ಪ್ರಧಾನಿ ಮೋದಿಯವರ ಹಳೆಯ ಫೋಟೋವೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಆರ್‌ಎಸ್‌ಎಸ್ ಸಂಘಟನೆಯ ಶಕ್ತಿಯನ್ನು ಶ್ಲಾಘಿಸಿ ಅಚ್ಚರಿ ಮೂಡಿಸಿದ್ದಾರೆ. ಈ ಪೋಸ್ಟ್ ವಿವಾದವಾಗುತ್ತಿದ್ದಂತೆ, ತಾವು ಮೋದಿಯವರ ವಿರೋಧಿಯೇ ಆದರೆ ಸಂಘಟನೆಯ ಬಲದ ಬಗ್ಗೆ ಮಾತನಾಡಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ. 

ನವದೆಹಲಿ(ಡಿ.27): ಸಂಘ ಪರಿವಾರ ಹಾಗೂ ಪ್ರಧಾನಿ ಮೋದಿಯವರ ಕಟ್ಟಾ ಟೀಕೆಕಾರ ಎಂದೇ ಗುರುತಿಸಲ್ಪಡುವ ದಿಗ್ವಿಜಯ್ ಸಿಂಗ್ ಅವರು, ಬಿಜೆಪಿ ಸಂಘಟನೆಯ ಕಾರ್ಯವೈಖರಿಯನ್ನು ಶ್ಲಾಘಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 1990ರ ದಶಕದ ಪ್ರಧಾನಿ ಮೋದಿಯವರ ಹಳೆಯ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಅವರು ಈ ಸಂಚಲನ ಸೃಷ್ಟಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಧಾನಿ ಮೋದಿಯ ಹಳೆಯ ಫೋಟೋ ಹಂಚಿಕೊಂಡಿದ್ದೇಕೆ?

ಶನಿವಾರ ಬೆಳಿಗ್ಗೆ ದಿಗ್ವಿಜಯ್ ಸಿಂಗ್ ಅವರು ಸಾಮಾಜಿಕ ಜಾಲತಾಣ 'X' ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಪ್ಪು-ಬಿಳುಪು ಫೋಟೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಮೋದಿ ಅವರು ಪಕ್ಷದ ಹಿರಿಯ ನಾಯಕರ ಪಾದದ ಬಳಿ ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದು. ಈ ಫೋಟೋಗೆ 'ಇದು ಸಂಘಟನೆಯ ಶಕ್ತಿ. ಆರ್‌ಎಸ್‌ಎಸ್‌ನ ಒಬ್ಬ ಸಾಮಾನ್ಯ ಸ್ವಯಂಸೇವಕ ನಾಯಕರ ಪಾದದ ಬಳಿ ಕುಳಿತು ಹೇಗೆ ರಾಜ್ಯದ ಸಿಎಂ ಮತ್ತು ದೇಶದ ಪ್ರಧಾನಿಯಾದರು ಎಂಬುದಕ್ಕೆ ಇದು ಸಾಕ್ಷಿ' ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಬಿಜೆಪಿಯನ್ನು ಹೊಗಳುವಂತಿದೆ ಎಂದು ವ್ಯಾಖ್ಯಾನಿಸಲಾಯಿತು.

ನಾನು ಆರ್‌ಎಸ್‌ಎಸ್ ಬೆಂಬಲಿಗನಲ್ಲ: ದಿಗ್ವಿಜಯ್ ಸಿಂಗ್ ಸ್ಪಷ್ಟನೆ

ತಮ್ಮ ಪೋಸ್ಟ್ ಪಕ್ಷದ ಒಳಗೂ ಮತ್ತು ಹೊರಗೂ ವಿವಾದ ಸೃಷ್ಟಿಸುತ್ತಿದ್ದಂತೆ ದಿಗ್ವಿಜಯ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. 'ನಾನು ಆರ್‌ಎಸ್‌ಎಸ್ ಅನ್ನು ಹೊಗಳಿಲ್ಲ, ಕೇವಲ ಸಂಘಟನೆಯ ಬಲದ ಬಗ್ಗೆ ಮಾತನಾಡಿದ್ದೇನೆ. ನಾನು ಆರ್‌ಎಸ್‌ಎಸ್, ಪ್ರಧಾನಿ ಮೋದಿ ಮತ್ತು ಅವರ ನೀತಿಗಳ ಕಟ್ಟಾ ವಿರೋಧಿಯಾಗಿದ್ದೇನೆ ಮತ್ತು ಮುಂದೆಯೂ ಹಾಗೆಯೇ ಇರುತ್ತೇನೆ. ಸಂಘಟನೆಯನ್ನು ಬಲಪಡಿಸುವುದು ಅಥವಾ ಅದರ ಬಗ್ಗೆ ಮಾತನಾಡುವುದು ತಪ್ಪೇ? ಎಂದು ಅವರು ಮರುಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕರ ಮೌನ; ರಾಹುಲ್ ಗಾಂಧಿಗೆ ಪತ್ರ!

ದಿಗ್ವಿಜಯ್ ಸಿಂಗ್ ಅವರ ಈ ನಡೆಯಿಂದ ಕಾಂಗ್ರೆಸ್‌ನ ಇತರ ಹಿರಿಯ ನಾಯಕರು ಇಕ್ಕಟ್ಟಿಗೆ ಸಿಲುಕಿದಂತೆ ಕಂಡುಬಂದಿತು. ಹರೀಶ್ ರಾವತ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರಂತಹ ನಾಯಕರು ಈ ಕುರಿತ ಮಾಧ್ಯಮಗಳ ಪ್ರಶ್ನೆಗಳಿಂದ ನುಣುಚಿಕೊಂಡರೆ, ಕುಮಾರಿ ಸೆಲ್ಜಾ ಅವರು 'ಯಾರೂ ಯಾರನ್ನೂ ಹೊಗಳಿಲ್ಲ' ಎಂದು ಸಮರ್ಥಿಸಿಕೊಂಡರು. ಇದೇ ವೇಳೆ, ಸಿಂಗ್ ಅವರು ರಾಹುಲ್ ಗಾಂಧಿಯವರಿಗೆ ಪತ್ರ ಬರೆದು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲೂ ಸುಧಾರಣೆಗಳನ್ನು ತರಬೇಕೆಂದು ಒತ್ತಾಯಿಸಿರುವುದು ಕುತೂಹಲ ಮೂಡಿಸಿದೆ.

ಚುನಾವಣಾ ಸುಧಾರಣೆ ಮತ್ತು ರಾಜಕೀಯ ತಂತ್ರಗಾರಿಕೆ

ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಸಂಘಟನೆಯನ್ನು ಬಲಪಡಿಸುವ ಕುರಿತು ಮಾತನಾಡುತ್ತಲೇ ಪರೋಕ್ಷವಾಗಿ ಬಿಜೆಪಿಯ ಶಿಸ್ತನ್ನು ಉದಾಹರಿಸಿದ ದಿಗ್ವಿಜಯ್ ಸಿಂಗ್, ತಮ್ಮ ಪಕ್ಷದ ನಾಯಕರಿಗೆ ಸಂಘಟನಾತ್ಮಕ ಪಾಠ ಮಾಡಲು ಈ ಪೋಸ್ಟ್ ಬಳಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.