Asianet Suvarna News Asianet Suvarna News

ಕೋವಿಡ್‌ 4ನೇ ಅಲೆಯ ಮುನ್ಸೂಚನೆ: ದೇಶದಲ್ಲಿ ಕೋವಿಡ್‌ ಪ್ರಸರಣ ವೇಗ 3 ತಿಂಗಳ ಗರಿಷ್ಠಕ್ಕೆ ಏರಿಕೆ

*  ಕೋವಿಡ್‌ ಆರ್‌-ವ್ಯಾಲ್ಯೂ 1.07ಗೆ ಏರಿಕೆ
*  ಜನವರಿ ಬಳಿಕ ಆರ್‌-ದರ 1 ಮೀರಿದ್ದು ಇದೇ ಮೊದಲು
*  ದಿಲ್ಲಿ, ಉ.ಪ್ರ.ದಲ್ಲಿ ದೇಶದಲ್ಲೇ ಅತ್ಯಧಿಕ 2.12 ಆರ್‌-ವ್ಯಾಲ್ಯೂ
 

Covid Propagation Speed Rises to 3 Month High in India grg
Author
Bengaluru, First Published Apr 21, 2022, 4:37 AM IST

ನವದೆಹಲಿ(ಏ.21):  ಒಬ್ಬರಿಂದ ಇನ್ನೊಬ್ಬರಿಗೆ ಕೋವಿಡ್‌(Covid-19) ಹರಡುವ ಸೂಚ್ಯಂಕವಾದ ‘ಆರ್‌-ವ್ಯಾಲ್ಯೂ’ ಜನವರಿ ಬಳಿಕ ಇದೇ ಮೊದಲ ಬಾರಿಗೆ ಶೇ. 1ಕ್ಕಿಂತ ಏರಿದೆ. ದಿಲ್ಲಿಯಲ್ಲಿ ಕೇಸು ಏರುತ್ತಿರುವ ನಡುವೆಯೇ ಈ ಆತಂಕದ ಸಮಾಚಾರ ಹೊರಬಿದ್ದಿದೆ. ಇದು ದೇಶದಲ್ಲಿ ಕೋವಿಡ್‌ 4ನೇ ಅಲೆಯ(Covid 4th Wave) ಮುನ್ಸೂಚನೆಯೇ ಎಂಬ ಚರ್ಚೆಗೆ ನಾಂದಿ ಹಾಡಿದೆ.

ಈ ಹಿಂದೆ ಜನವರಿಯಲ್ಲಿ (ಜ.16-ಜ.22) ಆರ್‌-ವ್ಯಾಲ್ಯೂ(R-Value) ಸೇ. 1.28 ಇತ್ತು. ಬಳಿಕ ಅದು ಸೇ. 1ಕ್ಕಿಂತ ಕೆಳಗೆ ಕುಸಿದಿತ್ತು. ಏ.5ರಿಂದ 11ರ ನಡುವಿನ ವಾರದಲ್ಲಿ ಕೂಡ ಶೇ. 0.93 ಇತ್ತು. ಆದರೆ ಏ.12ರಿಂದ 18ರ ನಡುವಿನ ಅವಧಿಯಲ್ಲಿ ಶೇ. 1ಕ್ಕಿಂತ ಹೆಚ್ಚಾಗಿದ್ದು, ಶೇ 1.07 ದರ ದಾಖಲಿಸಿದೆ ಎಂದು ಚೆನ್ನೈ ಗಣಿತಶಾಸ್ತ್ರ ವಿಜ್ಞಾನ ಸಂಸ್ಥೆಯ ಅಧ್ಯಯನ ತಿಳಿಸಿದೆ.

ದೆಹಲಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ, ನಿಯಮ ಉಲ್ಲಂಘಿಸಿದರೆ ₹500 ದಂಡ

ದಿಲ್ಲಿಯಲ್ಲಿ(Delhi) ಕೋವಿಡ್‌ ಕಳೆದ ವಾರದಿಂದ ಏರುತ್ತಿದೆ. ಆದರೆ ಕೇವಲ ದಿಲ್ಲಿ ಮಾತ್ರವಲ್ಲ. ಆರ್‌-ವ್ಯಾಲ್ಯೂ ಏರಿಕೆಯಲ್ಲಿ ಪಕ್ಕದ ಉತ್ತರ ಪ್ರದೇಶ(Uttar Pradesh) ಹಾಗೂ ಹರಾರ‍ಯಣದ(Haryana) ‘ಕೊಡುಗೆ’ಯೂ ಅಧಿಕವಾಗಿದೆ. ದಿಲ್ಲಿಯಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ಆರ್‌-ವ್ಯಾಲ್ಯೂ ತಲಾ ಶೇ 2.12, ಕರ್ನಾಟಕದಲ್ಲಿ(Karnataka) ಶೇ 1.04, ಹರಾರ‍ಯಣದಲ್ಲಿ ಶೇ .70, ಮುಂಬೈನಲ್ಲಿ ಶೇ 1.13, ಚೆನ್ನೈನಲ್ಲಿ ಶೇ 1.18 ಹಾಗೂ ಬೆಂಗಳೂರಲ್ಲಿ ಶೇ 1.04 ಇದೆ ಎಂದು ವಿಜ್ಞಾನ ಸಂಸ್ಥೆಯ ತಜ್ಞ ಸಿತಾಭಾ ಸಿನ್ಹಾ ಹೇಳಿದ್ದಾರೆ. ಸಿನ್ಹಾ ಅವರು ದೇಶದಲ್ಲಿ ಕೋವಿಡ್‌ ಹಾವಳಿ ಆರಂಭ ಆದಾಗಿನಿಂದ ಆರ್‌-ವ್ಯಾಲ್ಯೂ ಅಳೆಯುತ್ತಿದ್ದಾರೆ.

ಆರ್‌-ವ್ಯಾಲ್ಯೂ ಶೇ 1ಕ್ಕಿಂತ ಹೆಚ್ಚಿದ್ದರೆ ಒಬ್ಬ ಸೋಂಕಿತ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳಿಗೆ ಸೋಂಕು ಪಸರಿಸುತ್ತಾನೆ ಎಂದರ್ಥ. ಶೇ 1ಕ್ಕಿಂತ ಕೆಳಗಿದ್ದರೆ ಆತ ಅತಿ ಕಡಿಮೆ ಜನರಿಗೆ ಸೋಂಕು ಪಸರಿಸುತ್ತಾನೆ ಎಂಬುದರ ಸೂಚಕ. ಹೀಗಾಗಿ ಆರ್‌-ವ್ಯಾಲ್ಯೂ ಶೇ 1 ಮೀರಿದರೆ ಕೋವಿಡ್‌ ಹೆಚ್ಚುತ್ತಿದೆ ಎಂಬುದರ ಸೂಚಕವಾಗಿದೆ. ಈ ಹಿಂದೆ ಜನವರಿಯ 1ರಿಂದ 10ನೇ ತಾರೀಖಿನ ನಡುವೆ ಆರ್‌-ವ್ಯಾಲ್ಯೂ ಶೇ 2.98ಕ್ಕೆ ಏರಿತ್ತು. ಅದು ಈವರೆಗೆ ಭಾರತ ಕಂಡ ಅತಿ ಗರಿಷ್ಠ ಆರ್‌-ಮೌಲ್ಯವಾಗಿದೆ.

ಕರ್ನಾಟಕದಲ್ಲೂ ಆರ್‌-ವ್ಯಾಲ್ಯೂ 1ಕ್ಕಿಂತ ಅಧಿಕ!

ನವದೆಹಲಿ: ಕೋವಿಡ್‌ 4ನೇ ಅಲೆ ಆತಂಕದ ನಡುವೆಯೇ ಕರ್ನಾಟಕದಲ್ಲಿ ಆರ್‌-ವ್ಯಾಲ್ಯೂ (ಒಬ್ಬರಿಂದ ಇನ್ನೊಬ್ಬರಿಗೆ ಕೋವಿಡ್‌ ಹರಡುವ ಸೂಚ್ಯಂಕ) ಶೇ 1 ಮೀರಿದೆ ಎಂದು ಚೆನ್ನೈ ಗಣಿತಶಾಸ್ತ್ರ ವಿಜ್ಞಾನ ಸಂಸ್ಥೆಯ ಅಧ್ಯಯನ ತಿಳಿಸಿದೆ.
‘ಕರ್ನಾಟಕದಲ್ಲಿ ಆರ್‌-ವ್ಯಾಲ್ಯೂ ಶೇ 1.04 ಇದೆ. ಬೆಂಗಳೂರಲ್ಲಿ ಹೆಚ್ಚು ಪ್ರಕರಣ ದಾಖಲಾಗುತ್ತಿರುವ ಕಾರಣ ಸಹಜವಾಗೇ ಕರ್ನಾಟಕದ ಆರ್‌-ವ್ಯಾಲ್ಯೂ ಏರಿದೆ. ಬೆಂಗಳೂರಿನಲ್ಲಿ ಕೂಡ ಕರ್ನಾಟಕದಷ್ಟೇ ಶೇ 1.04 ಆರ್‌ ವ್ಯಾಲ್ಯೂ ದಾಖಲಾಗಿದೆ’ ಎಂದು ವಿಜ್ಞಾನ ಸಂಸ್ಥೆಯ ತಜ್ಞ ಸಿತಾಭಾ ಸಿನ್ಹಾ ತಿಳಿಸಿದ್ದಾರೆ.

Covid Crisis: ಕರ್ನಾಟಕದಲ್ಲಿ ಸತತ ಎಂಟನೇ ದಿನವೂ ಕೋವಿಡ್‌ ಸಾವಿಲ್ಲ..!

61 ಕೋವಿಡ್‌ ಕೇಸು, 49 ಮಂದಿ ಗುಣ

ಬೆಂಗಳೂರು: ರಾಜ್ಯದಲ್ಲಿ ಬುಧವಾರ 61 ಮಂದಿಯಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದ್ದು 49 ಮಂದಿ ಚೇತರಿಸಿಕೊಂಡಿದ್ದಾರೆ. ಯಾವುದೇ ಸಾವು ವರದಿಯಾಗಿಲ್ಲ. ರಾಜ್ಯದಲ್ಲಿ ಕಳೆದ 12 ದಿನಗಳಿಂದ ಕೋವಿಡ್‌ ಸಾವು(Death) ವರದಿಯಾಗಿಲ್ಲ ಎಂಬುದು ಗಮನಾರ್ಹ. ಕೋವಿಡ್‌ ದೈನಂದಿನ ಪರೀಕ್ಷೆಯಲ್ಲಿ ತುಸು ಹೆಚ್ಚಳವಾಗಿದ್ದು ಬುಧವಾರ 9,704 ಮಂದಿ ಪರೀಕ್ಷೆಗೆ(Covid Test) ಒಳಗಾಗಿದ್ದಾರೆ. ಶೇ. 0.62ರ ಪಾಸಿಟಿವಿಟಿ ದರ ದಾಖಲಾಗಿದೆ. ಕಳೆದ ನಾಲ್ಕು ದಿನಗಳಿಂದ ಕೋವಿಡ್‌ನಿಂದ ಚೇತರಿಸಿಕೊಂಡವರಿಗಿಂತ ಸೋಂಕಿತರ ಸಂಖ್ಯೆ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1,499ಕ್ಕೆ ಏರಿಕೆ ಕಂಡಿದೆ. ಏ. 8 ರಂದು ಗದಗದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ವರದಿಯಾದ ಬಳಿಕ ಕೋವಿಡ್‌ನಿಂದ ಮೃತಪಟ್ಟಪ್ರಕರಣ ವರದಿಯಾಗಿಲ್ಲ. ರಾಜ್ಯದಲ್ಲಿ ಈವರೆಗೆ 39.46 ಲಕ್ಷ ಮಂದಿಯಲ್ಲಿ ಕೋವಿಡ್‌ ದೃಢಪಟ್ಟಿದ್ದು 39.04 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,057 ಮಂದಿ ಮರಣವನ್ನಪ್ಪಿದ್ದಾರೆ.

62 ಸಾವಿರ ಮಂದಿಗೆ ಲಸಿಕೆ:

ಬುಧವಾರ 62,387 ಮಂದಿ ಕೋವಿಡ್‌ ಲಸಿಕೆ(Vaccine) ಪಡೆದಿದ್ದಾರೆ. 10,835 ಮಂದಿ ಮೊದಲ ಡೋಸ್‌, 37,222 ಮಂದಿ ಎರಡನೇ ಡೋಸ್‌ ಮತ್ತು 16,408 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 10.54 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.
 

Follow Us:
Download App:
  • android
  • ios