ಕಾಕ್ರೋಚ್ ಜನತಾ ಪಾರ್ಟಿ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ ಬೆನ್ನಲ್ಲೇ ಇದೀಗ ಇರುವೆ ಪಕ್ಷಗಳು ಹುಟ್ಟಿಕೊಂಡಿದೆ. ಬಿಜೆಪಿ ಮಾಜಿ ನಾಯಕ ಇದೀಗ ಚೀಂಟಿ ಜನತಾ ಪಾರ್ಟಿ ಆರಂಭಿಸಿದ್ದಾರೆ. 2027ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದೆ.
ಲಖನೌ (ಜೂ.07) ಭಾರತದಲ್ಲಿ ಇದೀಗ ಜಿರಳೆ, ಇರುವೆ, ಕಂಬಳಿ ಹುಳ ಸೇರಿದಂತೆ ಹಲವು ಹೆಸರುಗಳ ಸೋಶಿಯಲ್ ಮೀಡಿಯಾ ಮೂಲಕ ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಕಾಕ್ರೋಚ್ ಜನತಾ ಪಾರ್ಟಿ ಸೋಶಿಯಲ್ ಮೀಡಿಯಾ ಮೂಲಕ ಜನ್ಮತಾಳಿ ದೆಹಲಿಯಲ್ಲಿ ಪ್ರತಭಟನೆ ನಡೆಸಿದೆ. ಇದರ ಬೆನ್ನಲ್ಲೇ ಇದೀಗ ಇರುವೆಗಳ ಪಾರ್ಟಿ ಆರಂಭಗೊಂಡಿದೆ. ಮಾಜಿ ಬಿಜೆಪಿ ನಾಯಕ ಅನೂಪ್ ರಾಘವ್ ಚೀಂಟಿ ಜನತಾ ಪಾರ್ಟಿ(ಸಿಜೆಪಿ) ಆರಂಭಿಸಿದ್ದಾರೆ. 2027ರ ವಿಧಾನಸಭೆ ಚುನಾವಣೆಯಲ್ಲಿ ಈ ಚೀಂಟಿ ಜನತಾ ಪಾರ್ಟಿಸ್ಪರ್ಧಿಸಲಿದೆ ಎಂದಿದ್ದಾರೆ.
ಇರುವೆಗೆ ಆನೆ ನಿಯಂತ್ರಿಸುವ ಶಕ್ತಿ ಇದೆ
ಉತ್ತರ ಪ್ರದೇಶದ ಮಾಜಿ ಬಿಜೆಪಿ ನಾಯಕ ಅನೂಪ್ ರಾಘವ್ ಈ ಹೊಸ ಪಾರ್ಟಿ ಆರಂಭಿಸಿದ್ದಾರೆ. ಈ ಕುರಿತು ಮಾತನಾಡಿರುವ ಅನೂಪ್ ರಾಘವ್ ಒಂದು ಸಣ್ಣ ಇರುವೆಗೆ ಆನೆಯನ್ನು ನಿಯಂತ್ರಿಸುವ ಶಕ್ತಿ ಇದೆ. ಹೀಗಾಗಿ ಈ ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ, ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯ, ಜನರು ಒಗ್ಗಟ್ಟಾಗಿ ನಿಂತರೆ ದೇಶದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯವಿದೆ. ಯಾವ ಪಕ್ಷವನ್ನು ಬೇಕಾದರು ಸೋಲಿಸಬಹುದು. ಹೀಗಾಗಿ ನಾವು ಚೀಂಟಿ (ಇರುವೆ) ಜನತಾ ಪಾರ್ಟಿ ಆರಂಭಿಸಿದ್ದೇವೆ. ಇರುವೆ ನಮ್ಮ ಸಾಂಕೇತಿಕ ಚಿಹ್ನೆಯಾಗಿದೆ ಎಂದಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕ ಬೆಂಬಲ ನೋಡಿ ಅನೂಪ್ ರಾಘವ್ ಇದೇ ಮಾದರಿಯಲ್ಲಿ ಚೀಂಟಿ ಜನತಾ ಪಾರ್ಟಿ ಆರಂಭಿಸಿದ್ದಾರೆ. ಇತ್ತೀಚೆಗೆ ತಮಿಳುನಾಡು ಚುನಾವಣೆಯಲ್ಲಿ ನಟ ವಿಜಯ್ ಜೊಸೆಫ್ ಹೊಸ ಪಕ್ಷ ಆರಂಭಿಸಿ ಮುಖ್ಯಮಂತ್ರಿಯಾಗಿದ್ದಾರೆ. ಈ ಆತ್ಮವಿಶ್ವಾಸದಲ್ಲಿ ಅನೂಪ್ ರಾಘವ್ ಹೊಸ ಪಾರ್ಟಿ ಆರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾ ಆಂದೋಲವನ್ನು ಚುನಾವಣೆಗೆ ಬಳಸಿಕೊಂಡು ಅಲೆ ಸೃಷ್ಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಮೀರತ್ನಿಂದ ಪ್ರಚಾರ ಆರಂಭ
ದೇಶದ ಯುವ ಸಮೂಹ, ನಿರ್ಲಕ್ಷ್ಯಕ್ಕೆ ಒಳಗಾದ ಜನ, ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಈ ಪಾರ್ಟಿ ತಲುಪಲಿದೆ ಎಂದು ಅನೂಪ್ ರಾಘವ್ ಹೇಳಿದ್ದಾರೆ. ಮೀರತ್ನಿಂದ ಪ್ರಚಾರ ಕಾರ್ಯ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದಿದ್ದಾರೆ. 2027ರ ಉತ್ತರ ಪ್ರದೇಶ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹೋರಾಟ ಆರಂಭಗೊಳ್ಳಲಿದೆ. ಇದಕ್ಕಾಗಿ ತಯಾರಿ ಆರಂಭಗೊಂಡಿದೆ ಎಂದು ಅನೂಪ್ ರಾಘವ್ ಹೇಳದ್ದಾರೆ.
ದೇಶದ ತುಂಬಾ ಜಿರೆಳೆ, ಇರುವೆ
ಕಾಕ್ರೋಚ್ ಜನತಾ ಪಾರ್ಟಿ ಕುರಿತು ಪರ ವಿರೋಧಗಳು ವ್ಯಕ್ತವಾಗುತ್ತಿದೆ. ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಗಳ ಬೆನ್ನಲ್ಲೇ ಇದೀಗ ಚೀಂಟಿ ಜನತಾ ಪಾರ್ಟಿ ಹುಟ್ಟಿಕೊಂಡಿದೆ. ಹೊಸ ಪಾರ್ಟಿಯ ಹೋರಾಟ, ಚುನಾವಣಾ ಪ್ರಚಾರ ಇದೀಗ ತೀವ್ರ ಕುತೂಹಲ ಮೂಡಿಸಿದೆ.


