ಮೋದಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು ರಾಹುಲ್ ಮಾತು ಕೇಳಿಯಂತೆ!
ಕೊನೆಗೂ ರಾಹುಲ್ ಗಾಂಧಿ ಮಾತಿಗೆ ಮಣೆ ಹಾಕಿದ ಕೇಂದ್ರ ಸರ್ಕಾರ/ ಸಿಎಂಗಳ ಮಾತಿಗೆ ಬೆಲೆ ನೀಡಿದ ಪ್ರಧಾನಿ ನರೇಂದ್ರ ಮೋದಿ/ ಮೋದಿ ಸರ್ಕಾರದ ನಡೆಗೆ ಮೆಚ್ಚುಗೆ ಸೂಚಿಸಿದ ಕಾಂಗ್ರೆಸ್
ನವದೆಹಲಿ(ಮೇ 13) ಕೇಂದ್ರ ಸರ್ಕಾರ ಅಂತೂ ಕೊನೆಗೂ ರಾಹುಲ್ ಗಾಂಧಿ ಮಾತಿಗೆ ಬೆಲೆ ನೀಡಿದೆ. ಇದಕ್ಕೆ ನಾವು ಧನ್ಯವಾದ ಸಲ್ಲಿಸುತ್ತಿದ್ದೇವೆ. ಈ ಮಾತನ್ನು ಕಾಂಗ್ರೆಸ್ ಬುಧವಾರ ಹೇಳಿದೆ.
ಪ್ರಧಾನಿ ಮೋದಿ ಅವರೊಂದಿಗೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಸಭೆಯಲ್ಲಿ ರಾಜ್ಯಕ್ಕೆ ಹೆಚ್ಚಿನ ಅಧಿಕಾರ ನೀಡನಬೇಕು ಎಂಬ ಬೇಡಿಕೆ ವ್ಯಕ್ತವಾಗಿದ್ದು ಅದಕ್ಕೆ ಕೇಂದ್ರ ಸ್ಪಂದಿಸಿದೆ ಎಂದು ಕಾಂಗ್ರೆಸ್ ಹೇಳಿದೆ.
ಕೊರೋನಾದಿಂದ ಹೊರಬರಲು ಮೋದಿ ಘೋಷಿಸಿದ ಬಹುದೊಡ್ಡ ಪ್ಯಾಕೇಜ್!
ಎಲ್ಲ ರಾಜ್ಯಗಳ ಸಿಎಂ ಸಲಹೆ ಪಡೆದುಕೊಂಡೇ ನರೇಂದ್ರ ಮೋದಿ ಗ್ರೀನ್, ಆರೆಂಜ್, ರೆಡ್ ವಲಯಗಳನ್ನು ವಿಭಾಗಿಸಿದ್ದರು. ನಾಯಕ ರಾಹುಲ್ ಗಾಂಧಿ ಮಾತು ಕೇಳಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಇನ್ನು ಮುಂದೆಯೂ ಕೇಂದ್ರ ಸರ್ಕಾರ ವಿಪಕ್ಷಗಳ ಮಾತಿಗೆ ಬೆಲೆ ನೀಡುತ್ತದೆ ಎಂದು ಭಾವಿಸಿದ್ದೇವೆ ಎಂದು ಕಾಂಗ್ರೆಸ್ ಹೇಳಿದೆ.
ಇನ್ನೊಮ್ಮೆ ರಾಜ್ಯಗಳ ಸಿಎಂ ಜತೆ ಪ್ರಧಾನಿ ಮಾತನಾಡಬೇಕು. ಸಂಯುಕ್ತ ವ್ಯವಸ್ಥೆ ಬಲಪಡಿಸುವ ಕ್ರಮ ತೆಗೆದುಕೊಳ್ಳಬೇಕು . ಕೊರೋನಾ ವಿರುದ್ಧ ಹೋರಾಡಲು ಎಲ್ಲರನ್ನು ಸಂಘಟಿತರನ್ನಾಗಿಸಬೇಕಾದದ್ದು ಕೇಂದ್ರದ ಕರ್ತವ್ಯ ಎಂದು ಹೇಳಿದೆ.
ನರೇಂದ್ರ ಮೋದಿ ಸರ್ಕಾರ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ಟೀಕೆ ಮಾಡಿತ್ತು. ರೈತರು ಮತ್ತು ಕಾರ್ಮಿಕರ ನೆರವಿಗೆ ನಿಲ್ಲುವ ಕೆಲಸ ಆಗಿಲ್ಲ ಎಂದು ಟೀಕೆ ಮಾಡಿತ್ತು.