕ ಸಂಜಯ್ ರಾವುತ್ ವಶಕ್ಕೆ ಪಡೆದ ಇಡಿ ಅಧಿಕಾರಿಗಳು
ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ಮುಂಬೈ ನಿವಾಸದ ಮೇಲೆ ಇಡಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸಂಸದ, ನಾನು ಸತ್ತರೂ ಶಿವಸೇನೆ ಬಿಡುವುದಿಲ್ಲ ಎಂದಿದ್ದಾರೆ.
ಶಿವಸೇನಾ ಸಂಸದ ಸಂಜಯ್ ರಾವುತ್ರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಭೂ ಹಗರಣವೊಂದಕ್ಕೆ ಸಂಬಂಧಪಟ್ಟಂತೆ ವಶಕ್ಕೆ ಪಡೆಯಲಾಗಿದೆ ಎಂದು ಸುದ್ದಿಸಂಸ್ಥೆ ಎಎನ್ಐ ವಶಕ್ಕೆ ಪಡೆದಿದೆ. ಇಂದು ಬೆಳ್ಳಂಬೆಳಗ್ಗೆ ಸಂಜಯ್ ರಾವುತ್ ಅವರ ಮುಂಬೈ ನಿವಾಸ ಸೇರಿ ಹಲವು ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದ ಇಡಿ ಅಧಿಕಾರಿಗಳು ಸಂಸದರನ್ನು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರ ರಾಜಧಾನಿ ಮುಂಬೈನ ಪತ್ರ 'ಚಾಲ್' ಭೂ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಉದ್ಧವ್ ಠಾಕ್ರೆ ಪಾಳೆಯದಲ್ಲಿರುವ ಸಂಸದರ ನಿವಾಸ ಸೇರಿ ಹಲವು ಕಡೆ ರೇಡ್ ಮಾಡಿತ್ತು. ಹಲವು ದಾಖಲೆಗಳ ಪರಿಶೀಲನೆ, ಸಂಸದರ ವಿಚಾರಣೆ ಬಳಿಕ ಜಾರಿ ನಿರ್ದೇಶನಾಲಯ ಅವರನ್ನು ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.
ಮುಂಬೈನ 'ಚಾಲ್' ಮರು-ಅಭಿವೃದ್ಧಿಯಲ್ಲಿನ ಅಕ್ರಮಗಳು ಮತ್ತು ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ಪತ್ನಿ ಹಾಗೂ 'ಸಹವರ್ತಿ'ಗಳನ್ನು ಒಳಗೊಂಡಿರುವ ಸಂಬಂಧಿತ ವಹಿವಾಟುಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರು ಇಡಿ ಕಚೇರಿಗೆ ಜುಲೈ 1 ರಂದು ವಿಚಾರಣೆಗೆ ಹಾಜರಾಗಿದ್ದರು. ನಂತರ, ಎರಡು ಬಾರಿ ಇಡಿ ಸಮನ್ಸ್ ನೀಡಿದರೂ ಸಹ ವಿಚಾರಣೆಗೆ ಹಾಜರಾಗಿರಲಿಲ್ಲ.
ಶಿವಸೇನಾ ಸಂಸದ ಸಂಜಯ್ ರಾವುತ್ ನಿವಾಸದ ಮೇಲೆ ಇಡಿ ದಾಳಿ: ಪರಿಶೀಲನೆ
ಇನ್ನು, ಶಿವಸೇನಾ ಸಂಸದ ಸಂಜಯ್ ರಾವುತ್ ಅವರನ್ನು ವಶಕ್ಕೆ ಪಡೆಯುವಾಗ ಅವರ ನಿವಾಸದ ಬಳಿ ಪೊಲೀಸರ ಬಿಗಿ ಭದ್ರತೆಯನ್ನೇ ಹಾಕಲಾಗಿತ್ತು. ಆದರೂ, ಸಂಜಯ್ ರಾವುತ್ ವರ ಬೆಂಬಲಿಗರು, ಉದ್ಧವ್ ಠಾಕ್ರೆ ಬಣದಲ್ಲಿರುವ ಶಿವಸೇನಾ ಕಾರ್ಯಕರ್ತರು ಸಂಸದರನ್ನು ವಶಕ್ಕೆ ಪಡೆಯುವಾಗ ಅವರ ಜತೆಯಲ್ಲಿದ್ದರು.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಸಂಸದರ ನಿವಾಸವನ್ನು ರೇಡ್ ಮಾಡಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ಬೆಳಗ್ಗೆ ಮಾಹಿತಿ ನೀಡಿದ್ದರು. ಪತ್ರ 'ಚಾಲ್' ಭೂ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದ ಮೂರು ತಂಡಗಳು ಸಂಜಯ್ ರಾವುತ್ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಮನೆಯನ್ನು ಪರಿಶೀಲನೆ ನಡೆಸಿತ್ತು. ಸಂಸದರ ಮುಂಬೈ ನಿವಾಸ ಮಾತ್ರವಲ್ಲದೆ ಇತರೆ ಹಲವು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯ ನಡೆದಿತ್ತು.
ಭಾನುವಾರ ಬೆಳಗ್ಗೆ 7 ಗಂಟೆಗೆ ಇಡಿ ಅಧಿಕಾರಿಗಳು, ಸಿಐಎಸ್ಎಫ್ ಸಿಬ್ಬಂದಿಯೊಂದಿಗೆ ಸಂಜಯ್ ರಾವುತ್ ಅವರ ನಿವಾಸವನ್ನು ತಲುಪಿ ಶೋಧ ಕಾರ್ಯ ಆರಂಭಿಸಿದ್ದ್ದರು. ಈ ಆರೋಪಕ್ಕೆ ಸಂಬಂಧಪಟ್ಟಂತೆ ಇಡಿ ಸಮನ್ಸ್ ನೀಡಿದಾಗಲೇ, ತಾನು ಯಾವುದೇ ತಪ್ಪನ್ನು ಮಾಡಿಲ್ಲ, ರಾಜಕೀಯ ದ್ವೇಷದ ಕಾರಣ ತನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಉದ್ಧವ್ ಠಾಕ್ರೆ ಪಾಳಯದಲ್ಲಿರುವ ರಾಜ್ಯಸಭಾ ಸಂಸದ ಹೇಳಿದ್ದರು.
Maharashtra Political Crisis ನಡುವೆ ಶಿವಸೇನೆ ಸಂಜಯ್ ರಾವತ್ಗೆ ಇಡಿ ನೊಟೀಸ್
ಇನ್ನು, ತನ್ನ ನಿವಾಸ ಮೇಲೆ ಭಾನುವಾರ ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ರೇಡ್ ಮಾಡಿದ ಬೆನ್ನಲ್ಲೇ ಶಿವಸೇನೆ ಸಂಸದ ಸಂಜಯ್ ರಾವುತ್ ಸರಣಿ ಟ್ವೀಟ್ಗಳನ್ನು ಮಾಡಿದ್ದರು. ಯಾವುದೇ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ದಿವಂಗತ ಬಾಳಾಸಾಬೇಬ್ ಠಾಕ್ರೆ ಅವರ ಮೇಲೆ ಪ್ರಮಾಣ ಮಾಡುತ್ತೇನೆ. ನಾನು ಸಾಯುತ್ತೇನೆಯೇ ಹೊರತು ಶಿವಸೇನೆ ಬಿಡುವುದಿಲ್ಲ ಎಂದು ಸಹ ಸಂಜಯ್ ರಾವುತ್ ಟ್ವೀಟ್ನಲ್ಲಿ ಬರೆದುಕೊಂಡಿದ್ದು, ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿ ಕಾರಿದ್ದರು.