ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ದೆಹಲಿ ಪ್ರವಾಸ ಕೈಗೊಂಡ ಡಿ.ಕೆ.ಶಿವಕುಮಾರ್(CM DK Shivakumar), 57 ಗಂಟೆಗಳ ಕಾಲ ತಂಗಿದ್ದು, ಕಾಂಗ್ರೆಸ್ ಹೈಕಮಾಂಡ್(Congress high command), ಪ್ರಧಾನಿ ಮೋದಿ, ಮತ್ತು ವಿವಿಧ ಕೇಂದ್ರ ಸಚಿವರನ್ನು ಭೇಟಿಯಾದರು. ಈ ಪ್ರವಾಸದಲ್ಲಿ ರಾಜ್ಯದ ಅಭಿವೃದ್ಧಿಗೆ ಸಹಕಾರ ಕೋರಿ ಮಹತ್ವದ ಚರ್ಚೆಗಳನ್ನು ನಡೆಸಿದರು.
ನವದೆಹಲಿ: ‘57 ಗಂಟೆ.., 4 ಪೊಲಿಟಿಕಲ್ ಮೀಟಿಂಗ್... 10 ಸಭೆಗಳು...’ ಇದು ದೆಹಲಿಯಲ್ಲಿ ಮೂರು ದಿನಗಳ ಸಿಎಂ ಡಿ.ಕೆ.ಶಿವಕುಮಾರ್ ಅವರ ದಿನಚರಿ.
ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ದೆಹಲಿ ಪ್ರವಾಸ ಕೈಗೊಂಡಿದ್ದ ಡಿಕೆಶಿ, 57 ಗಂಟೆಗಳ ಕಾಲ ದೆಹಲಿ(Delhi)ಯಲ್ಲಿ ಕಳೆದಿದ್ದು, ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಕೇಂದ್ರ ಸಚಿವರು, ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಮೊದಲ ದಿನ, ಬುಧವಾರ ಕಾಂಗ್ರೆಸ್ ಪಕ್ಷದ ಕಾರ್ಯಾಲಯ, ಪಕ್ಷದ ಹೈಕಮಾಂಡ್ ಅಂತಾ 4 ಪೊಲಿಟಿಕಲ್ ಸಭೆಗಳಲ್ಲಿ ಭಾಗಿಯಾದರು. ಯೂತ್ ಕಾಂಗ್ರೆಸ್ ಕಚೇರಿ, ಮಹಿಳಾ ಕಾಂಗ್ರೆಸ್ ಕಚೇರಿ, ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಕಾರ್ಯಾಲಯಗಳಿಗೆ ಭೇಟಿ ನೀಡಿ, ಮಾತುಕತೆ ನಡೆಸಿದರು. ಬಳಿಕ ಸೋನಿಯಾ ನಿವಾಸಕ್ಕೆ ತೆರಳಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗು ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾದರು. ಸಿಎಂ ಮಾಡಿದ್ದಕ್ಕೆ ಗಾಂಧಿ ಕುಟುಂಬಕ್ಕೆ ಧನ್ಯವಾದ ತಿಳಿಸಿದರು. ಬಳಿಕ, ಕೇಂದ್ರ ನಗರಾಭಿವೃದ್ದಿ ಸಚಿವರನ್ನು ಭೇಟಿ ಮಾಡಿ, ಬೆಂಗಳೂರು ಅಭಿವೃದ್ದಿಗೆ ಸಹಕಾರ ಕೋರಿದರು. ಕರ್ನಾಟಕ ಕೇಡರ್ ನ ಐಎಎಸ್/ ಐಪಿಎಸ್ ಅಧಿಕಾರಿಗಳ ಜೊತೆ ಡಿನ್ನರ್ ಸಭೆ ನಡೆಸಿದರು.
2ನೇ ದಿನ, ಗುರುವಾರ, ನೀತಿ ಆಯೋಗದ ಸಭೆಯಲ್ಲಿ ಭಾಗಿಯಾದರು. ಬಳಿಕ, ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ, ಬಸವ ಪ್ರತಿಮೆ ನೀಡಿ, ಕರ್ನಾಟಕ ಅಭಿವೃದ್ದಿ ಯೋಜನೆಗಳಿಗೆ ಸಹಕಾರ ಕೋರಿದರು. ನಂತರ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದರು. ಅದೇ ದಿನ ನೀತಿ ಆಯೋಗದ ಸಲಹೆಗಾರರ ಜೊತೆ ಸಭೆ ನಡೆಸಿದರು.
3ನೇ ದಿನವಾದ ಶುಕ್ರವಾರ, ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿ ಮಾಡಿದರು. ಬಳಿಕ, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರನ್ನು ಭೇಟಿ ಮಾಡಿ, ರಾಜ್ಯದ ಜಲಯೋಜನೆಗಳು, ಕೇಂದ್ರದ ಅನುದಾನಗಳು ಕುರಿತು ಚರ್ಚೆ ನಡೆಸಿದರು. ಅಂತಿಮವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.


