ಸಿಎಸ್‌ಐಆರ್‌ ಮತ್ತು ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆಯ ವರದಿಯು ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ಮಹದಾಯಿ ಪ್ರಕರಣದ ವಿಚಾರಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ.

ಪಣಜಿ: ಮಹದಾಯಿ ನದಿ ತಿರುವು ಯೋಜನೆ ಕುರಿತು ಸಿಎಸ್‌ಐಆರ್‌ ಮತ್ತು ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆ ನೀಡಿರುವ ವರದಿಯು, ಇದೇ ಪ್ರಕರಣದ ಕುರಿತು ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯ ಮೇಲೆ ಯಾವುದೇ ಪರಿಣಾಮ ಬೀರದು. ಪ್ರಕರಣದಲ್ಲಿ ನಮ್ಮ ವಾದದಲ್ಲಿ ಯಾವುದೇ ಬದಲಾವಣೆಯಾಗದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಕರ್ನಾಟಕ-ಗೋವಾ ನಡುವೆ ದಶಕಗಳಿಂದ ಕಿತ್ತಾಟಕ್ಕೆ ಕಾರಣವಾಗಿರುವ ಮಹದಾಯಿ ಯೋಜನೆ ಕುರಿತು ಕೇಂದ್ರ ಸರ್ಕಾರದ ಅಧೀನದ ಸಂಸ್ಥೆ ಇತ್ತೀಚೆಗೆ ವರದಿ ಪ್ರಕಟಿಸಿತ್ತು. ಅದರ ಪ್ರಕಾರ, ಕರ್ನಾಟಕದ ಕಳಸ-ಬಂಡೂರಿ ಯೋಜನೆಯಡಿ ಮಹದಾಯಿ ನದಿ ನೀರನ್ನು ಮಲಪ್ರಭ ನದಿಯ ಕಡೆ ತಿರುಗಿಸುವುದರಿಂದ ಗೋವಾಕ್ಕೆ ಹೆಚ್ಚಿನ ಸಮಸ್ಯೆಯಾಗದು ಎನ್ನಲಾಗಿತ್ತು.

ಮಹದಾಯಿ ನದಿ ತಿರುವು ಯೋಜನೆಯಿಂದ ಗೋವಾದ ಮೇಲೆ ಯಾವುದೇ ಹೆಚ್ಚಿನ ಪರಿಣಾಮ ಆಗದು. ಆಗುವ ಸಣ್ಣಪುಟ್ಟ ಪರಿಣಾಮಗಳನ್ನು ಇತರೆ ಉಪಕ್ರಮಗಳ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರದ ಅಧೀನದ ಸಿಎಸ್‌ಐಆರ್‌ (ಕೌನ್ಸಿಲ್‌ ಆಫ್‌ ಸೈಂಟಿಫಿಕ್‌ ಆ್ಯಂಡ್‌ ಇಂಡಸ್ಟ್ರಿಯಲ್‌ ರಿಸರ್ಚ್‌)-ಎನ್‌ಐಒ (ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆ) ಮಹತ್ವದ ವರದಿಯೊಂದನ್ನು ಬಿಡುಗಡೆ ಮಾಡಿದೆ.

ಈ ವರದಿ ಮಹದಾಯಿ ಯೋಜನೆಯಿಂದ ತನಗೆ ಭಾರೀ ಅನ್ಯಾಯವಾಗಲಿದೆ ಎಂದು ಆರೋಪಿಸಿ ಯೋಜನೆಗೆ ಅಡ್ಡಿಪಡಿಸುತ್ತಿದ್ದ ಗೋವಾಕ್ಕೆ ಭಾರೀ ಮುಖಭಂಗ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ವರದಿ ವಿರೋಧಿಸಿ ಮಹದಾಯಿ ಆಂದೋಲನದ ಸದಸ್ಯರು ಮತ್ತು ನಾಗರಿಕರು ಡೋನಾ ಪೌಲ್‌ನಲ್ಲಿರುವ ಎನ್‌ಐಎ ಸಂಸ್ಥೆಯ ಕಟ್ಟಡದ ಎದುರು ಗುರುವಾರ ಪ್ರತಿಭಟನೆ ನಡೆಸಿ, ಸಂಸ್ಥೆಯ ಮೂವರು ಜಲಶಾಸ್ತ್ರಜ್ಞರು ನಡೆಸಿದ ಅಧ್ಯಯನಕ್ಕೆ ಸಂಬಂಧಿಸಿ ವಿವರಣೆ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ವರದಿಯಲ್ಲಿ ಏನಿದೆ?:

''ಅರ್ಥ್‌ ಸಿಸ್ಟಮ್ಸ್‌ ಸೈನ್ಸಸ್‌'' ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯಲ್ಲಿ, ‘ಕರ್ನಾಟಕವು ಮಹದಾಯಿ ನದಿ ನೀರು ತಿರುವು ಯೋಜನೆ ಕೈಗೆತ್ತಿಕೊಂಡರೆ ಗೋವಾ ಮೇಲೆ ಹೆಚ್ಚಿನ ಪರಿಣಾಮವೇನೂ ಬೀರುವುದಿಲ್ಲ. ಈ ಯೋಜನೆ ಜಾರಿಯಿಂದ ಆಗುವ ಸಣ್ಣ ಪರಿಣಾಮವನ್ನು ಬದಲಿ ಉಪಕ್ರಮಗಳ ಮೂಲಕ ನಿಭಾಯಿಸಬಹುದಾಗಿದೆ’ ಎಂದು ಹೇಳಲಾಗಿದೆ.

ಈ ಬಗ್ಗೆ ಮಾತನಾಡಿರುವ ಸಾವಂತ್‌, ‘ಸಮುದ್ರಶಾಸ್ತ್ರ ಸಂಸ್ಥೆಗೆ ಸಂಶೋಧನೆ ನಡೆಸುವಂತೆ ನಮ್ಮ ರಾಜ್ಯ ಸರ್ಕಾರ ಕೇಳಿಕೊಂಡಿರಲಿಲ್ಲ. ಅದರ ಹೊರತಾಗಿಯೂ ಮಾಡಲಾಗಿದೆಯೆಂದರೆ ಅವರ ಸ್ವ ಇಚ್ಛೆಯಿಂದ ಮಾಡಲಾಗಿದೆ. ಅದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಆ ವರದಿಯಿಂದಾಗಿ, ಸುಪ್ರೀಂ ಅಂಗಳದಲ್ಲಿರುವ ಕೇಸ್‌ ಕುರಿತ ನಮ್ಮ ವಾದ ಬದಲಾಗದು’ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಹುಟ್ಟುವ ಮಹದಾಯಿ ಮಹಾರಾಷ್ಟ್ರದ ಮೂಲಕ ಗೋವಾಗೆ ಹೋಗಿ, ಅಲ್ಲಿ ಅರೇಬಿಯನ್‌ ಸಮುದ್ರಕ್ಕೆ ಸೇರುತ್ತದೆ. ಕಳಸಾ-ಬಂಡೂರಿ ಯೋಜನೆ ಕಾರ್ಯರೂಪಕ್ಕೆ ಬಂದರೆ, ತಮಗೆ ಸಿಗುವ ಮಹದಾಯಿಯ ಪಾಲು ಕಡಿಮೆಯಾಗುತ್ತದೆ ಎಂಬುದು ಗೋವಾದ ವಾದ.