ತಮಿಳುನಾಡಿನಲ್ಲಿ ಕೇಂದ್ರದ ಕ್ಷೇತ್ರ ಮರುವಿಂಗಡಣೆ ವಿರೋಧಿಸಿ ಮಾತನಾಡಿದ ಡಿಕೆಶಿ, ಅಣ್ಣಾಮಲೈ ಹೇಳಿಕೆಗೆ ಮಹತ್ವ ನೀಡಬೇಕಿಲ್ಲ ಎಂದಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಹೇಳಿಕೆ ಮುಖ್ಯವೆಂದು ತಿಳಿಸಿದ್ದಾರೆ.

ಪಿಟಿಐ ಚೆನ್ನೈ : 'ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಏನು ಹೇಳುತ್ತಿದ್ದಾರೆ ಎಂಬುದು ಮುಖ್ಯವೇ ಹೊರತು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಏನು ಹೇಳಿದ್ದಾರೆಂಬುದು ಅಲ್ಲ. ಪಾಪ, ಅಣ್ಣಾಮಲೈ ಅವರಿಗೆ ಏನೂ ಗೊತ್ತಿಲ್ಲ' ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾ‌ರ್ ವ್ಯಂಗ್ಯವಾಡಿದ್ದಾರೆ.

ಕೇಂದ್ರದ ಜನಸಂಖ್ಯಾ ಆಧರಿತ ಕ್ಷೇತ್ರ ಮರುವಿಂಗಡಣೆ ವಿರೋಧಿಸಿ ತಮಿಳುನಾಡಿನಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಭಾನುವಾರ ಬೆಂಗಳೂರಿಗೆ ಹೊರಡುವ ಮುನ್ನ ಸುದ್ದಿಗಾರರ ಜತೆಗೆ ಮಾತನಾಡಿದ ಡಿಕೆಶಿ ಅವರು, 'ದಕ್ಷಿಣ ರಾಜ್ಯಗಳ ಮೇಲೆ ಕ್ಷೇತ್ರ ಮರುವಿಂಗಡಣೆ ಪರಿಣಾಮ ಬೀರುವುದಿಲ್ಲ' ಎಂಬ ಹೇಳಿಕೆಯನ್ನು ಖಂಡಿಸಿದರು ಹಾಗೂ 'ಅಣ್ಣಾಮಲೈ ಅವರು ಪಕ್ಷಕ್ಕೆ ನಿಷ್ಠರಾಗಿದ್ದಾರೆಯೇ ಹೊರತು ತಮಿಳುನಾಡಿಗಲ್ಲ' ಎಂದು ಕುಟುಕಿದರು. 

ಸಿಎಂ ಬದಲಾವಣೆ ಚರ್ಚೆ ಮಧ್ಯೆಯೇ ಡಿಕೆಶಿ ಪುತ್ರಿ ಐಶ್ವರ್ಯ ಹೇಳಿದ್ದೇನು? ಜೈಲಿನಿಂದ ಬಂದಾಗ ಮಾತು ಬಿಟ್ಟಿದ್ದೇಕೆ?

'ದಕ್ಷಿಣ ರಾಜ್ಯಗಳ ಮೇಲೆ ಕ್ಷೇತ್ರ ಮರು ವಿಂಗಡಣೆ ಪರಿಣಾಮ ಬೀರುವುದಿಲ್ಲ ಎಂಬ ಅಣ್ಣಾಮಲೈ ಹೇಳಿಕೆಗೆ ಮಹತ್ವ ನೀಡಬೇಕಿಲ್ಲ. ನಮಗೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಶಾ ಏನು ಸಂದೇಶ ನೀಡಲು ಹೊರಟಿದ್ದಾರೆಂಬುದು ಮುಖ್ಯ. ಪಾಪ ಅಣ್ಣಾಮಲೈ ಅವರಿಗೆ ಏನೂ ಗೊತ್ತಿಲ್ಲ. ಅವರು ಕೇವಲ ತಮ್ಮ ಕೆಲಸ ಮಾಡುತ್ತಿದ್ದಾರೆ. ಅವರು ಪಕ್ಷಕ್ಕೆ ಹೆಚ್ಚಿನ ನಿಷ್ಠೆ ತೋರಲು ಬಯಸುತ್ತಿದ್ದಾರೆಯೇ ಹೊರತು ತಮ್ಮ ರಾಜ್ಯಕ್ಕಲ್ಲ' ಎಂದರು. 

ತಮಿಳುನಾಡು ಮುಖ್ಯ ಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದಂತೆ ರಾಜ್ಯದ 50 ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡಿದ್ದಾರೆ. ಅವರು ಈ ಕುರಿತು ಕೈಗೊಳ್ಳುತ್ತಿರುವ ಕಾರ್ಯವನ್ನು ಎಲ್ಲಾ ರಾಜಕೀಯ ಪಕ್ಷಗಳು ಮೆಚ್ಚಿವೆ ಎಂದರು. ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದರು. ಅದನ್ನೇ ಭಾನುವಾರ ಅಣ್ಣಾಮಲೈ ಪುನರುಚ್ಚರಿಸಿದ್ದರು.

ಮನಗೆದ್ದ ಸೊಸೆ ಐಶ್ವರ್ಯಗೆ ಅತ್ತೆಯ ಉಡುಗೊರೆ, ಡಿಕೆಶಿ ಪುತ್ರಿ ಹೆಗಲಿಗೆ ಹೊಸ ಜವಾಬ್ದಾರಿ!