ಕೊರೋನಾ ಮಹಾಮಾರಿ : ಎಚ್ಚರ.. ರಾಜಧಾನಿಗೆ ಕಾದಿದೆ 3ನೇ ಅಲೆ ಭೀತಿ
ದೇಶದಲ್ಲಿ ಚಳಿಗಾಲ ಆರಂಭವಾಗಿದ್ದು ಇದೀಗ ಮತ್ತೊಂದು ಸುತ್ತು ಮಹಾಮಾರಿ ಅಟ್ಟಹಾಸ ಮೆರೆಯಲು ಸಜ್ಜಾಗಿದೆ. ಮತ್ತೆ ಭಾರೀ ಸಂಖ್ಯೆಯಲ್ಲಿ ಕೇಸುಗಳು ಕಂಡು ಬಂದಿದೆ
ನವದೆಹಲಿ (ಅ.30) : ದೆಹಲಿಯಲ್ಲಿ ಸತತ 2ನೇ ದಿನವಾದ ಗುರುವಾರ ಕೂಡಾ 5000ಕ್ಕಿಂತ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜಧಾನಿಯಲ್ಲಿ ಕೊರೋನಾದ ಮೂರನೇ ಅಲೆಯ ಭೀತಿ ಎದುರಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿಯ ಆರೋಗ್ಯ ಖಾತೆ ಸಚಿವ ಸತ್ಯೇಂದ್ರ ಜೈನ್, ‘3ನೇ ಅಲೆ ಎದ್ದಿದೆ ಎಂಬುದನ್ನು ಈಗಲೇ ಹೇಳಲು ಆಗದು. ಇನ್ನೂ 1 ವಾರ ಕಾಯಬೇಕು.
ಆದರೆ ನಾವು ಈಗಾಗಲೇ ಆ ಹಂತ ಪ್ರವೇಶಿಸಿರುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಬುಧವಾರ 5,600 ಹೊಸ ಕೇಸು ದಾಖಲಾಗಿತ್ತು. ಹೊಸ ಪ್ರಕರಣಗಳ ಸಂಖ್ಯೆ 5000 ಗಡಿ ದಾಟಿದ್ದು ಇದೇ ಮೊದಲು.
ಅದರ ಬೆನ್ನಲ್ಲೇ ಗುರುವಾರ ಮತ್ತೆ 5739 ಹೊಸ ಕೇಸು ದಾಖಲಾಗಿವೆ. ಸತತ 2ನೇ ದಿನವೂ 5000ಕ್ಕಿಂತ ಹೆಚ್ಚು ಹೊಸ ಕೇಸು ದಾಖಲಾದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಆತಂಕ ಶುರುವಾಗಿದೆ.