ಮಣಿಪುರ ಗಲಭೆ ಕುರಿತಂತೆ ಸರ್ವೋಚ್ಛ ನ್ಯಾಯಾಲಯ, ಸುಪ್ರೀಂಕೋರ್ಟ್ ನ್ಯಾಯಾಧೀಶ ಡಿ.ವೈ ಚಂದ್ರಚೂಡ್ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ ತಮಿಳುನಾಡಿನ ರಾಜಕೀಯ ವಿಶ್ಲೇಷಕ, ಪ್ರಕಾಶಕ ಬದ್ರಿ ಶೇಷಾದ್ರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಚೆನ್ನೈ: ಮಣಿಪುರ ಗಲಭೆ ಕುರಿತಂತೆ ಸರ್ವೋಚ್ಛ ನ್ಯಾಯಾಲಯ, ಸುಪ್ರೀಂಕೋರ್ಟ್ ನ್ಯಾಯಾಧೀಶ ಡಿ.ವೈ ಚಂದ್ರಚೂಡ್ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ ತಮಿಳುನಾಡಿನ ರಾಜಕೀಯ ವಿಶ್ಲೇಷಕ, ಪ್ರಕಾಶಕ ಬದ್ರಿ ಶೇಷಾದ್ರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬದ್ರಿ ಶೇಷಾದ್ರಿ ಅವರಿಗೆ ಆಗಸ್ಟ್ 11ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೆರಂಬಲೂರ್ ಜಿಲ್ಲೆಯ ಮೈಲಾಪೊರೆಯಲ್ಲಿರುವ ಅವರ ನಿವಾಸದಲ್ಲೇ ಪೊಲೀಸರು ಶೇಷಾದ್ರಿ ಅವರನ್ನು ಬಂಧಿಸಿ ಕುನ್ನಮ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಅವರಿಗೆ ಆಗಸ್ಟ್ 11 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಎಫ್ಐಆರ್ ದಾಖಲಿಸಿ ಕುನ್ನಮ್ ಪೊಲೀಸ್ ಠಾಣೆಯ ಪೊಲೀಸ್ ತಂಡ ಅವರನ್ನು ಬಂಧಿಸಿದೆ ಎಂದು ಪೆರಂಬಲೂರ್ ಎಸ್‌ಪಿ ಸಿ ಶ್ಯಾಮಲಾದೇವಿ ಮಾಹಿತಿ ನೀಡಿದ್ದಾರೆ. 

Add Asianetnews Kannada as a Preferred SourcegooglePreferred

ಘಟನೆ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಶೇಷಾದ್ರಿಯವರ ವೀಡಿಯೋ ಸಂದರ್ಶನವೊಂದು ಜುಲೈ 22 ರಂದು ಯೂಟ್ಯೂಬ್‌ನಲ್ಲಿ ಪ್ರಸಾರವಾಗಿದ್ದು, ಈ ವೀಡಿಯೋದಲ್ಲಿ ಅವರು ಮಾಡಿದ ಕಾಮೆಂಟ್ ಆಧರಿಸಿ ಎಫ್‌ಐಆರ್ ದಾಖಲಾಗಿದೆ. ಪೆರಂಬಲೂರ್‌ನಲ್ಲಿ (Perambalur) ವಕೀಲರಾಗಿ ಕೆಲಸ ಮಾಡುತ್ತಿರುವ ಕವಿಯರಸು (B Kaviarasu) ಎಂಬುವವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. 

ಆ ವೀಡಿಯೋದಲ್ಲಿ ಶೇಷಾದ್ರಿಯವರು ಸುಪ್ರೀಂಕೋರ್ಟ್ ದೊಡ್ಡ ---------- ಎಂಬಂತೆ ವರ್ತಿಸುತ್ತಿದೆ. ಸುಪ್ರೀಂಕೋರ್ಟ್‌ನ್ನು ಏನೆಂದು ಕರೆಯಬೇಕೋ ನನಗೆ ಗೊತ್ತಿಲ್ಲ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ಅವರಿಗೆ ರಿವಾಲ್ವರ್ ನೀಡಿ ಮಣಿಪುರಕ್ಕೆ ಹೋಗುವಂತೆ ಕಳುಹಿಸಬೇಕು ಹಾಗೂ ಅಲ್ಲಿ ಶಾಂತಿ ಸ್ಥಾಪಿಸುವಂತೆ ಕೇಳಬೇಕು. ನೀವು ಸರ್ಕಾರದ ಅಧಿಕಾರ ವ್ಯಾಪ್ತಿಯೊಳಗೆ ನುಸುಳಬಹುದೇ? ಅಲ್ಲಿನ ಸರ್ಕಾರದ ವಿರುದ್ಧ ನೀವು ಯಾವ ಆರೋಪವನ್ನು ಮಾಡುತ್ತಿದ್ದೀರಿ? ಅಲ್ಲಿ ಎರಡು ಗುಂಪುಗಳು ಜಗಳವಾಡುತ್ತಿವೆ ಅದು ಗುಡ್ಡಗಾಡು ಪ್ರದೇಶ ಅದಕ್ಕೂ ಮೇಲಾಗಿ ಅದೊಂದು ಸಂಕೀರ್ಣ ಭೂಮಿ ಎಂದು ಬದ್ರಿ ಶೇಷಾದ್ರಿ ಈ ವೀಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋವನ್ನು 'ಆಧಾನ್' ಎಂಬ ಯೂಟ್ಯೂಬ್ ಚಾನೆಲ್ ಬಿಡುಗಡೆ ಮಾಡಿದೆ. 

ಇದೇ ಕೊನೆ ಇನ್ನು ಅಸಾಧ್ಯ ಎಂದ್ಹೇಳಿ ಇ.ಡಿ. ಮುಖ್ಯಸ್ಥರ ಅವಧಿ ವಿಸ್ತರಿಸಲೊಪ್ಪಿದ ಸುಪ್ರೀಂಕೋರ್ಟ್

ಶೇಷಾದ್ರಿ ವಿರುದ್ಧ ಐಪಿಸಿ ಸೆಕ್ಷನ್‌ 153( ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಸೆಕ್ಷನ್ 153ಎ ( ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಹಾಗೂ ಪೂರ್ವಾಗ್ರಹ ಪೀಡಿತವಾಗಿ ಕೆಲ ಕೃತ್ಯಗಳನ್ನು ಮಾಡುವುದು, ಸೆಕ್ಷನ್ 505(1) (ಬಿ) (ಸಾರ್ವಜನಿಕರಿಗೆ ಉದ್ದೇಶಪೂರ್ವಕವಾಗಿ ಭಯ ಎಚ್ಚರಿಕೆ ಉಂಟು ಮಾಡುವುದು ಈ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. 58 ವರ್ಷದ ಬದ್ರಿ ಶೇಷಾದ್ರಿ ಅವರು ತಮಿಳುನಾಡಿನ (Tamil Nadu) ಖ್ಯಾತ ಕಿಝಕು ಪತಿಪ್ಪಗಮ್ (Kizhakku Pathippagam) ಎಂಬ ಪ್ರಕಾಶನ ಸಂಸ್ಥೆಯ ಸ್ಥಾಪಕರಾಗಿದ್ದಾರೆ. ಅಲ್ಲದೇ ಇವರು ಬಲಪಂಥೀಯ ಪಕ್ಷಗಳು ಹಾಗೂ ಸಂಘಟನೆಗಳ ಪರ ವಹಿಸಿ ಮಾತನಾಡುವ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಹಾಗಂತ ಇವರನ್ನು ಡಿಎಂಕೆ ತನ್ನ ಪಕ್ಷದಿಂದ ಉಚ್ಛಾಟನೆ ಏನು ಮಾಡಿಲ್ಲ.

ತಮಿಳುನಾಡಿನಲ್ಲಿ ಡಿಎಂಕೆ (DMK) ಅಧಿಕಾರಕ್ಕೆ ಬಂದ ನಂತರ ಶೇಷಾದ್ರಿ ಸರ್ಕಾರದ ತಮಿಳು ಇಂಟರ್‌ನೆಟ್‌ ಶಿಕ್ಷಣ ಕೌನ್ಸಿಲ್‌ನ ಸಲಹಾ ಮಂಡಳಿಯ ಭಾಗವಾಗಿದ್ದರು. ಆದರೆ 2022ರಲ್ಲಿ ಡಿಎಂಕೆ ಸ್ಥಾಪಕ ಸಿ.ಎನ್ ಅಣ್ಣದುರೈ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಮರ್ಶಾತ್ಮಕ ಟೀಕೆ ಮಾಡಿದ ನಂತರ ಸಲಹಾ ಮಂಡಳಿಯಿಂದ ಅವರನ್ನು ತೆಗೆದು ಹಾಕಲಾಗಿತ್ತು. ಇತ್ತೀಚೆಗೆ ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಾದ ನಂತರ ಕೇಂದ್ರ ಸರ್ಕಾರ ಇದಕ್ಕೆ ಜಾವಾಬ್ದಾರಿ ಎಂದು ಟೀಕೆ ಮಾಡಿದ್ದ ಕೆಲವು ತಮಿಳು ಬರಹಗಾರರನ್ನು ಬದ್ರಿ ಶೇಷಾದ್ರಿ ಖಂಡಿಸಿದ್ದರು. ಈ ಮಧ್ಯೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (K Annamalai) ಅವರು ಬದ್ರಿ ಶೇಷಾದ್ರಿ ಅವರ ಬಂಧನವನ್ನು ಖಂಡಿಸಿದ್ದಾರೆ. ತಮಿಳುನಾಡು ಸರ್ಕಾರ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ. ಸಾಮಾನ್ಯ ಜನರ ಕಾಮೆಂಟ್‌ನ್ನು ಸ್ವೀಕರಿಸಲು ಒಪ್ಪದ ತಮಿಳುನಾಡು ಸರ್ಕಾರ ಅಂತಹವರನ್ನು ಬಂಧಿಸುತ್ತಿದೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ. 

ಸ್ವದೇಶಿ ಗೋ ಹತ್ಯೆ ನಿಷೇಧ ಆದೇಶಕ್ಕೆ ಸುಪ್ರೀಂ ನಕಾರ: ದೇಶೀಯ ಗೋತಳಿ ಉಳಿಸುವ ವಿಷಯ ನಿರ್ಣಯ ಶಾಸಕಾಂಗದ್ದು ಎಂದ ಕೋರ್ಟ್