ಧಾರವಾಡದಲ್ಲಿ ದಿಂಗಾಲೇಶ್ವರ ಶ್ರೀ ಸ್ಪರ್ಧೆ - ಕಾಂಗ್ರೆಸ್ ಮತ ಬುಟ್ಟಿಗೆ ಕೈ ಹಾಕಿದ್ರಾ ಸ್ವಾಮೀಜಿ?
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಕ್ಷೇತ್ರಗಳ ಪೈಕಿ ಧಾರವಾಡ ಕ್ಷೇತ್ರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ದಿಂಗಾಲೇಶ್ವರ ಶ್ರೀ ಅಖಾಡಕ್ಕೆ ಧುಮುಕಿದ್ದಾರೆ. ಒಂದೆಡೆ ಶ್ರೀಗಳ ಸ್ಪರ್ಧೆ ಬಿಜೆಪಿಯ ಲಿಂಗಾಯಿತ ಮತ ಬ್ಯಾಂಕ್ ಒಡೆಯಲಿದೆ ಎಂದರೆ, ಮತ್ತೊಂದಡೆ ಕಾಂಗ್ರೆಸ್ನ ತಳಮಟ್ಟದ ಮತಗಳನ್ನು ಸೆಳೆಯಲಿದೆ ಅನ್ನೋ ಚರ್ಚೆಗಳು ಜೋರಾಗಿದೆ. ಹಾಗಾದರೆ ಶ್ರೀಗಳ ಸ್ಪರ್ಧೆಯಿಂದ ಯಾರಿಗೆ ಲಾಭ?
ಧಾರವಾಡ ಲೋಕಸಭಾ ಕ್ಷೇತ್ರದಿಂದ ಈ ಬಾರಿ ದಿಂಗಾಲೇಶ್ವರ ಶ್ರೀ ಸ್ಪರ್ಧೆಗೆ ಮುಂದಾಗಿದ್ದು, ಇದರಿಂದ ಯಾರಿಗೆ ಲಾಭ..? ಯಾರಿಗೆ ನಷ್ಟ..? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.. ಸ್ವಾಮೀಜಿ ಸ್ಪರ್ಧೆಯಿಂದ ಲಿಂಗಾಯತ ವೋಟ್ ಬ್ಯಾಂಕ್ ಛಿದ್ರವಾಗುತ್ತೆ ಎನ್ನಲಾಗಿದ್ದು, ಇದರಿಂದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ವಿರುದ್ಧ ಲಿಂಗಾಯತ ಅಸ್ತ್ರ ವನ್ನ ಸ್ವಾಮೀಜಿ ಪ್ರಯೋಗಿಸ್ತಿದ್ದಾರೆ ಎನ್ನಲಾಗಿದೆ.. ಆದ್ರೆ ಶ್ರೀಗಳ ಸ್ಪರ್ಧೆಯನ್ನ ವಿಶ್ಲೇಷಿಸುತ್ತಾ ಹೋದ್ರೆ ಅಲ್ಲಿ ಬಯಲಾಗೋದು ಅಚ್ಚರಿಯ ವಿಷಯ.
ಈ ಬಾರಿ ದಿಂಗಾಲೇಶ್ವರ ಶ್ರೀ ಸ್ಪರ್ಧೆಯಿಂದ ಮತವಿಭಜನೆ ಪಕ್ಕ ಎನ್ನಲಾಗ್ತಿದ್ದು, ಶ್ರೀಗಳ ಸ್ಪರ್ಧೆಯನ್ನ ಪ್ರಹ್ಲಾದ್ ಜೋಶಿ ಪಾಸಿಟಿವ್ ಆಗಿ ನೋಡ್ತಿದ್ದಾರೆ. ಹೀಗಾಗಿ ದಿಂಗಾಲೇಶ್ವರ ಶ್ರೀ ಸ್ಪರ್ಧೆಯನ್ನ ಜೋಶಿ ಗಂಭೀರವಾಗಿ ಪರಿಗಣಿಸಿಲ್ಲ ಎನ್ನಲಾಗ್ತಿದೆ. ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆಯಿಂದ ಕಾಂಗ್ರೆಸ್ನ ವೋಟ್ ಬ್ಯಾಂಕ್ ಹರಿದು ಹಂಚಿಹೋಗಲಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.. ಕಾಂಗ್ರೆಸ್ನ ತಳಸಮುದಾಯದ ಮತಗಳು ಈ ಬಾರಿ ಸ್ವಾಮೀಜಿ ಕಡೆ ವಾಲುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಯಾಕೆಂದರೆ ಶಿರಹಟ್ಟಿಯ ಫಕೀರೇಶ್ವರ ಮಠಕ್ಕೆ ಅತಿ ಹೆಚ್ಚು ಭಕ್ತರಾಗಿರೋದು ತಳಸಮುದಾಯದವರು.. ಅವರ ಮತಗಳನ್ನೇ ಸ್ವಾಮೀಜಿ ಸೆಳೆಯುತ್ತಾರೆ ಎನ್ನಲಾಗಿದೆ.
ತಳಸಮುದಾಯದ ಜೊತೆಗೆ ನದಾಫ್ ಸಮುದಾಯ(ಪಿಂಜಾರರು) ಮತಗಳ ಸೆಳೆಯೋ ಸಾಧ್ಯತೆ ಇದ್ದು, ಮುಸ್ಲಿಮರಾದ್ರು ನದಾಫ್ ಸಮುದಾಯ ಫಕೀರೇಶ್ವರ ಮಠಕ್ಕೆ ಸೌಹಾರ್ದತೆಯ ಪ್ರತೀಕವಾಗಿ ಹೆಚ್ಚಾಗಿ ನಡೆದುಕೊಳ್ತಾರೆ. ಜೊತೆಗೆ ಜಂಗಮ ಲಿಂಗಾಯತ ಮತಗಳು ಸಹ ದಿಂಗಾಲೇಶ್ವರ ಶ್ರೀಗಳ ಪಾಲಾಗಬಹುದು ಎನ್ನಲಾಗಿದೆ. ಈ ಎರಡು ಸಮುದಾಯ ಕಾಂಗ್ರೆಸ್ನ ಖಟ್ಟರ್ ವೋಟ್ ಬ್ಯಾಂಕ್ ಆಗಿದೆ.
ಇನ್ನೂ ದಿಂಗಾಲೇಶ್ವರ ಶ್ರೀಗಳಿಗೆ ಸವಾಲು ಇರೋದೇ ಧಾರವಾಡ ಜಿಲ್ಲೆಯ ನಗರ ಪ್ರದೇಶದಲ್ಲಿ.. ಇಲ್ಲಿ ವಿದ್ಯಾವಂತ ಮತದಾರರೇ ಹೆಚ್ಚಾಗಿದ್ದು, ಮೋದಿ ಅಲೆಯ ಮಧ್ಯೆ ಹೆಚ್ಚು ಮತಗಳನ್ನ ಸ್ವಾಮೀಜಿ ಪಡೆಯೋದು ಸಾಧ್ಯವಿಲ್ಲ ಎನ್ನಲಾಗ್ತಿದೆ. ಇನ್ನೂ ಶ್ರೀಗಳ ಪ್ರವಚನಕ್ಕೆ ಆಗಮಿಸೋ ಜನರೆಲ್ಲಾ ಸಹ ಸ್ವಾಮೀಜಿ ಪರ ಮತಚಲಾಯಿಸೋದು ಅನುಮಾನ ಎಂದೇಳಲಾಗ್ತಿದೆ.
ಈ ಮಧ್ಯೆ ಕಾಂಗ್ರೆಸ್ನಿಂದ ಸ್ವಾಮೀಜಿಗೆ ಟಿಕೆಟ್ ಕೊಡಬೇಕೆಂದು ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಒತ್ತಾಯ ಮಾಡಿದ್ದಾರೆ. ಶ್ರೀಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ರೆ ಧಾರವಾಡ ಮಾತ್ರವಲ್ಲ ರಾಜ್ಯದ ವಿವಿಧ ಭಾಗಗಳಲ್ಲಿ ಲಾಭವಾಗಲಿದೆ ಎನ್ನುತ್ತಿದ್ದಾರೆ. ಇನ್ನೂ ಈ ಬಗ್ಗೆ ಮಾತಾಡಿರೋ ಡಿಕೆ ಶಿವಕುಮಾರ್, ನಾವು ಟಿಕೆಟ್ ಘೋಷಣೆ ಮಾಡಿದ್ದು, ಬದಲಾಯಿಸೋ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.. ಆದರೂ ಸಹ ಒಮ್ಮೆ ಸಿಎಂ ಜೊತೆ ಚರ್ಚೆ ಮಾಡೋದಾಗಿ ತಿಳಿಸಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಫಿಕ್ಸಿಂಗ್! ದಿಂಗಾಲೇಶ್ವರ ಶ್ರೀ ಹೇಳಿದ್ದೇನು?
ಸದ್ಯ ಧಾರವಾಡ ಲೋಕಸಭಾ ಕ್ಷೇತ್ರದ ಈಗಿನ ಬಲಾಬಲ ನೋಡೋದಾದ್ರೆ, 8 ವಿಧಾನಸಭಾ ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ರೆ, 4 ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕಾಂಗ್ರೆಸ್ನಿಂದ ವಿನೋದ್ ಅಸೂಟಿ ಅಭ್ಯರ್ಥಿಯಾಗಿದ್ರೆ, ಬಿಜೆಪಿಯಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪರ್ಧೆ ಮಾಡ್ತಿದ್ದು, ಸತತ 5ನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 2014ರಲ್ಲಿ 1 ಲಕ್ಷದ 11 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದ ಪ್ರಹ್ಲಾದ್ ಜೋಶಿ, ಕಳೆದ ಸಲ 2019ರಲ್ಲಿ 2 ಲಕ್ಷದ 5 ಸಾವಿರ ಮತಗಳ ಅಂತರದಲ್ಲಿ ವಿನಯ್ ಕುಲಕರ್ಣಿ ವಿರುದ್ಧ ಗೆದ್ದು ಬೀಗಿದ್ರು.
ಶಿವರಾಜ್, ಬುಲೆಟಿನ್ ಪ್ರೊಡ್ಯೂಸರ್