ಕೇಂದ್ರ ಹಣಕಾಸು ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ಆದಾಯ ಕೊರತೆ ಮತ್ತು ಹೆಚ್ಚುತ್ತಿರುವ ಸಾಲದ ಹೊರೆಯಿಂದಾಗಿ ಕರ್ನಾಟಕ ಸೇರಿದಂತೆ ಒಂಬತ್ತು ಪ್ರಮುಖ ರಾಜ್ಯಗಳು ಶೀಘ್ರದಲ್ಲೇ ತೀವ್ರ ಆರ್ಥಿಕ ಒತ್ತಡಕ್ಕೆ ಸಿಲುಕಲಿವೆ.

ನವದೆಹಲಿ (ಮೇ.1): ದೇಶದ ಪ್ರಮುಖ ರಾಜ್ಯಗಳು ಆರ್ಥಿಕ ಸಂಕಷ್ಟದತ್ತ ಮುನ್ನುಗ್ಗುತ್ತಿವೆಯೇ? ಕೇಂದ್ರ ಹಣಕಾಸು ಇಲಾಖೆಯ ಇತ್ತೀಚಿನ ವರದಿ ಇಂತಹದ್ದೊಂದು ಗಂಭೀರ ಮುನ್ಸೂಚನೆಯನ್ನು ನೀಡಿದೆ. ಆದಾಯ ಕೊರತೆ ಮತ್ತು ಹೆಚ್ಚುತ್ತಿರುವ ಸಾಲದ ಹೊರೆಯಿಂದಾಗಿ ಕರ್ನಾಟಕ ಸೇರಿದಂತೆ ಒಟ್ಟು 9 ರಾಜ್ಯಗಳು ಶೀಘ್ರದಲ್ಲೇ ಭಾರಿ ಹಣಕಾಸು ಒತ್ತಡಕ್ಕೆ ಸಿಲುಕಲಿವೆ ಎಂದು ಕೇಂದ್ರ ಎಚ್ಚರಿಸಿದೆ.

Add Asianetnews Kannada as a Preferred SourcegooglePreferred

ಕೇಂದ್ರ ಹಣಕಾಸು ಇಲಾಖೆಯ ವಿಶ್ಲೇಷಣೆಯ ಪ್ರಕಾರ, 2026-27ನೇ ಹಣಕಾಸು ಸಾಲಿನಲ್ಲಿ ದೇಶದ 18 ದೊಡ್ಡ ರಾಜ್ಯಗಳ ಪೈಕಿ ಅರ್ಧದಷ್ಟು ಅಂದರೆ 9 ರಾಜ್ಯಗಳು ಆರ್ಥಿಕ ಅಸ್ಥಿರತೆಯನ್ನು ಎದುರಿಸಲಿವೆ. ರಾಜಸ್ವ ಸಂಗ್ರಹದ ಕೊರತೆ ಮತ್ತು ಅನಿಯಂತ್ರಿತ ಸಾಲದ ಪ್ರಮಾಣವೇ ಈ ಆರ್ಥಿಕ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ.

ಯಾವ ರಾಜ್ಯದ ಸ್ಥಿತಿ ಎಷ್ಟು ಗಂಭೀರ?

ವರದಿಯ ಅನ್ವಯ ಅತಿ ಹೆಚ್ಚು ಆದಾಯ ಕೊರತೆ ಎದುರಿಸುತ್ತಿರುವ ರಾಜ್ಯಗಳ ಪಟ್ಟಿ ನೋಡುವುದಾದರೆ, ಹಿಮಾಚಲ ಪ್ರದೇಶ ಶೇ.2.4 ರಷ್ಟು ಕೊರತೆಯೊಂದಿಗೆ ಮೊದಲ ಸ್ಥಾನ ದಲ್ಲಿದೆ 2ನೇ ಸ್ಥಾನದಲ್ಲಿ ಪಂಜಾಬ್ (ಶೇ.2.2ಕೊರತೆ), 3ನೇ ಸ್ಥಾನದಲ್ಲಿ ಕೇರಳ ( ಶೇ2.1), 4ನೇ ಸ್ಥಾನದಲ್ಲಿ ಆಂಧ್ರಪ್ರದೇಶ, ರಾಜಸ್ಥಾನ ( ಶೇ 1.1), 5ನೇ ಸ್ಥಾನದಲ್ಲಿ ಹರಿಯಾಣ (ಶೇ 0.9), 6ನೇ ಸ್ಥಾನದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ( ಶೇ 0.7) ಹಾಗೂ ಛತ್ತೀಸ್‌ಗಢ (ಶೇ 0.3) ಸ್ಥಾನದಲ್ಲಿವೆ.

ಕರ್ನಾಟಕಕ್ಕೆ ಎಚ್ಚರಿಕೆ ಗಂಟೆ

ಆರ್ಥಿಕವಾಗಿ ಸದೃಢವೆಂದು ಪರಿಗಣಿಸಲ್ಪಟ್ಟಿರುವ ಕರ್ನಾಟಕವು ಶೇ. 0.7 ರಷ್ಟು ಆದಾಯ ಕೊರತೆಯೊಂದಿಗೆ ಆರನೇ ಸ್ಥಾನದಲ್ಲಿದೆ. ರಾಜ್ಯ ಸರ್ಕಾರವು ತನ್ನ ಸಾಲದ ಪ್ರಮಾಣವನ್ನು ನಿಯಂತ್ರಿಸದಿದ್ದರೆ ಮತ್ತು ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳದಿದ್ದರೆ ಮುಂಬರುವ ವರ್ಷಗಳಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆ ಎದುರಾಗುವ ಸಾಧ್ಯತೆಯಿದೆ ಎಂದು ಕೇಂದ್ರದ ವರದಿ ಸೂಚಿಸಿದೆ.