ಒಂದಲ್ಲ ಎರಡಲ್ಲ 12 ಬಾರಿ ಪೊಲೀಸ್ ಪೇದೆಗೆ ಚಾಕುವಿನಿಂದ ಇರಿದು ಕೊಂದ ಕಳ್ಳ
ಪೊಲೀಸ್ ಪೇದೆಯೊಬ್ಬರಿಗೆ ದುಷ್ಕರ್ಮಿಯೊಬ್ಬ ಒಂದಲ್ಲ ಎರಡಲ್ಲ 12 ಬಾರಿ ಚಾಕುವಿನಿಂದ ಇರಿದು ಕೊಂದ ಭೀಭತ್ಸ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ದೆಹಲಿ: ಪೊಲೀಸ್ ಪೇದೆಯೊಬ್ಬರಿಗೆ ದುಷ್ಕರ್ಮಿಯೊಬ್ಬ ಒಂದಲ್ಲ ಎರಡಲ್ಲ 12 ಬಾರಿ ಚಾಕುವಿನಿಂದ ಇರಿದು ಕೊಂದ ಭೀಭತ್ಸ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಘಟನೆಯಲ್ಲಿ ಪೊಲೀಸ್ ಪೇದೆ 57 ವರ್ಷ ಪ್ರಾಯದ ಶಂಭು ದಯಾಳ್ ಶರ್ಮಾ ಅವರು ಸಾವನ್ನಪ್ಪಿದ್ದಾರೆ. ಈ ವೇಳೆ ಸುತ್ತಲೂ ಸಾರ್ವಜನಿಕರಿದ್ದರೂ ಯಾರೂ ಕೂಡ ಪೊಲೀಸ್ ಪೇದೆಯ ನೆರವಿಗೆ ಬಾರದೇ ಮೂಕ ಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದಾರೆ,
ಈ ದುಷ್ಕರ್ಮಿ ಮೊಬೈಲ್ ಫೋನ್ ಕದಿಯಲು ಮುಂದಾದಾಗ ಪೊಲೀಸ್ ಪೇದೆ ಆತನನ್ನು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಆತ ಪೊಲೀಸ್ ಪೇದೆಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆ ಕಳೆದ ವಾರ ನಡೆದಿದ್ದು, ಈಗ ಈ ದುರಂತದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ದುರಂತದಲ್ಲಿ ಸಾವಿಗೀಡಾದ ಪೊಲೀಸ್ ಪೇದೆಯ ಕುಟುಂಬಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಒಂದು ಕೋಟಿ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಜನವರಿ ನಾಲ್ಕರಂದು ಈ ಘಟನೆ ನಡೆದಿದ್ದು, ಈ ಅವಘಡ ಸಂಭವಿಸುವ ವೇಳೆ ಅಲ್ಲಿ ಅನೇಕರಿದ್ದರೂ ಒಬ್ಬರೂ ಕೂಡ ಪೊಲೀಸ್ ಅಧಿಕಾರಿಯ ನೆರವಿಗೆ ಬಂದಿಲ್ಲ.
ಚೇಸಿಂಗ್ ವೇಳೆ ದರೋಡೆಕೋರರಿಂದ ಪೊಲೀಸರ ಮೇಲೆಯೇ ಗುಂಡಿನ ದಾಳಿ: ಓರ್ವ ಪೊಲೀಸ್ ಹುತಾತ್ಮ
ವಿಡಿಯೋದಲ್ಲಿ ಕಾಣಿಸುವಂತೆ ಪಶ್ಚಿಮ ದೆಹಲಿಯ (west Delhi) ಮಾಯಪುರಿಯಲ್ಲಿ (Mayapuri) ಪೊಲೀಸ್ ಅಧಿಕಾರಿ ನಡೆದುಕೊಂಡು ಹೋಗುತ್ತಿದ್ದಾಗ ಕಳ್ಳ ಅನೀಸ್ ರಾಜ್ ಅವರಿಗೆ ಎದುರಾಗಿದ್ದು, ಅವರು ಆತನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಅನೀಸ್ ರಾಜ್ (Anish Raj) ಅವರಿಗೆ ಚಾಕುವಿನಿಂದ 12 ಬಾರಿ ಇರಿದಿದ್ದಾನೆ. ಇದಕ್ಕೂ ಮೊದಲು ಮಹಿಳೆಯೊಬ್ಬರು ಕಳ್ಳ ಅನೀಸ್ ರಾಜ್ ತನ್ನ ಗಂಡನ ಮೊಬೈಲ್ ಫೋನ್ ಕಸಿದುಕೊಂಡು ಹೋಗಿದ್ದಲ್ಲದೇ ಅವರಿಗೆ ಬೆದರಿಸಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಪೊಲೀಸ್ ಪೇದೆ ಶಂಭು ದಯಾಳ್ ಆಗಮಿಸಿದ್ದು, ಈ ವೇಳೆ ಮಹಿಳೆ ಆರೋಪಿ ಅನೀಸ್ನತ್ತ ಕೈ ತೋರಿಸಿದ್ದಾರೆ. ಈ ವೇಳೆ ಪೊಲೀಸ್ ಶಂಭು ದಯಾಳ್ ಅವರಿಗೆ ಆತನ ಕೈಯಲ್ಲಿ ಕದ್ದಿರುವ ಮೊಬೈಲ್ ಫೋನ್ ಕಾಣಿಸಿದ್ದು, ಅನೀಸ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲು ಮುಂದಾಗುತ್ತಿದ್ದಂತೆ ಆತ ತನ್ನ ಬಳಿ ಅಡಗಿಸಿಟ್ಟಿದ್ದ ಚಾಕುವನ್ನು ತೆಗೆದು ಪೊಲೀಸ್ ಪೇದೆಗೆ ಚಾಕುವಿನಿಂದ ಇರಿಯಲು ಶುರು ಮಾಡಿದ್ದಾನೆ.
ಇದೇ ವೇಳೆ ಅದೇ ಪ್ರದೇಶದಲ್ಲಿದ್ದ ಮತ್ತೊಬ್ಬ ಪೊಲೀಸ್ ಪೇದೆಯೊಬ್ಬರು ಸ್ಥಳಕ್ಕೆ ಧಾವಿಸಿ ಬಂದು ಅನೀಶ್ನನ್ನು ಬಂಧಿಸಿದ್ದಾರೆ. ಇತ್ತ ಚಾಕು ಇರಿತದಿಂದ ಗಾಯಗೊಂಡು ಚಡಪಡಿಸುತ್ತಿದ್ದ ಪೊಲೀಸ್ ಪೇದೆಯನ್ನು ಆಸ್ಪತ್ರೆಗೆ (hospital) ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ. ಮೃತ ಶಂಭು ದಯಾಳ್ ಅವರು ರಾಜಸ್ಥಾನದ (Rajasthan) ಸಿಕರ್ನವರಾಗಿದ್ದು(Sikar), ಓರ್ವ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಸರಗಳ್ಳನ ಕ್ಯಾಚ್ ಹಾಕಿದ ಪೊಲೀಸ್ : ವೈರಲ್ ವಿಡಿಯೋ
ಮೃತ ಪೊಲೀಸ್ ಪೇದೆ ಕುಟುಂಬಕ್ಕೆ ದೆಹಲಿ ಸಿಎಂ (Chief Minister) ಅರವಿಂದ ಕೇಜ್ರಿವಾಲ್ (Arvind Kejriwal) ಅವರು ಸಂತಾಪ ಸೂಚಿಸಿದ್ದಾರೆ. ಸಾರ್ವಜನಿಕರನ್ನು ರಕ್ಷಿಸುವ ಭರದಲ್ಲಿ ಎಎಸ್ಐ ಶಂಭು ಜೀ ಅವರು ತಮ್ಮ ಜೀವವನ್ನು ಕೂಡ ಲೆಕ್ಕಿಸದೇ ಹುತಾತ್ಮರಾಗಿದ್ದಾರೆ. ಅವರ ಬಗ್ಗೆ ನಮಗೆ ಹೆಮ್ಮೆ ಇದೆ. ಅವರ ಸೇವೆಯ ಗೌರವಾರ್ಥವಾಗಿ ಅವರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಯ ಪರಿಹಾರ ನೀಡಲಾಗುವುದು ಎಂದು ಅರವಿಂದ್ ಕೇಜ್ರಿವಾಲ್ ಟ್ವಿಟ್ ಮಾಡಿದ್ದಾರೆ.