ಮನೆಯ ಹೊರಗೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧರೊಬ್ಬರ ಮೇಲೆ ಜಲ್ಲಿಕಲ್ಲು ತುಂಬಿದ ಲಾರಿ ಮಗುಚಿ ಬಿದ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರಂತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ಸಾವು ಯಾವಾಗ ಹೇಗೆ ಬರುತ್ತೆ ಅಂತ ಹೇಳಲಾಗದು. ಮನೆಯಿಂದ ಹೊರಟವರು ಮತ್ತೆ ಸಂಜೆ ಮನೆ ತಲುಪಿ ಬಿಡಬಹುದು ಎಂಬ ಯಾವುದೇ ಭರವಸೆ ಇಂದಿನ ದಿನಗಳಲ್ಲಿ ಇಲ್ಲವಾಗಿದೆ. ಇದಕ್ಕೆಲ್ಲಾ ಅಚಾನಕ್ ಆಗಿ ನಡೆಯುತ್ತಿರುವ ನಿರೀಕ್ಷಿಸದ ಘಟನೆಗಳು ಕಾರಣವಾಗಿವೆ. ಕೆಲ ಅಪಘಾತಗಳಲ್ಲಿ ಏನೂ ಮಾಡದ ತಪ್ಪಿಗೆ ಇನ್ಯಾರೋ ಪ್ರಾಣ ಬಿಡುವಂತಾಗಿದೆ. ಹಾಗೆಯೇ ಇಲ್ಲೊಂದು ಕಡೆ ಥರಗುಟ್ಟುವ ಈ ಚಳಿಗಾಲದ ಚಳಿಯಲ್ಲಿ ತುಸು ಕಾಲ ಸೂರ್ಯನ ಬಿಸಿಲಿಗೆ ಬೆನ್ನೊಡ್ಡಿ ತುಸು ಮೈಬಿಸಿ ಮಾಡಿಕೊಳ್ಳೋಣ ಎಂದು ಮನೆಯ ಹೊರಗೆ ಕುಳಿತು ಚಳಿ ಕಾಯಿಸುತ್ತಿದ್ದ ವೃದ್ಧರೊಬ್ಬರು, ಜವರಾಯನಂತೆ ಬಂದ ಜಲ್ಲಿತುಂಬಿದ ಲಾರಿ ಮಗುಚಿ ಬಿದ್ದು ಪ್ರಾಣ ಬಿಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಈ ದುರಂತ ನಡೆದಿದೆ. 90 ವರ್ಷದ ಹಣ್ಣುಹಣ್ಣು ವೃದ್ಧ ಗಿರಿರಾಜ್ ಶರ್ಮಾ ಸಾವನ್ನಪ್ಪಿದವರು. ಈ ಘಟನೆಯ ವೀಡಿಯೋ ಈಗ ಅಲ್ಲಿದ್ದ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಕಾಣುವಂತೆ ವೃದ್ಧ ಮನೆ ಮುಂದಿನ ಜಗಲಿಯಲ್ಲಿ ಕಾಲುಗಳನ್ನು ಮುಂದಕ್ಕೆ ನೀಡಿ ಚಳಿ ಕಾಯಿಸುತ್ತಾ ಕುಳಿತಿದ್ದಾರೆ. ಅಷ್ಟರಲ್ಲಿ ವೇಗವವಾಗಿ ಬಂದ ಜಲ್ಲಿಕಲ್ಲುಗಳನ್ನು ತುಂಬಿದ್ದ ಲಾರಿಯೊಂದು ವೃದ್ಧ ನೋಡು ನೋಡುತ್ತಿದ್ದಂತೆ ಅವರ ಮೇಲೆಯೇ ಮಗುಚಿ ಬಿದ್ದಿದೆ. ಲಾರಿ ಮಗುಚುವುದನ್ನು ನೋಡಿ ವೃದ್ಧ ಏಳುವುದಕ್ಕೆ ಪ್ರಯತ್ನಿಸಿದರು ಸಾಧ್ಯವಾಗದೇ ಜಲ್ಲಿಕಲ್ಲು ತುಂಬಿದ ಲಾರಿಯಡಿಗೆ ಸಿಲುಕಿ ಅವರು ಅಪ್ಪಚ್ಚಿಯಾಗಿದ್ದಾರೆ.

ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ವೀಡಿಯೋ ನೋಡಿ ಆಘಾತ ವ್ಯಕ್ತಪಡಿಸಿದ್ದಾರೆ. @SouleFacts ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಅವರು ಹೀಗೆ ಬರೆದುಕೊಂಡಿದ್ದಾರೆ. ಸಾವು ಯಾವಾಗ ಬರುತ್ತೆ ಎಂದು ಊಹಿಸಲಾಗದು. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ, 90 ವರ್ಷದ ಗಿರಿರಾಜ್ ಶರ್ಮಾ ತಮ್ಮ ಮನೆಯ ಹೊರಗೆ ಸುಮ್ಮನೆ ಕುಳಿತಿದ್ದರು. ಚಳಿಗಾಲದ ಬಿಸಿಲಿನಲ್ಲಿ ಅವರು ಸದ್ದಿಲ್ಲದೆ ನೆನೆಯುತ್ತಿದ್ದರು. ಆದರೆ ವಿಧಿಯ ಕ್ರೂರ ತಿರುವುಗಳಲ್ಲಿ, ಜಲ್ಲಿಕಲ್ಲು ತುಂಬಿದ ಡಂಪರ್ ಲಾರಿ ಟೈರ್ ಒಡೆದ ನಂತರ ನಿಯಂತ್ರಣ ಕಳೆದುಕೊಂಡು ಅವರ ಮೇಲೆಯೇ ಉರುಳಿತು. ಇದರಿಂದ ಅವರ ಜೀವನ ಯಾವುದೇ ಮುನ್ನೆಚ್ಚರಿಕೆ ಇಲ್ಲದೇ ತಕ್ಷಣವೇ ಕೊನೆಗೊಂಡಿತು. ಶಾಂತಿಯುತ ಕ್ಷಣವು ಕಣ್ಣು ಮಿಟುಕಿಸುವುದರಲ್ಲಿ ಊಹಿಸಲಾಗದ ದುರಂತವಾಗಿ ಬದಲಾಯಿತು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮಾಲ್‌ನಲ್ಲಿ ಹುಡುಗಿಗೆ ಪ್ರಪೋಸ್ ಮಾಡಿ ಅಲ್ಲೇ ತಾಳಿ ಕಟ್ಟಿದ ಯುವಕ: ವೀಡಿಯೋ ಭಾರಿ ವೈರಲ್

ವೀಡಿಯ ನೋಡಿದ ಅನೇಕರು ವೃದ್ಧನ ಸಾವಿಗೆ ಬೇಸರ ವ್ಯಕ್ತಪಡಿಸುವ ಜೊತೆಗೆ ನಮ್ಮ ರಸ್ತೆಗಳ ಅವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನೂ ಫೈನಲ್ ಡೆಸ್ಟಿನೇಷನ್ ಎಂದು ಕರೆದಿದ್ದಾರೆ. ಇದೊಂದು ಕೊಲೆ ಇದಕ್ಕೆ ರಸ್ತೆ ಗುತ್ತಿಗೆ ತೆಗೆದುಕೊಂಡವರೆ ಕಾರಣ ಎಂದು ಇನ್ನೂ ಅನೇಕರು ಟೀಕಿಸಿದ್ದಾರೆ.

ಇದನ್ನೂ ಓದಿ: ಪ್ರೀತಿ ವಿರೋಧಿಸಿದ ತಂದೆಯನ್ನು ಗೆಳೆಯನ ಜೊತೆ ಸೇರಿ ಮಸಣಕ್ಕೆ ಅಟ್ಟಿದ ಪಾಪಿ ಮಗಳು

Scroll to load tweet…