ಒಡಿಶಾದಲ್ಲಿ ವಿಚಕ್ಷಣ ದಳದ ದಾಳಿ ವೇಳೆ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಬಳಿಯಿದ್ದ ನಗದನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾರೆ.

ಭುವನೇಶ್ವರ: ನಿನ್ನೆಯಷ್ಟೇ ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ವಿಚಕ್ಷಣ ದಳದ ದಾಳಿಗೆ ಹೆದರಿ ಸಿಕ್ಕಿ ಬೀಳುವ ಭಯದಲ್ಲಿ ವಿಲೇಜ್ ಅಕೌಂಟೆಂಟ್‌ ಒಬ್ಬರು ತಾವು ಪಡೆದ ಲಂಚದ ಹಣವನ್ನು ನುಂಗಿದಂತಹ ಘಟನೆ ನಡೆದ ಬಗ್ಗೆ ವರದಿಯಾಗಿತ್ತು. ಈ ಘಟನೆ ಮಾಸುವ ಮೊದಲೇ ಈಗ ಒಡಿಶಾದಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿದೆ. ಮನೆ ವಿಚಕ್ಷಣ ದಳದ ದಾಳಿ ನಡೆಯುವುದು ತಿಳಿಯುತ್ತಿದ್ದಂತೆ ಸರ್ಕಾರಿ ಅಧಿಕಾರಿಯೊಬ್ಬ ತಮ್ಮ ಬಳಿ ಅಕ್ರಮವಾಗಿ ಸಂಗ್ರಹಿಸಿದ್ದ ನೋಟುಗಳನ್ನು ಕಿಟಿಕಿಯ ಮೂಲಕ ಹೊರಗೆ ಎಸೆದಂತಹ ಘಟನೆ ನಡೆದಿದೆ. ಈತನ ಬಳಿಯಿಂದ 2.1 ಕೋಟಿ ನಗದನ್ನು ವಿಚಕ್ಷಣ ದಳದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Add Asianetnews Kannada as a Preferred SourcegooglePreferred

ಒಡಿಶಾದ ರಾಜ್ಯ ಗ್ರಾಮೀಣ ಅಭಿವೃದ್ಧಿ ವಿಭಾಗದಲ್ಲಿ ಮುಖ್ಯ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಬೈಕುಂಠನಾಥ್ ಸಾರಂಗಿ ಎಂಬಾತನೇ ವಿಚಕ್ಷಣ ದಳದ ದಾಳಿ ವೇಳೆ ಹೀಗೆ ತನ್ನ ಫ್ಲಾಟ್‌ನ ಕಿಟಿಕಿಯಿಂದ ಹೊರಗೆ 500 ರೂಪಾಯಿಯ ಬಂಡಲ್‌ಗಳ ರಾಶಿಯನ್ನು ಹೊರಗೆ ಎಸೆದು ಹಣದ ಮಳೆಗೆ ಕಾರಣವಾದ ವ್ಯಕ್ತಿ. ಈತ ಮಾಡಿರುವ ಅಕ್ರಮ ಆಸ್ತಿಗೆ ಸಂಬಂಧಿಸಿಂತೆ ವಿಚಕ್ಷಣ ದಳದ ಅಧಿಕಾರಿಗಳು ಒಟ್ಟು 7 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಈತ ದಾಳಿ ವಿಚಾರ ತಿಳಿಯುತ್ತಿದ್ದಂತೆ ತಾನು ವಾಸವಿದ್ದ ಕಿಟಕಿಯಿಂದ 500 ರೂ.ನ ನೋಟುಗಳ ಬಂಡಲ್‌ಗಳನ್ನು ಕಿಟಕಿಯಿಂದ ಹೊರಗೆಸೆದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭುವನೇಶ್ವರದ ಪಿಡಿಎನ್ ಎಕ್ಸೋಟಿಕಾದಲ್ಲಿ ಸಾರಂಗಿ ಅವರ ಫ್ಲಾಟ್ ಇತ್ತು. ಆ ಪ್ರದೇಶದಿಂದ 1 ಕೋಟಿ ನಗರದನ್ನು ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಅಂಗುಲ್‌ನಲ್ಲಿರುವ ಅವರ ಮತ್ತೊಂದು ನಿವಾಸದಲ್ಲಿ 1.1 ಕೋಟಿ ನಗದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಚಕ್ಷಣ ದಳದ ಅಧಿಕಾರಿಗಳು ಮನೆಗೆ ಬರುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸಾರಂಗಿ ಭುವನೇಶ್ವರದಲ್ಲಿರುವ ತಮ್ಮ ಫ್ಲಾಟ್‌ನ ಕಿಟಕಿಯಿಂದ ಹೊರಗೆ ಎಸೆದು 500 ರೂ.ಗಳ ನೋಟುಗಳ ಬಂಡಲ್‌ಗಳನ್ನು ವಿಲೇವಾರಿ ಮಾಡಲು ಪ್ರಯತ್ನಿಸಿದರು. ನಂತರ ಅವುಗಳನ್ನು ಸಾಕ್ಷಿಗಳ ಸಮ್ಮುಖದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲಿ ವಶಕ್ಕೆ ಪಡೆದ ಹಣವನ್ನು ಲೆಕ್ಕ ಮಾಡಲು ಹಣ ಲೆಕ್ಕ ಮಾಡುವ ಯಂತ್ರವನ್ನು ತರಿಸಲಾಗಿತ್ತು.

ಸಾರಂಗಿ ತಮ್ಮ ಆದಾಯಕ್ಕಿಂತಲೂ ಅಧಿಕ ಆಸ್ತಿಯನ್ನು ಹೊಂದಿದ್ದಾರೆ ಎಂಬ ಆರೋಪದ ಮೇಲೆ ಈ ದಾಳಿ ನಡೆದಿದೆ. ಅಂಗುಲ್, ಭುವನೇಶ್ವರ, ಪಿಪಿಲಿ ಅಲ್ಲಿರುವ ಏಳು ಸ್ಥಳಗಳ ಮೇಲೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಅಂಗುಲ್‌ನಕರದಗಾಡಿಯಲ್ಲಿರುವ ಎರಡಂತಸ್ತಿನ ಒಂದು ಮನೆ, ಭುವನೇಶ್ವರದ ಡುಮ್ಡುಮಾದ ಪಿಎನ್‌ಡಿ ಎಕ್ಸೋಟಿಕಾದಲ್ಲಿರುವ ಫ್ಲಾಟ್ ಸಂಖ್ಯೆ 102, ಸಿಯುಲಾ ಪಿಪಿಲಿ ಪುರಿಯಲ್ಲಿ ಒಂದು ಫ್ಲಾಟ್, ಅಂಗುಲ್‌ನ ಶಿಕ್ಷ್ಯಕಪದದಲ್ಲಿರುವ ಸಂಬಂಧಿಯ ಮನೆ, ಅಂಗುಲ್‌ನ ಲೋಕೈಪಾಸಿ ಗ್ರಾಮದಲ್ಲಿರುವ ತಂದೆಯ ಮನೆ, ಅಂಗುಲ್‌ನ ಮತಿಯಾಸಾಹಿಯಲ್ಲಿ ಎರಡು ಅಂತಸ್ತಿನ ತಂದೆಯ ಕಟ್ಟಡ, . ಭುವನೇಶ್ವರದ ಆರ್‌ಡಿ ಯೋಜನೆ ಮತ್ತು ರಸ್ತೆಯ ಮುಖ್ಯ ಎಂಜಿನಿಯರ್‌ನಲ್ಲಿರುವ ಕಚೇರಿ ಕೊಠಡಿ ಮುಂತಾದ ಕಡೆಗಳಲ್ಲಿ ದಾಳಿ ನಡೆದಿದೆ.