ರೇಡಿಯೋ ಜಾಕಿ ಆಗಿ ಮೂನ್ಲೈಟ್ ಮಾಡುತ್ತಿದ್ದ ದಿನಗಳನ್ನು ನೆನೆದ ಸಿಜೆಐ ಡಿವೈ ಚಂದ್ರಚೂಡ್!
ಮೂನ್ಲೈಟ್ ವಿಚಾರ ಚರ್ಚೆಗೆ ಗ್ರಾಸವಾಗಿರುವ ನಡುವೆ ದೇಶದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ತಾವು ಮೂನ್ಲೈಟ್ ಮಾಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 20ರ ವಯಸ್ಸಿನಲ್ಲಿ ರೇಡಿಯೋ ಜಾಕಿ ಆಗಿ ಆಲ್ ಇಂಡಿಯಾ ರೇಡಿಯೋಗೆ ಕೆಲಸ ಮಾಡುತ್ತಿದ್ದ ದಿನಗಳನ್ನು ಅವರು ಸ್ಮರಿಸಿದ್ದಾರೆ.
ನವದೆಹಲಿ (ಡಿ.5): ಮೂನ್ಲೈಟ್ ಮಾಡುತ್ತಿದ್ದ ಕಾರಣಕ್ಕೆ ದೇಶದ ಪ್ರತಿಷ್ಠಿತ ಐಟಿ ಕಂಪನಿ ವಿಪ್ರೋ ತನ್ನ ಉದ್ಯೋಗಿಗಳನ್ನು ವಜಾ ಮಾಡಿದ ವಿಚಾರ ಚರ್ಚೆಗೆ ಗ್ರಾಸವಾಗಿರುವ ವೇಳೆ, ದೇಶದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ತಾವು ಕೂಡ ವೃತ್ತಿಜೀವನದ ಆರಂಭಿಕ ದಿನಗಳ ಮೂನ್ಲೈಟ್ ಮಾಡುತ್ತಿದ್ದೆ ಎನ್ನುವುದನ್ನು ಬಹಿರಂಗ ಮಾಡಿದ್ದಾರೆ. ನನ್ನ 20ನೇ ವರ್ಷದ ಆರಂಭಿಕ ದಿನಗಳಲ್ಲಿ ಆಲ್ ಇಂಡಿಯಾ ರೇಡಿಯೋಗೆ ರೇಡಿಯೋ ಜಾಕಿಯಾಗಿ ಮೂನ್ಲೈಟ್ ಮಾಡುತ್ತಿದ್ದೆ ಎಂದು ಶನಿವಾರ ಹೇಳಿದ್ದಾರೆ. ಸಿಜೆಐ ಅವರು ಗೋವಾದ ಇಂಡಿಯಾ ಇಂಟರ್ನ್ಯಾಶನಲ್ ಯೂನಿವರ್ಸಿಟಿ ಆಫ್ ಲೀಗಲ್ ಎಜುಕೇಶನ್ ಅಂಡ್ ರಿಸರ್ಚ್ನ (IIULER) ಮೊದಲ ಶೈಕ್ಷಣಿಕ ಅಧಿವೇಶನವನ್ನು ಉದ್ಘಾಟಿಸಿದ ಬಳಿಕ ಇದನ್ನು ನೆನಪಿಸಿಕೊಂಡಿದ್ದಾರೆ. ಎಐಆರ್ನಲ್ಲಿ ಕೆಲಸ ಮಾಡುವಾಗ, ಪ್ಲೇ ಇಟ್ ಕೂಲ್, ಎ ಡೇಟ್ ವಿತ್ ಯು ಹಾಗೂ ಸಂಡೇ ರಿಕ್ವೆಸ್ಟ್ ಎನ್ನುವ ಕಾರ್ಯಗಳಿಗೆ ಜಾಕಿ ಆಗಿ ಕೆಲಸ ಮಾಡಿದ್ದೆ ಎಂದು ಹೇಳಿದ್ದಾರೆ.
ಬಹುಶಃ ಇಲ್ಲಿರುವ ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ. 20ರ ವಯಸ್ಸಿನ ಆರಂಭಿಕ ವರ್ಷಗಳು ಆಗ ನಾನು ಆಲ್ ಇಂಡಿಯಾ ರೇಡಿಯೋದ ಕೆಲ ಕಾರ್ಯಕ್ರಮಗಳಾದ ಪ್ಲೇ ಇಟ್ ಕೂಲ್ ಅಥವಾ ಎ ಡೇಟ್ ವಿತ್ ಯು ಅಥವಾ ಸಂಡೇ ರಿಕ್ವೆಸ್ಟ್ ಎನ್ನುವ ಕಾರ್ಯಕ್ರಮಗಳಿಗೆ ನಾನು ಜಾಕಿ ಆಗಿ ಮೂನ್ ಲೈಟ್ ಮಾಡುತ್ತಿದ್ದೆ' ಎಂದು ಹೇಳಿದ್ದಾರೆ. ಅವರು 20 ರ ದಶಕದ ಆರಂಭದಲ್ಲಿ ತಮ್ಮ ಜೀವನ, ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (CLAT) ಮತ್ತು ಇತರ ವಿಚಾರಗಳ ಬಗ್ಗೆ ಮಾತನಾಡಿದರು. ಪ್ರಾಯಶಃ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿದ್ದು, ಅವುಗಳು (CLAT) ಅನ್ನು ಭೇದಿಸುವ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ ಎಂದು ಅವರು ಹೇಳಿದರು.
ಯುಯು ಲಲಿತ್ ಸಿಜೆಐ ಸ್ಥಾನದಿಂದ ನಿವೃತ್ತರಾದ ಬಳಿಕ, ದೇಶದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿ ವೈ ಚಂದ್ರಚೂಡ್ ಅವರು ಅಧಿಕಾರ ಸ್ವೀಕಾರ ಮಾಡಿದ್ದರು. ಅವರ ತಂದೆ ವೈವಿ ಚಂದ್ರಚೂಡ್ ಕೂಡ ಸುಪ್ರೀಂ ಕೋರ್ಟ್ನ ಸಿಜೆಐ ಆಗಿ ಸೇವೆ ಸಲ್ಲಿಸಿದ್ದರು. ಸಿಜೆಐ ಆಗಿ ಸೇವೆ ಸಲ್ಲಿಸಿದ ಮೊದಲ ತಂದೆ-ಮಗ ಜೋಡಿಯೂ ಇವರಾಗಿದ್ದಾರೆ.
ಚುನಾವಣಾ ಬಾಂಡ್ ಯೋಜನೆ ವಿಚಾರಣೆ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಒಪ್ಪಿಗೆ
300 ಸಿಬ್ಬಂದಿಯನ್ನು ವಜಾ ಮಾಡಿದ್ದ ವಿಪ್ರೊ: ಕೋವಿಡ್ ಸಾಂಕ್ರಾಮಿಕ (Covid Pandemic) ಸಮಯದಲ್ಲಿ ಮೂನ್ಲೈಟಿಂಗ್ (Moonlighting) (ಒಂದೇ ಸಮಯದಲ್ಲಿ 2 ಕಂಪನಿಗಳಲ್ಲಿ ಕಾರ್ಯನಿರ್ವಹಿಸುವುದು) ಮಾಡಿದ್ದ ತನ್ನ 300 ಸಿಬ್ಬಂದಿಗಳನ್ನು ವಿಪ್ರೋ (Wipro) ಕಂಪನಿ ಕೆಲಸದಿಂದ ವಜಾ ಮಾಡಿತ್ತು. ಸಂಸ್ಥೆಯ ಅಧ್ಯಕ್ಷ ರಿಶದ್ ಪ್ರೇಮ್ಜೀ ಕೂಡ ಇದನ್ನು ಖಚಿತಪಡಿಸಿದ್ದರು. ಕೋವಿಡ್ ವೇಳೆ ನಮ್ಮ ಕಂಪನಿಯ 300 ಸಿಬ್ಬಂದಿಗಳು, ನಮ್ಮ ಪ್ರತಿಸ್ಪರ್ಧಿ ಕಂಪನಿಗಳಲ್ಲೂ ಕೆಲಸ ಮಾಡುತ್ತಿದ್ದರು. ಇಂಥ ನಡತೆ ಕಾನೂನಿಗೆ ವಿರುದ್ಧವಾಗಿದ್ದು, ಅದರಂತೆ ನಾವು ಅಂಥ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದೇವೆ. ಮೂನ್ಲೈಟಿಂಗ್ ಕುರಿತು ಇತ್ತೀಚೆಗೆ ತಾವು ನೀಡಿದ್ದ ಹೇಳಿಕೆಗೆ ಬದ್ಧ ಎಂದು ಕಾರ್ಯಕ್ರಮವೊಂದರಲ್ಲಿ ರಿಶದ್ ಪ್ರೇಮ್ಜೀ ಹೇಳಿದ್ದರು.
ಉಮೇಶ್ ರೆಡ್ಡಿಗೆ ರಿಲೀಫ್, ತೀಸ್ತಾಗೆ ಬೇಲ್ ದೇಶದ 49ನೇ ಸಿಜೆಐ ಯುಯು ಲಲಿತ್ ನೀಡಿದ್ದ ಪ್ರಮುಖ ತೀರ್ಪುಗಳು!
ಇನ್ನು ಕರ್ನಾಟಕದ ಐಟಿ ಸಚಿವ ಸಿಎನ್ ಅಶ್ವತ್ಥ ನಾರಾಯಣ ಕೂಡ ಟೆಕ್ಕಿಗಳಿಗೆ ಮಹತ್ವದ ಸಂದೇಶ ನೀಡಿದ್ದರು. ಮೂನ್ ಲೈಟ್ ಮಾದರಿಯನ್ನು ವಿರೋಧಿಸುತ್ತಿರುವ ಭಾರತದ ಐಟಿ ದಿಗ್ಗಜರಾದ ಇನ್ಫೋಸಿಸ್, ಟಿಸಿಎಸ್, ವಿಪ್ರೋ ಮತ್ತಿತರ ಸಂಸ್ಥೆಗಳಿಗೆ ತಿಳಿಯದೆ ತನ್ನ ತೂಕವನ್ನು ಇಟ್ಟು ಮೂನ್ಲೈಟ್ ಮಾಡುವವರು ರಾಜ್ಯವನ್ನು ತೊರೆಯಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ. ಕಂಪೆನಿಗೆ ಮೋಸ ಮಾಡಿ ಫ್ರೀಲ್ಯಾನ್ಸಿಂಗ್ ಮಾಡುವುದು ಮೋಸ ಮತ್ತು ಹಾಗೆ ಮಾಡಲು ಬಯಸುವ ವೃತ್ತಿಪರರು ರಾಜ್ಯದಿಂದ ಹೊರಹೋಗಬೇಕು ಎಂದಿದ್ದಾರೆ. ರೀತಿ ನೀತಿ ಮತ್ತು ನೈತಿಕವಾಗಿ, ಮೂನ್ಲೈಟಿಂಗ್ ಮಾಡಲು ಓರ್ವ ಉದ್ಯೋಗಿಗೆ ಹೇಗೆ ಅನುಮತಿಸಬಹುದು? ಮೂನ್ಲೈಟ್ ಯಾವುದೇ ರೀತಿಯಲ್ಲಿ ನ್ಯಾಯೋಚಿತವಲ್ಲ. ಇದು ಅಕ್ಷರಶಃ ಮೋಸವಾಗಿದೆ ಎಂದಿದ್ದಾರೆ'.