ಸೇವಾ ಮನೋಭಾವನೆ ನಮ್ಮ ಸಂಸ್ಕೃತಿಯ ವಿಶೇಷತೆ, ರೋಪ್ವೇ ದುರಂತದ ರಕ್ಷಣಾ ಕಾರ್ಯ ಪಡೆಗಳಿಗೆ ಮೋದಿ ಅಭಿನಂದನೆ!
- ಕೇಬಲ್ ಕಾರು ದುರಂತ ರಕ್ಷಣಾ ಪಡೆಗಳ ಜೊತೆ ಪ್ರಧಾನಿ ಮೋದಿ ಸಂವಾದ
- ವಾಯುಸೇನೆ, ಭೂ ಸೇನೆ ಎನ್ಡಿಆರ್ಎಫ್ ಸೇರಿ ರಕ್ಷಣಾ ತಂಡಕ್ಕೆ ಅಭಿನಂದನೆ
- ನಾಗರೀಕರು, ಸ್ಥಳೀಯ ಆಡಳಿತ ಹಾಗೂ ಇಡಿ ತಂಡ ಶ್ಲಾಘಿಸಿದ ಮೋದಿ
ನವದೆಹಲಿ(ಏ.13): ಕೇಬಲ್ ಕಾರು ದುರಂತ ಘಟನೆಗೆ ಭಾರತವೇ ಬೆಚ್ಚಿ ಬಿದ್ದಿದೆ. ಈ ಅಪಘಾತದಲ್ಲಿ ಸಿಲುಕಿದ ಪ್ರವಾಸಿಗರನ್ನು ಯಶಸ್ವಿಯಾಗಿ ರಕ್ಷಿಸಿದ ಭಾರತೀಯ ಸೇನಾ, ಎನ್ಡಿಆರ್ಎಫ್, ಐಟಿಬಿಪಿ, ಸ್ಥಳೀಯ ಆಡಳಿತ,ಸ್ಥಳೀಯ ನಾಗರಿಕರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ದೇಶವೆ ಹೆಮ್ಮೆ ಪಡುವಂತೆ ಮಾಡಿದ ರಕ್ಷಣಾ ತಂಡಗಳಿಗೆ ಮೋದಿ ಅಭಿನಂದನ ಸಲ್ಲಿಸಿದರು. ಸೇವಾ ಮನೋಭವಾನೆ, ನಾಗರೀಕರ ರಕ್ಷಣೆಗೆ ಅವಿರತ ಶ್ರಮವಹಿಸುವುದೇ ನಮ್ಮ ಸಂಸ್ಕೃತಿಯ ವಿಶೇಷತೆ ಎಂದು ಮೋದಿ ಹೇಳಿದ್ದಾರೆ.
ಎಲ್ಲಾ ತಂಡಗಳ ನಡುವಿನ ಸಹಕಾರ, ಅತ್ಯಲ್ಪ ಸಮಯದಲ್ಲಿ ರಕ್ಷಣೆಗೆ ಸನ್ನದ್ದವಾದ ಎಲ್ಲಾ ತಂಡಗಳು ಅಭಿನಂದನಗೆ ಅರ್ಹ. ಇಡೀ ಭಾರತವೇ ನಮ್ಮ ಕಾರ್ಯಪಡೆಗಳ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತಿದೆ. ನಿಮ್ಮ ಶ್ರಮದಿಂದ ಮಕ್ಕಳು, ಮಹಿಳೆಯರು ಸೇರಿದಂತೆ ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಇದಕ್ಕೆ ನಿಮಗೆ ನೀಡಿರುವ ತಯಾರಿ, ಅಭ್ಯಾಸ, ಕ್ಷಿಪ್ರಗತಿಯಲ್ಲಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಕಾರ್ಯಗತಗೊಳಿಸುವ ಚಾಕಚಕತ್ಯೆಯಿಂದ ಈ ಕಾರ್ಯ ಸಾಧ್ಯವಾಗಿದೆ ಎಂದು ಮೋದಿ ಹೇಳಿದರು.
20 ತಾಸು, ಕೇಬಲ್ನಲ್ಲಿ ಸಿಲುಕಿದ್ದಾರೆ 46 ಪ್ರವಾಸಿಗರು, ಜೀವ ರಕ್ಷಿಸಲು ಯೋಧರ ಸಾಹಸ!
ಇದೇ ವೇಳೆ ಈ ಅಪಘಾತದಿಂದ ಸುರಕ್ಷಿತವಾಗಿ ಪಾರಾದ ಎಲ್ಲಾ ನಾಗರೀಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಡೀ ರಾತ್ರಿ ನಿದ್ದೆ ಮಾಡಿದೆ, ಭಯಭೀತ ಸಂದರ್ಭದಲ್ಲಿ ಧೈರ್ಯ ಗೆಡೆದೆ ಸಹಕಾರ ನೀಡಿದ್ದಾರೆ. ಎಲ್ಲರ ಶ್ರಮ, ಪ್ರವಾಸಿಗರ ಸಹಕಾರವನ್ನು ಇಲ್ಲಿ ಸ್ಮರಿಸುತ್ತೇನೆ ಎಂದು ಮೋದಿ ಹೇಳಿದರು.
ಈ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ತಂಡಗಳು ಈ ಅನುಭವ, ಎದುರಾದ ಸವಾಲು, ಗಮನಿಸಬೇಕಾದ ಅಂಶಗಳ ಕುರಿತು ಡಾಕ್ಯುಮೆಂಟರಿ ಮಾಡಬೇಕು. ಈ ದಾಖಲೆ ಇಂತಹ ಸಂದರ್ಭಗಳನ್ನು ಎದುರಿಸಲು ಹಾಗೂ ತರಬೇತಿಯಲ್ಲಿ ಬಳಸಿಕೊಳ್ಳಲು ನೆರವಾಗಲಿದೆ ಎಂದು ಮೋದಿ ಸಲಹೆ ನೀಡಿದರು.ಇನ್ನು ಕಾರ್ಯಚರಣೆಯಲ್ಲಿ ಪಾಲ್ಗೊಂಡು ಪ್ರತಿ ತಂಡದ ಜೊತೆ ಮೋದಿ ಮಾತುಕತೆ ನಡೆಸಿ ಅಭಿನಂದನೆ ಸಲ್ಲಿಸಿದರು.
ವಾಯುಸೇನಾ ಕಾರ್ಯಾಚರಣೆ
ಮಾಹಿತಿ ತಿಳಿದ ತಕ್ಷಣ ವಾಯುಪಡೆ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಕ್ಕೆ ಮುಂದಾದೆವು.ಇದು ಅತ್ಯಂತ ಕಠಿಣ ಸಂದರ್ಭವಾಗಿತ್ತು. ಕಾರಣ ಹೆಲಿಕಾಪ್ಟರ್ ರೋಪ್ ವೇ ಹತ್ತಿರ ಬರುತ್ತಿದ್ದಂತೆ ಗಾಳಿಯ ಕಾರಣದಿಂದ ರೋಪ್ ವೇ ಹಾಗೂ ಕೇಬಲ್ ಕಾರು ಅಲುಗಾಡಲು ಆರಂಭಿಸಿತು. ಇದರಿಂದ ಪ್ರವಾಸಿಗರು ಮತ್ತಷ್ಚು ಭಯಭೀತರಾಗಿದ್ದರು. ಆದರೆ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದ್ದೇವೆ ಎಂದು ವಾಯುಸೇನೆ ಅಧಿಕಾರಿಗಳು ಮೋದಿಗೆ ವಿವರಿಸಿದರು
ಜಾರ್ಖಂಡ್ನಲ್ಲಿ ಕೇಬಲ್ ಕಾರು ದುರಂತ, ಇಬ್ಬರು ಸಾವು, 46 ಮಂದಿಗಾಗಿ ಮುಂದುವರೆದ ರಕ್ಷಣಾ ಕಾರ್ಯ!
ನಾಗರೀಕರ ಸ್ಪಂದನೆ ಹಾಗೂ ನೆರವಿಗೆ ಮೋದಿ ಅಭಿನಂದನೆ
ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ನಾಗರೀಕರ ಕಾರ್ಯವನ್ನು ಮೋದಿ ಅಭಿನಂದಿಸಿದ್ದಾರೆ. ಈ ವೇಳೆ ಕಾರ್ಯಾಚರಣೆಯಲ್ಲಿ ನೆರವು ನೀಡಿದ ನಾಗರೀಕರ ಜೊತೆಗೆ ಸಂವಾದ ನಡೆಸಿದರು. ಈ ವೇಳೆ ಪನ್ನಲಾಲ್ ರೋಪ್ ವೇ ಮೂಲಕ ತೆರಳಿ ಪ್ರವಾಸಿಗರ ರಕ್ಷಿಸವು ಕಾರ್ಯದಲ್ಲಿ ತೊಡಗಿದ್ದರು. ಈ ರೀತಿಯ ಸೇವಾ ಮನೋಭಾವನೆ ನಮ್ಮ ಸಂಸ್ಕೃತಿಯ ವಿಶೇಷತೆ ಎಂದು ಮೋದಿ ಹೇಳಿದರು.
ಐಟಿಬಿಪಿ ಯೋಧರಿಂದ ಮಾಹಿತಿ ಪಡೆದ ಮೋದಿ
ಪ್ರವಾಸಿಗರಿಗೆ ನೀರು ಸೇರಿದಂತೆ ಆಹಾರದ ವ್ಯವಸ್ಥೆ ಮಾಡಿದೆವು. ಪನ್ನಲಾಲ್ ಜಿ ನೆರವಿನಿಂದ ಪ್ರವಾಸಿಗರಲ್ಲಿದ್ದ ಮಕ್ಕಳ ರಕ್ಷಣಾ ಕಾರ್ಯಕ್ಕೆ ಮುಂದಾಗಿದೆವು. ಕಾರಣ ಮಕ್ಕಳು, ಮಹಿಳೆಯರು ಹೆಚ್ಚು ಭಯಭೀತರಾಗಿದ್ದರು.
ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಮೋದಿ ಶಹಬ್ಬಾಸ್
ಮಾಹಿತಿ ತಿಳಿದ ತಕ್ಷಣವೇ ನಾವು ಪೊಲೀಸ್ ಪಡೆಯೊಂದಿಗೆ ಸ್ಥಳಕ್ಕೆ ಧಾವಿಸಿದ್ದೆವು. ಪರಿಸ್ಥಿತಿ ಅವಲೋಕಿಸಿ ಕಾರ್ಯಪ್ರವೃತ್ತರಾದೆವು. ಕೇಬಲ್ ಕಾರಿನಲ್ಲಿ ಸಿಲುಕಿಕೊಂಡಿದ್ದ ಪ್ರವಾಸಿಗರನ್ನು ಉಳಿಸಿಕೊಳ್ಳುವ ಜವಾಬ್ಜಾರಿ ನಮ್ಮ ಮೇಲಿತ್ತು. ಅವರಲ್ಲಿ ಮೈಕ್ ಮೂಲಕ ಮಾತುಕತೆ ನಡೆಸಿದೆವು. ಯಾರು ಭಯಭೀತರಾಗುವ ಅವಶ್ಯಕತೆ ಇಲ್ಲ. ಸುರಕ್ಷಿತವಾಗಿ ರಕ್ಷಿಸಲಾಗುವುದು ಎಂದು ಭರವಸೆ ನೀಡಿದೆವು. ಆಹಾರ, ನೀರು ಒದಗಿಸಿದೆವು. ಬಳಿಕ ವಾಯುಸೇನೆ, ಭೂ ಸೇನಾ , ಎನ್ಡಿಆರ್ಎಫ್ ಜೊತೆಗೂಡಿ ರಕ್ಷಣಾ ಕಾರ್ಯದಲ್ಲಿ ಮುಂದಾದೆವು ಎಂದು ಜಿಲ್ಲಾಧಿಕಾರಿ ಮಂಜುನಾಥ್ ವಿವರಿಸಿದರು.