ದೇಶದಲ್ಲಿ ಟೋಲ್‌ ಪ್ಲಾಜಾಗಳಲ್ಲಿ ಆಗುತ್ತಿರುವ ಟ್ರಾಫಿಕ್‌ ಜಾಮ್‌ ತಡೆಯಲು ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು. ಹೊಸ ತಂತ್ರಜ್ಞಾನಗಳ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ಡನೆಸುತ್ತಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ದೇಶದಲ್ಲಿ ಟೋಲ್‌ ಪ್ಲಾಜಾಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನೊಂದು ಕಡೆ ಟೋಲ್‌ಗಳಲ್ಲಿ ಉದ್ದುದ್ದ ಕ್ಯೂ ಇರುತ್ತದೆ. ಮೊದಲು ಟೋಲ್‌ಗಳಲ್ಲಿ ಕಟ್ಟಿಸಿಕೊಳ್ಳುತ್ತಿದ್ದ ಹಣದ ಬದಲು ಈಗ ಫಾಸ್ಟ್‌ಟ್ಯಾಗ್‌ ಅನ್ನು ವಾಹನಗಳಿಗೆ ಅಳವಡಿಸಿದರೂ ಸಹ ಈಗಲೂ ಅನೇಕ ಟೋಲ್‌ ಪ್ಲಾಜಾಗಳಲ್ಲಿ ಉದ್ದುದ್ದ ಕ್ಯೂ ಇರುತ್ತದೆ. ಇದರಿಂದ ಸಾಮಾನ್ಯ ಜನರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿರುತ್ತಾರೆ. ಈ ಬಗ್ಗೆ ಕೇಂದ್ರ ಹೆದ್ದಾರಿ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮಾತನಾಡಿದ್ದು, ಕೇಂದ್ರ ಸರ್ಕಾರ ಟೋಲ್‌ ಪ್ಲಾಜಾಗಳಲ್ಲಿ ಉದ್ದುದ್ದ ಕ್ಯೂಗಳನ್ನು ತಡೆಯುವುದನ್ನು ಬಯಸಿದೆ ಎಂದು ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ಟೋಲ್‌ ಪ್ಲಾಜಾಗಳನ್ನು ದೇಶದಲ್ಲಿ ತಡೆಯಲು ಕೆಂದ್ರ ಸರ್ಕಾರ ಹೊಸ ತಂತ್ರಜ್ಞಾನಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಮುಂದಿನ 6 ತಿಂಗಳಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ರಾಜ್ಯಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗಟ್ಕರಿ, ಟೋಲ್‌ ಪ್ಲಾಜಾಗಳಿಂದ ನಿಧಾನಗತಿಯ ಟ್ರಾಫಿಕ್‌ ಹಾಗೂ ಉದ್ದುದ್ದ ಕ್ಯೂಗಳನ್ನು ಸೃಷ್ಟಿ ಮಾಡಿದೆ, ಇದಕ್ಕೆ ಅಂತ್ಯ ಕಾಣಿಸುವುದು ಕೇಂದ್ರ ಸರ್ಕಾರದ ಉದ್ದೇಶ ಎಂದೂ ಕೇಂದ್ರ ಸಚಿವರು ಹೇಳಿದರು. ಅಲ್ಲದೆ, ಒಂದೇ ದಿಕ್ಕಿನಲ್ಲಿ 60 ಕಿ.ಮೋ ಒಳಗೆ ಟೋಲ್‌ ಪ್ಲಾಜಾಗಳಿರುವುದು ಕಾನೂನು ವಿರೋಧಿ ಎಂಬ ರಾಜ್ಯಸಭೆ ಸದಸ್ಯರ ಪ್ರಶ್ನೆಗಳಿಗೂ ನಿತಿನ್‌ ಗಡ್ಕರಿ ಉತ್ತರಿಸಿದ್ದಾರೆ. 

5 ವರ್ಷದ ಬಳಿಕ ಪೆಟ್ರೋಲ್ ಕಂಪ್ಲೀಟ್‌ ಬ್ಯಾನ್? ನಿತಿನ್ ಗಡ್ಕರಿ ಹೀಗೆ ಹೇಳಿದ್ದೇಕೆ?

ಹೊಸ ವ್ಯವಸ್ಥೆಯಡಿ ಏನಿರುತ್ತೆ..?
ಉಪಗ್ರಹ ಆಧಾರಿತ ಟೋಲ್‌ ವ್ಯವಸ್ಥೆ ಹಾಗೂ ನಂಬರ್‌ ಪ್ಲೇಟ್‌ಗಳನ್ನು ಆಧರಿಸಿ ಟೋಲ್‌ ಎಂಬ ಎರಡು ಆಯ್ಕೆಗಳ ಬಗ್ಗೆ ಕೇಂದ್ರ ಸರ್ಕಾರ ಚರ್ಚೆ ನಡೆಸುತ್ತಿದೆ. ಉಪಗ್ರಹ ಆಧಾರಿತ ಟೋಲ್‌ ವ್ಯವಸ್ಥೆಯಲ್ಲಿ ಕಾರಿನಲ್ಲಿ ಜಿಪಿಎಸ್‌ ಇರುತ್ತದೆ ಹಾಗೂ ಟೋಲ್‌ ಅನ್ನು ಪ್ರಯಾಣಿಕರ ಬ್ಯಾಂಕ್‌ ಖಾತೆಯಿಂದ ಹಣ ಹಿಂಪಡೆಯಲಾಗುತ್ತದೆ ಎಂದೂ ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಉತ್ತರಿಸಿದ್ದಾರೆ. ಫಾಸ್ಟ್ಯಾಗ್‌ ಬದಲು ಉಪಗ್ರಹವನ್ನು ಬಳಸಿಕೊಂಡು ಜಿಪಿಎಸ್‌ ಅನ್ನು ಜಾರಿಗೆ ತರುವ ಪ್ರಕ್ರಿಯೆಯತ್ತ ಸರ್ಕಾರ ಸಾಗುತ್ತಿದ್ದು, ಇದರ ಆಧಾರದ ಮೇಲೆ ಸುಂಕವನ್ನು ಸಂಗ್ರಹಿಸಲಾಗುತ್ತದೆ. ಅಲ್ಲದೆ, ನಂಬರ್‌ ಪ್ಲೇಟ್‌ನಲ್ಲೂ ತಂತ್ರಜ್ಞಾನ ಇರುತ್ತದೆ ಹಾಗೂ ಭಾರತದಲ್ಲಿ ಒಳ್ಳೆಯ ತಂತ್ರಜ್ಞಾನಗಳು ಲಭ್ಯವಿದೆ ಎಂದೂ ನಿತಿನ್‌ ಗಡ್ಕರಿ ಹೇಳಿದ್ದಾರೆ. 

ನಾವು ಸೂಕ್ತ ತಂತ್ರಜ್ಞಾನವನ್ನು ಆಯ್ಕೆ ಮಾಡಲಿದ್ದೇವೆ. ಈ ಬಗ್ಗೆ ನಾವು ಅಧಿಕೃತ ನಿರ್ಧಾರ ಕೈಗೊಳ್ಳದಿದ್ದರೂ,ನನ್ನ ಪ್ರಕಾರ ನಂಬರ್‌ ಪ್ಲೇಟ್‌ ಆಧರಿಸಿದ ತಂತ್ರಜ್ಞಾನದಲ್ಲಿ ಯಾವುದೇ ಟೋಲ್‌ ಪ್ಲಾಜಾಗಳಿರುವುದಿಲ್ಲ. ಹಾಗೂ ಅತ್ಯಾಧುನಿಕ ಗಣಕೀಕೃತ ಡಿಜಿಟಲ್ ವ್ಯವಸ್ಥೆಯ ಮೂಲಕ ಟ್ರಾಫಿಕ್‌ ಜಾಮ್‌ಗೆ ಪರಿಹಾರ ನೀಡಬಹುದು.ಅದರಿಂದ ಯಾವುದೇ ಕ್ಯೂಗಳಿರುವುದಿಲ್ಲ ಹಾಗೂ ಜನರು ಇದರಿಂದ ಹೆಚ್ಚು ಪರಿಹಾರಗಳನ್ನು ಪಡೆಯಬಹುದು ಎಂದು ಸಹ ಕೇಂದ್ರ ಸಚಿವರು ಹೇಳಿದ್ದಾರೆ. ಆದರೆ ಅದಕ್ಕಾಗಿ ನಾವು ಸಂಸತ್ತಿನಲ್ಲಿ ಮಸೂದೆಯನ್ನು ತರಬೇಕಾಗಿದೆ.ಏಕೆಂದರೆ ಯಾರಾದರೂ ಟೋಲ್ ಪಾವತಿಸದಿದ್ದರೆ ಅವರಿಗೆ ದಂಡ ವಿಧಿಸಲು ನಮ್ಮ ಸಂವಿಧಾನದಲ್ಲಿ ಯಾವುದೇ ಕಾನೂನು ಲಭ್ಯವಿಲ್ಲ ಎಂದೂ ತಿಳಿಸಿದ್ದಾರೆ.

ಇನ್ನೊಂದೇ ವರ್ಷದಲ್ಲಿ ಪೆಟ್ರೋಲ್ ವಾಹನದ ಬೆಲೆಯಲ್ಲಿ ಸಿಗಲಿದೆ ಎಲೆಕ್ಟ್ರಿಕ್ ಕಾರು!

ಒಟ್ಟಾರೆ, ಟೋಲ್ ಸಂಗ್ರಹಕ್ಕೆ ಅತ್ಯುತ್ತಮ ತಂತ್ರಜ್ಞಾನವನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ ಮತ್ತು ಸಂಸತ್ತಿನಲ್ಲಿ ಮಹತ್ವದ ಕಾನೂನನ್ನು ತರುತ್ತೇವೆ ಎಂದು ನಿತಿನ್‌ ಗಡ್ಕರಿ ಹೇಳಿದರು. ಅಲ್ಲದೆ, ಹೊಸ ವ್ಯವಸ್ಥೆಯಡಿ ಟೋಲ್ ಸಂಗ್ರಹವನ್ನು ಜಾರಿಗೆ ತರುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, "6 ತಿಂಗಳೊಳಗೆ, ನಾನು ಇದನ್ನು ಮಾಡಲು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ. ಏಕೆಂದರೆ ಇದು ಇಂದಿನ ಅಗತ್ಯವಾಗಿದೆ. ಇದು ದೇಶದ ಜನರಿಗೆ ಮತ್ತು ಟ್ರಾಫಿಕ್ ಸಮಸ್ಯೆಯನ್ನು ಹೋಗಲಾಡಿಸಲು ಮುಖ್ಯವಾಗಿದೆ" ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ.