ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ್ದ ರೈತ ಪ್ರತಿಭಟನೆ/ ಸುಳ್ಳು ಸುದ್ದಿ ಹರಿಯಬಿಟ್ಟ ಆರೋಪದ ಮೇಲೆ ಎಫ್‌ಐಆರ್/ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ, ಶಶಿತರೂರ್‌ಗೆ ಸಂಕಷ್ಟ

ನೋಯ್ಡಾ (ಜ.29): ಜ.26ರಂದು ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್‌ ರಾರ‍ಯಲಿಯ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳನ್ನು ಪ್ರಕಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹಾಗೂ ಇತರ ಆರು ಮಂದಿ ಪತ್ರಕರ್ತರ ವಿರುದ್ಧ ನೋಯ್ಡಾ ಪೊಲೀಸರು ದೇಶ ದ್ರೋಹ ಹಾಗೂ ಇನ್ನಿತರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪತ್ರಕರ್ತರಾದ ಮೃಣಾಲ್‌ ಪಾಂಡೆ, ರಾಜ್‌ದೀಪ್‌ ಸರ್ದೇಸಾಯಿ, ವಿನೋದ್‌ ಜೋಸ್‌, ಝಫರ್‌ ಆಘಾ, ಪರೇಶ್‌ ನಾಥ್‌ ಮತ್ತು ಅನಂತ್‌ ನಾಥ್‌ ಅವರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಟ್ರಾಕ್ಟರ್ ಪರೇಡ್ ಹಿಂಸಾಚಾರಕ್ಕೆ ತಿರುಗಿದ್ದು ಯಾಕೆ? 

ಡಿಜಿಟಲ್‌ ಬ್ರಾಡ್‌ಕಾಸ್ಟ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿತರು ಪ್ರಕಟಿಸಿದ ಪೋಸ್ಟ್‌ಗಳು ಹಿಂಸಾಚಾರಕ್ಕೆ ಕಾರಣ ಎಂದು ಆರೋಪಿಸಿ ನೋಯ್ಡಾದ ನಿವಾಸಿಯೊಬ್ಬರು ದಾಖಲಿಸಿದ್ದ ದೂರಿನ ಹಿನ್ನೆಲೆ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. 

ಅಲ್ಲದೇ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 124 ಎ (ದೇಶದ್ರೋಹ), ಹಿಂಸಾಚಾರಕ್ಕೆ ಪ್ರಚೋದನೆ, ಕ್ರಿಮಿನಲ್‌ ಸಂಚು ಮತ್ತಿತರ ಆರೋಪಗಳ ಅಡಿಯಲ್ಲಿ ಕೇಸ್‌ಗಳನ್ನು ದಾಖಲಿಸಲಾಗಿದೆ. ಅಲ್ಲದೇ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿಯೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.