ದೇಶದ ಕ್ರೀಡಾ ಕ್ಷೇತ್ರದಲ್ಲಿ 2014ಕ್ಕಿಂತ ಹಿಂದೆ ಇದ್ದಂತಹ ಪಕ್ಷಪಾತ, ಅಕ್ರಮಗಳು ದಶಕಗಳ ಹಿಂದೆಯೇ ನಿಂತುಹೋಗಿದ್ದು, ಈಗ ಪ್ರತಿಭೆಗಷ್ಟೇ ಬೆಲೆ ಸಿಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬೆಂಗಳೂರು : ದೇಶದ ಕ್ರೀಡಾ ಕ್ಷೇತ್ರದಲ್ಲಿ 2014ಕ್ಕಿಂತ ಹಿಂದೆ ಇದ್ದಂತಹ ಪಕ್ಷಪಾತ, ಅಕ್ರಮಗಳು ದಶಕಗಳ ಹಿಂದೆಯೇ ನಿಂತುಹೋಗಿದ್ದು, ಈಗ ಪ್ರತಿಭೆಗಷ್ಟೇ ಬೆಲೆ ಸಿಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸಂಸದ ಖೇಲ್ ಮಹೋತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ವರ್ಚ್ಯುವಲ್ ಆಗಿ ಪಾಲ್ಗೊಂಡು ಮಾತನಾಡಿದ ನರೇಂದ್ರ ಮೋದಿ, 2014ಕ್ಕೂ ಮುನ್ನ ತಂಡಗಳ ಆಯ್ಕೆ, ಕ್ರೀಡಾ ಮೂಲಸೌಕರ್ಯ ಒದಗಿಸುವುದು ಸೇರಿ ಕ್ರೀಡಾ ಕ್ಷೇತ್ರದಲ್ಲೂ ಸಾಕಷ್ಟು ಪಕ್ಷಪಾತ ಮತ್ತು ಅಕ್ರಮಗಳು ನಡೆಯುತ್ತಿದ್ದವು. ಅವಕ್ಕೆಲ್ಲ ದಶಕಗಳ ಹಿಂದೆಯೇ ಕಡಿವಾಣ ಹಾಕಲಾಗಿದೆ. ಈಗ ಏನಿದ್ದರೂ ಕಠಿಣ ಪರಿಶ್ರಮ ಪಡುವ, ಪ್ರತಿಭೆ ಹೊಂದಿರುವವರಿಗೆ ಮಾತ್ರ ಅವಕಾಶ ಸಿಗುತ್ತಿದೆ. ಅದು ಬಡತನ ಹಿನ್ನೆಲೆಯುಳ್ಳ ಮಕ್ಕಳಿಗೂ ಸೂಕ್ತ ಅವಕಾಶ ಮತ್ತು ಪುರಸ್ಕಾರ ಸಿಗುವಂತೆ ಮಾಡಲಾಗಿದೆ ಎಂದರು.
ಕ್ರೀಡಾ ಕ್ಷೇತ್ರದ ಬಜೆಟ್ ಕೂಡ ಹೆಚ್ಚಳ ಮಾಡಲಾಗಿದೆ. 2014ಕ್ಕೂ ಮುನ್ನ 1,200 ಕೋಟಿ ರು.ಗಳಷ್ಟು ಅನುದಾನ ನಿಗದಿ ಮಾಡಲಾಗುತ್ತಿತ್ತು. ಈಗ 3 ಸಾವಿರ ಕೋಟಿ ರು.ಗೂ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಫಿಟ್ ಇಂಡಿಯಾ, ಖೇಲೋ ಇಂಡಿಯಾ, ಸಂಸದ ಖೇಲ್ ಮಹೋತ್ಸವದಂತಹ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಯುವಜನರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
2030ಕ್ಕೆ ಕಾಮನ್ವೆಲ್ತ್, 2036ಕ್ಕೆ ಒಲಂಪಿಕ್:
ಕೇಂದ್ರ ಸರ್ಕಾರವು ವಿಶ್ವ ಕ್ರೀಡಾ ಕ್ಷೇತ್ರದಲ್ಲಿ ದೇಶದ ಹೆಸರನ್ನು ಬೆಳಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. 2030ರಲ್ಲಿ ಅಹಮದಾಬಾದ್ನಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. 2036ರಲ್ಲಿ ಭಾರತದಲ್ಲಿ ಒಲಂಪಿಕ್ಸ್ ಆಯೋಜನೆ ಅವಕಾಶ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಈಗಿನ 10-12 ವರ್ಷ ವಯಸ್ಸಿನ ಮಕ್ಕಳು ಮುಂದಿನ ದಿನಗಳಲ್ಲಿ ಕಾಮನ್ವೆಲ್ತ್, ಒಲಂಪಿಕ್ನಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಪಡೆಯಲಿದ್ದಾರೆ. ಹೀಗಾಗಿ ಮಕ್ಕಳು ಈಗಲೇ ತಯಾರಿ ನಡೆಸಬೇಕು. ಅದಕ್ಕೆ ಪೂರಕವಾಗಿ ಸಂಸದ ಖೇಲ್ ಮಹೋತ್ಸವ ಆಯೋಜಿಸಲಾಗಿದೆ ಎಂದು ನರೇಂದ್ರ ಮೋದಿ ಮಾಹಿತಿ ನೀಡಿದರು.
ರಾಜ್ಯದ ಕ್ರೀಡಾಪಟುಗಳು ಭಾಗಿ:
ಸಂಸದ ಖೇಲ್ ಮಹೋತ್ಸವದ ಸಮಾರೋಪ ಸಮಾರಂಭ ಹಿನ್ನೆಲೆಯಲ್ಲಿ ಜಲಮಂಡಳಿ ಸುವರ್ಣ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರ ವರ್ಚ್ಯುವಲ್ ಭಾಷಣವನ್ನು ವೀಕ್ಷಣೆ ಮಾಡಲಾಯಿತು. ಈ ವೇಳೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಆಯೋಜಿಸಿದ್ದ ಸಂಸದ ಖೇಲ್ ಮಹೋತ್ಸವದಲ್ಲಿ ವಿಜೇತರಾದ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ, ಐಸಿಎಂಎಐನಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ನಾಲ್ಕು ಕಾರ್ಮಿಕ ಕಾಯ್ದೆಗಳ ಕುರಿತಂತೆ ಜಾಗೃತಿ ಮೂಡಿಸಲಾಯಿತು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯಸಭಾ ಸದಸ್ಯ ಲಹರ್ಸಿಂಗ್ ಸಿರೋಯಾ, ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ, ಐಸಿಎಂಐ ಅಧ್ಯಕ್ಷ ಶ್ರೀನಿವಾಸ್ ಪ್ರಸಾದ್, ಬೆಂಗಳೂರು ಚಾಪ್ಟರ್ ಅಧ್ಯಕ್ಷ ಬಿ.ಕೆ. ರಾಘವೇಂದ್ರ ಇತರರಿದ್ದರು.

