Asianet Suvarna News Asianet Suvarna News

ಕಾಂಗ್ರೆಸ್ ಬರ ಪರಿಹಾರ ಅನ್ಯಾಯ ಆರೋಪಕ್ಕೆ ಮೋದಿ ಉತ್ತರವೇನು? ವಿಶೇಷ ಸಂದರ್ಶನ!

ಕರ್ನಾಟಕದ ಬರಗಾಲಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ. ಮಲತಾಯಿ ಧೋರಣೆ ಮಾಡುತ್ತಿದೆ. ಈ ಮೂಲಕ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಅನ್ನೋ ಸಿದ್ದರಾಮಯ್ಯ ಸರ್ಕಾರದ ಆರೋಪಕ್ಕೆ ಪ್ರಧಾನಿ ಮೋದಿ ಏಷ್ಯಾನೆಟ್ ನ್ಯೂಸ್ ಜೊತೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಉತ್ತರಿಸಿದ್ದಾರೆ. ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಸಲ್ಲಿಸಿರುವ ಅರ್ಜಿ ಕುರಿತು ಉಲ್ಲೇಖಿಸಿದ್ದಾರೆ.

Drought not a political playground PM Modi reply on Karnataka Govt writ petition in Supreme Court ckm
Author
First Published Apr 20, 2024, 10:30 PM IST

ನವದೆಹಲಿ(ಏ.20) ಕರ್ನಾಟಕದ ಬರಗಾಲಕ್ಕೆ ಹಲವರು ಹೈರಾಣಾಗಿದ್ದಾರೆ. ಬರ ಪರಿಸ್ಥಿತಿ ಎದುರಿಸುವ ನಡುವೆ ರಾಜಕೀಯ ಗುದ್ದಾಟಗಳು ನಡೆದಿದೆ. ಒಂದಂಡೆ ರಾಜ್ಯ ಸರ್ಕಾರ, ಕೇಂದ್ರದಿಂದ ಬರಹಾರ ಬಂದಿಲ್ಲ, ಅನ್ಯಾಯ ಮಾಡಿದೆ ಅನ್ನೋ ಆರೋಪ ಮಾಡಿದೆ. ಇತ್ತ ಕೇಂದ್ರ ಬಿಜೆಪಿ ನಾಯಕರು ಕೆಲ ಅಂಕಿ ಅಂಶಗಳನ್ನು ಮುಂದಿಟ್ಟಿದ್ದಾರೆ. ಆದರೆ ಈ ಆರೋಪ -ಪ್ರತ್ಯಾರೋಪದ ನಡುವೆ ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿದೆ. ಅನ್ಯಾಯದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟಕ್ಕೆ ಮುಂದಾಗಿದೆ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಉತ್ತರಿಸಿದ್ದಾರೆ. ಬರ ಎಲ್ಲೇ ಇರಲಿ ಇದು ರಾಜಕೀಯ ಮಾಡುವ ವಿಷಯವಲ್ಲ. ಬರಗಾಲವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.  

ಇದು ನಮ್ಮ ಸಮಯದಲ್ಲಿ ಅಲ್ಲ. ತುಂಬಾ ಹಿಂದೆಯೇ ಒಂದು ವ್ಯವಸ್ಥೆಯಿಂದ ನಿರ್ಧಾರಿತವಾಗಿದೆ. ಯಾವುದೇ ವಿಪತ್ತನ್ನು ಕೇವಲವಾಗಿ ತೆಗೆದುಕೊಳ್ಳುವಂತಿಲ್ಲ. ಯಾವುದೇ ಇಲಾಖೆಯಲ್ಲಿರಲಿ, ಬರಗಾಲವಾಗಲಿ ಸಮಸ್ಯೆಯನ್ನ ಸಂವೇದನಶೀಲವಾಗಿ, ಗಂಭೀರವಾಗಿ ಪರಿಗಣಿಸಬೇಕು. ಅಲ್ಲಿನ ಸರ್ಕಾರ ನೋಡಿಕೊಳ್ಳುತ್ತೆ ಅಂತ ಇರಲೇಬಾರದು. ಬರಗಾಲವಾಗಲೀ, ಅತಿವೃಷ್ಟಿಯಾಗಲಿ ಸಮಸ್ಯೆಯಾಗೋದು ಅಲ್ಲಿನ ಜನಸಾಮಾನ್ಯರಿಗೆ. ನಮ್ಮೆಲ್ಲರ ಜವಾಬ್ದಾರಿ ನಾಗರೀಕರನ್ನ ಕಾಪಾಡೋದು. ಇದು ರಾಜಕೀಯ ಮಾಡೋ ವಿಷಯವಲ್ಲ. ರಾಜಕೀಯ ಮಾಡಬಾರದು. ಅತ್ಯಂತ ಸಂವೇದನಶೀಲ ವಿಚಾರವಿದು  ಎಂದು ಮೋದಿ ಹೇಳಿದ್ದಾರೆ.


 
ನಿಯಮ ಏನಿದೆ..? SDRF  900 ಕೋಟಿ ಹಣ ಈ ರೀತಿಯ ಸಂದರ್ಭಕ್ಕಾಗಿ ಸಮಯಕ್ಕೆ ಸರಿಯಾಗಿ ಈಗಾಗಲೇ ನೀಡಲಾಗಿದೆ. ಇದು ಬಾಕಿಯಲ್ಲ. ಒಂದು ಅಂತರ್ ಇಲಾಖಾ ತಂಡ ಇಂತಹ ಸಮಯ ಬಂದಾಗ, ಬರಗಾಲವಾಗಲಿ, ಅತಿವೃಷ್ಟಿಯಾಗಲಿ..  ಅಂತರ್ ಇಲಾಖಾ ತಂಡ ಪ್ರತಿ ಸರ್ಕಾರವಿದ್ದಾಗ ನಡೆದುಕೊಂಡು ಬಂದಿರೋದು. ನಾನು ಬಂದಮೇಲೆ ಮಾಡಿದ್ದಲ್ಲ. ಅವರು ಬಂದು ಸರ್ವೇ ಮಾಡ್ತಾರೆ. ಅಲ್ಲಿನ ಸರ್ಕಾರ ಮನವಿ ಕೊಡುತ್ತೆ. ಒಂದು ಕಮಿಟಿ ನಿರ್ಧಾರ ಮಾಡುತ್ತೆ. ಅದರಲ್ಲಿ ರಾಜಕಾರಣಿಗಳು ಇರೋದಿಲ್ಲ, ತಜ್ಞರು ಇರ್ತಾರೆ. ವಿಶೇಷ ಪರಿಸ್ಥಿತಿಯಲ್ಲಿ 900 ಕೋಟಿ ಹಣಕ್ಕಿಂತ ಹೆಚ್ಚಿನದ್ದು ಅವಶ್ಯಕತೆ ಇದ್ದರೆ ಅವರು ಕೊಡ್ತಾರೆ ಎಂದು ಮೋದಿ ಹೇಳಿದ್ದಾರೆ. 

ಭಾರತ ಸರ್ಕಾರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಿತು. ಇಂತಹ ಸಂಕಷ್ಟದ ಸಮಯದಲ್ಲಿ ಹೆಚ್ಚಿನ ಪರಿಹಾರ ಕೊಡಬೇಕು. ನಮಗೆ ಅನುಮತಿ ಕೊಡಿ ಅಂತ. ಆದ್ರೆ ಈಗ ರಾಜಕಾರಣಕ್ಕಾಗಿ ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕೋದು ಒಂದು ಫ್ಯಾಷನ್ ಆಗಿದೆ. ಕೇರಳದವರು ಹೋಗಿದ್ರು. ಅಲ್ಲಿ ಅವರಿಗೆ ಏನಾಯಿತು, ಕೋರ್ಟ್ ಚಾಟಿ ಬೀಸಿತು. ಸುಪ್ರೀಂಕೋರ್ಟ್ನಲ್ಲಿ ಅವರಿಗೆ ಎಷ್ಟೆಲ್ಲಾ ಅವಮಾನ ಆಯ್ತು. ಸುಪ್ರೀಂ ಕೋರ್ಟ್ ಅವರಿಗೆ ಏನೆಲ್ಲಾ ಹೇಳ್ತು. ರಾಜಕೀಯ ಲಾಭ ಪಡೆಯೋಕೆ ಏನೆಲ್ಲಾ ಮಾಡಿದ್ರು ಜನರಿಗೆ ಗೊತ್ತಾಗಬೇಕು. ಮಾಧ್ಯಮಗಳು ಈ ಷಡ್ಯಂತ್ರವನ್ನ ಸರಳವಾಗಿ ಜನರ ಮುಂದಿಡಬೇಕು. ಇದರಿಂದ ದೇಶಕ್ಕೆ ನಷ್ಟವಾಗಬಾರದು. ಭಾರತ ಸರ್ಕಾರಕ್ಕೆ ಒಳ್ಳೆಯದು ಮಾಡೋದಲ್ಲ.. ರಾಜ್ಯ ಸರ್ಕಾರಕ್ಕೆ ಒಳ್ಳೆಯದು ಮಾಡೋದಲ್ಲ .. ಜನರಿಗೆ ಒಳ್ಳೆಯದು ಮಾಡಬೇಕು.. ಜನರ ಮುಂದೆ ಸತ್ಯವನ್ನ ಇಡಬೇಕು ಎಂದು ಮೋದಿ ಹೇಳಿದ್ದಾರೆ. 

ಇದೇ ವೇಳೆ ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಪಾಲರೇ ಹೆಚ್ಚು ಅಧಿಕಾರ ಚಲಾಯಿಸುತ್ತಾರೆ ಅನ್ನೋ ಆರೋಪಕ್ಕೆ ಮೋದಿ ಉತ್ತರಿಸಿದ್ದಾರೆ.  ರಾಜ್ಯಪಾಲರ ವಿಚಾರದಲ್ಲಿ ನಾನು ನಿಮಗೆ ಮೊದಲು ಒಂದು ಮಾತು ಹೇಳಬೇಕು. ಅವರಿಗೆ ಕೇಳಿ 5-6 ದಶಕಗಳ ಕಾಲ ಆಡಳಿತ ಮಾಡಿದ್ರಲ್ಲ. ಜಗತ್ತಿನ ಶತ್ರು ರಾಷ್ಟ್ರದಲ್ಲೂ ನಮ್ಮದು ರಾಯಭಾರ ಇರುತ್ತೆ ಅಲ್ವಾ. ಆ ರಾಯಭಾರಿಗಳ ಸಂಪೂರ್ಣ ಜವಾಬ್ದಾರಿ ಆ ರಾಷ್ಟ್ರದ್ದಾಗಿರುತ್ತೆ. ಅವರ ಸುರಕ್ಷತೆ ಹಾಗೂ ಸಂಪೂರ್ಣ ಜವಾಬ್ದಾರಿ. ಅವರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತೆ. ಶತ್ರುರಾಷ್ಟ್ರದಲ್ಲೂ ಕೂಡ ನಮ್ಮ ರಾಯಭಾರಿಗಳಿಗೆ, ನಮ್ಮ ತಂಡಕ್ಕೆ ಸುರಕ್ಷತೆ ಹಾಗೂ ಗೌರವ ಕೊಡ್ತಾರೆ ಎಂದಿದ್ದಾರೆ. 

ಅಧಿಕಾರ ಚಲಾಯಿಸಿಲ್ಲ, ಜನರ ಸೇವೆ ಮಾಡಿದ್ದೇವೆ, 2024ರ ಅಭೂತಪೂರ್ವ ಗೆಲುವಿನ ಕುರಿತು ಮೋದಿ ಮಾತು!

ಆದ್ರೆ ನಮ್ಮದೇ ದೇಶದಲ್ಲಿ ನಮ್ಮದೇ ರಾಜ್ಯದಲ್ಲಿ ಸಂವಿಧಾನತ್ಮಾಕವಾಗಿ ರಚನೆಯಾಗಿರೋ ರಾಜ್ಯಪಾಲರ ಹುದ್ದೆಗೆ ಗೌರವ ಹಾಗೂ ರಕ್ಷಣೆ ನೀಡೋದು ಆಯಾ ರಾಜ್ಯಗಳ ಕರ್ತವ್ಯ ಅಲ್ಲವೇ..? ಇದು ಹೇಗೆ ನಡೆಯುತ್ತೆ..? ನೀವೇ ಕಲ್ಪನೆ ಮಾಡಿಕೊಳ್ಳಿ, ಕೇರಳದ ರಾಜ್ಯಪಾಲರು ಏರ್ಪೋರ್ಟ್ಗೆ ಹೋಗ್ತಿದ್ದಾಗ ಎಡ ಪಂಥೀಯರು ಸೇರಿ ಗಲಾಟೆ ಮಾಡಿದ್ರೆ, ಆ ರಾಜ್ಯ ಸರ್ಕಾರಕ್ಕೆ ಶೋಭೆ ಬರುತ್ತಾ? ಎಂದು ಮೋದಿ ಪ್ರಶ್ನಿಸಿದ್ದಾರೆ.

ನಾನು ಹಲವು ಬಾರಿ ಅಲ್ಲಿಗೆ ಹೋದಾಗ, ನಮ್ಮ ರಾಜ್ಯಪಾಲರು ತಮ್ಮ ಸಮಸ್ಯೆ ಬಗ್ಗೆ ಹೆಚ್ಚು ಹೇಳಲಿಲ್ಲ. ಆರಿಫ್ ಸಾಬ್ ಅವರ ಬಜೆಟ್ ಫಂಡ್ ಕೂಡ ಸಿಕ್ಕಿಲ್ಲ. ಕೇರಳದಲ್ಲಿ ರಾಜ್ಯಪಾಲರಿಗೆ ಊಟವನ್ನು ಕೂಡ ನಿಲ್ಲಿಸಿದ್ದಾರೆ. ಅವರ ಮೇಲಿನ ರಾಜಕೀಯ ಸಿಟ್ಟಿನ ಕಾರಣಕ್ಕೆ ಅವರ ವಿದ್ಯುತ್ನ ಬಂದ್ ಮಾಡಿದ್ರೆ ಏನಾಗುತ್ತೆ..? ಮಹಾರಾಷ್ಟ್ರದಲ್ಲಿ ಒಮ್ಮೆ ರಾಜ್ಯಪಾಲರಿಗೆ ವಿಮಾನ, ಹೆಲಿಕಾಪ್ಟರ್ ಯಾವುದು ಕೊಡಲಿಲ್ಲ. ಮೊದಲೇ ನಿರ್ಧರಿತ ಕಾರ್ಯಕ್ರಮಗಳನ್ನ ಕೊನೇ ಹಂತದಲ್ಲಿ ರದ್ದು ಮಾಡ್ತಿದ್ರು. ತಮಿಳುನಾಡಿನಲ್ಲಿ ರಾಜ್ಯಪಾಲರ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ಹಾಕಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಶೋಭೆ ತರುತ್ತಾ? ಯಾರೇ ಆಗಲಿ ಸಂವಿಧಾನದ ನಿಯಮದಂತೆ ನಡೆದುಕೊಳ್ಳಬೇಕಲ್ವಾ? ನಾನು ಗುಜರಾತ್ನಲ್ಲಿದ್ದಾಗ ನನಗೆ ಎಲ್ಲಾ ಕಾಂಗ್ರೆಸ್ನ ರಾಜ್ಯಪಾಲರೇ ಇದ್ದರು. ನನಗೆ ಯಾವುದೇ ಸಮಸ್ಯೆ ಆಗಲಿಲ್ಲ. ಅವರು ನನಗೆ ಗೌರವ ಕೊಡ್ತಿದ್ರು. ನಾನು ಅವರಿಗೆ ಗೌರವ ಕೊಡ್ತಿದ್ದೆ. ಇದು ವರ್ಷಗಳ ಕಾಲ ನಡೆದುಬಂತು. ಏನಾದ್ರು ತಪ್ಪು ನಡೆದ್ರೆ ಸಂವಿಧಾನಿಕವಾಗಿ ಅವರಿಗೆ ಅಧಿಕಾರವಿದೆ ಕೇಳಲಿ ಎಂದಿದ್ದಾರೆ.


 

Follow Us:
Download App:
  • android
  • ios