ಸಮಸ್ಯೆ ಬಗೆಹರಿಸಲು ಸ್ಥಳಕ್ಕೆ ತೆರಳಿದ ಬಿಜೆಪಿ ನಾಯಕನ ಕಾರಿಗೆ ಲಾರಿ ಡಿಕ್ಕಿ ಮಾಡಿಸಿ ಪೆಟ್ರೋಲ್ ಸುರಿದು ಜೀವಂತ ಸುಟ್ಟ ಘಟನೆ ನಡೆದಿದೆ. ಕಾರಿನಲ್ಲಿದ್ದ ಬಿಜೆಪಿ ಮುಖಂಡ ಸೇರಿ ಮೂವರು ಸಜೀವ ದಹನವಾಗಿದ್ದಾರೆ.
ಚತ್ತೀಸಘಡ (ಜೂ.18) ಮರಳುಗಾರಿಕೆ ಕುರಿತು ಹಲವು ವರ್ಷಗಳಿಂದ ಇದ್ದ ವಿವಾದ ಬಗೆಹರಿಸಲು ತೆರಳಿದ ಬಿಜೆಪಿ ಮುಖಂಡನ ಕಾರಿಗೆ ಎರಡು ಲಾರಿ ಡಿಕ್ಕಿ ಮಾಡಿಸಿ ಬಳಿಕ ಪೆಟ್ರೋಲ್ ಸುರಿದು ಜೀವಂತ ಸುಟ್ಟ ಘಟನೆ ಚತ್ತೀಸಘಡದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ. ಕಾರಿನಲ್ಲಿ ಬಿಜೆಪಿ ಮುಖಂಡ ಸೇರಿ ಮೂವರು ತೆರಳುತ್ತಿದ್ದಾಗ ದುರ್ಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಮೂವರು ಸಜೀವ ದಹನವಾಗಿದ್ದಾರೆ.
ಬಿಜೆಪಿ ನಾಯಕ ಭಾರತ್ ಸಿಂಗ್ ಸಜವ ದಹನ
ಚತ್ತೀಸಘಡದ ಜನಪದ ಪಂಚಾಯತ್ ಮಾಜಿ ಅಧ್ಯಕ್ಷ ಭಾರತ್ ಸಿಂಗ್ ಅಲಿಯಾಸ್ ಲಲ್ಲಾ ಸಿಂಗ್ ಸಜೀವ ದಹನವಾಗಿದ್ದಾರೆ. ನೌಗಿನ್ ಗ್ರಾಮದಲ್ಲಿ ನಡೆಯುತ್ತಿದ್ದ ಮರಳುಗಾರಿಕೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿತ್ತು. ಎರಡು ಗುಂಪುಗಳ ನಡುವೆ ಜಗಳದಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ದೂರು ದಾಖಲಾಗಿತ್ತು. ಪ್ರಕರಣದಿಂದ ಮರಳುಗಾರಿಕೆಗೆ ಬ್ರೇಕ್ ಬಿದ್ದಿತ್ತು. ಕಳೆದ ಕೆಲ ವರ್ಷಗಳಿಂದ ಈ ಸಮಸ್ಯೆ ಹಾಗೇ ಮುಂದುವರಿದಿತ್ತು. ಈ ಕುರಿತು ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷನಾಗಿ, ಬಿಜೆಪಿ ಮುಖಂಡನಾಗಿ ಈ ಸಮಸ್ಯೆ ಬಗೆಹರಿಸಲು ಎರಡು ಗುಂಪುಗಳ ನಡುವೆ ಮಾತುಕತೆ ನಡೆಸಿದ್ದರು.
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುರ್ಷ್ಕರ್ಮಿಗಳು
ಸಂಧಾನ ವಿಚಾರವಾಗಿ ಮಾತನಾಡಲು ಮತ್ತಿಬ್ಬರ ಜೊತೆ ಭಾರತ್ ಸಿಂಗ್ ಕಾರಿನಲ್ಲಿ ತೆರಳಿದ್ದಾರೆ. ಸೋನ್ಹತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ಮರಳು ಮಾಫಿಯಾ ದಂಧೆಕೋರರು ಲಾರಿ ಮೂಲಕ ಆಗಮಿಸಿ ಭಾರತ್ ಸಿಂಗ್ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಭಾರತ್ ಸಿಂಗ್ ಎಸ್ಕೇಪ್ ಆಗಬಾರದು ಅನ್ನೋ ಕಾರಣಕ್ಕೆ ಮತ್ತೊಂದು ಲಾರಿಯನ್ನು ಬಳಸಿ ಕಾರು ಟ್ರಾಪ್ ಮಾಡಲಾಗಿದೆ. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ.
ಕಾರು ಡಿಕ್ಕಿಯಾದ ಪರಿಣಾಮ ಗಾಯಗೊಂಡ ಭಾರತ್ ಸಿಂಗ್ ಸೇರಿದಂತೆ ಮೂವರು ತಕ್ಷಣವೇ ಕಾರಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಇಷ್ಟೇ ಅಲ್ಲ ಹೊರಬರದಂತೆ ತಡೆಯಲು ಮತ್ತೊಂದು ಲಾರಿ ಮೂಲಕವೂ ಅಪಘಾತ ಮಾಡಿಸಲಾಗಿದೆ. ಗಾಯಗೊಂಡ ಮೂವರು ಏನಾಗುತ್ತಿದೆ ಅನ್ನೋವಷ್ಟರಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಪ್ರಕರಣ ದಾಖಲಾಗಿ ತನಿಖೆ ಆರಂಭಗೊಂಡಿದೆ. ಈ ಪ್ರಕರಣ ಸಂಬಂಧ 9 ಮಂದಿ ವಿರುದ್ದ ದೂರು ದಾಖಲಾಗಿದೆ. ಘಟನೆಯನ್ನು ಚತ್ತೀಸಘಡ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದೆ.


